ಉಡುಪಿ ಬಸ್ ನಿಲ್ದಾಣದಲ್ಲಿ ಅವಳಿ ಮಕ್ಕಳ ಬಿಟ್ಟು ಹೋದ ಪೋಷಕರು!
ಉಡುಪಿ, ಜುಲೈ 27 : ಎರಡು ಮಕ್ಕಳನ್ನು ಬಿಟ್ಟು ದಂಪತಿಗಳು ಪರಾರಿಯಾಗಲು ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಬಸ್ ನಿಲ್ಧಾಣದಲ್ಲಿ ಈ ಘಟನೆ ನಡೆದ್ದಿದ್ದು, ದಂಪತಿಗಳನ್ನು ಬಾಗಲಕೋಟೆಯ ಮುಧೋಳ ಮೂಲದವರು ಎಂದು ಗುರುತಿಸಲಾಗಿದೆ.
ಮಕ್ಕಳನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ ದಂಪತಿ ಅರುಣ್ ಮತ್ತು ಭಾರತಿ. ಮಂಗಳೂರಿನಲ್ಲಿ ಕೆಲಸ ಮಾಡುವಾಗ ಇಬ್ಬರಿಗೂ ಪರಿಚಯವಾಗಿತ್ತು ಆರು ವರ್ಷದ ಹಿಂದೆ ಇವರಿಬ್ಬರು ವಿವಾಹವಾಗಿದ್ದರು. ಆದರೆ, ಅಂತರ್ ಜಾತಿ ವಿವಾಹವಾದ ಕಾರಣ ಮನೆಯಿಂದ ಹೊರಹಾಕಲಾಗಿತ್ತು.
ತೆರೆಯದ ಆಂಬ್ಯುಲೆನ್ಸ್ ಬಾಗಿಲು, ಮಗುವಿನ ದಾರುಣ ಸಾವು
ಬಾಗಲಕೋಟೆಯಲ್ಲೇ ಇದ್ದ ಜೋಡಿ, ಇತ್ತೀಚಿಗೆ ಇಬ್ಬರು ಅವಳಿ ಗಂಡುಮಕ್ಕಳನ್ನು ಪಡೆದಿದ್ದರು. ಶುಕ್ರವಾರ ಉಡುಪಿಗೆ ಬಸ್ ಮೂಲಕ ಬಂದಿದ್ದ ದಂಪತಿ ಇಬ್ಬರು ಮಕ್ಕಳನ್ನು ಬಿಟ್ಟು ಹೋಗಲು ಯತ್ನಿಸಿದ್ದಾರೆ, ಅಷ್ಟರಲ್ಲಿ ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಜನರು ಈ ಕುರಿತು ಸಾಮಾಜಿಕ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಪೋಷಕರ ಜೊತೆ ಮಾತುಕತೆ ನಡೆಸಿದ ಕಾರ್ಯಕರ್ತರು ಮಕ್ಕಳನ್ನು ಕರೆದೊಯ್ಯುವಂತೆ ಸೂಚಿಸಿದರು. ಆದರೆ, ಮಕ್ಕಳನ್ನು ಸಾಕಲು ಕಷ್ಟ ಎಂದು ಹೆತ್ತವರು ಅಲವತ್ತುಕೊಂಡರು.
ಅಂತಿಮವಾಗಿ ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಯಿತು.