ಉಡುಪಿ: ಕನ್ನಡ ಶಾಲಾ ಮಕ್ಕಳ ಪಾಲಿಗೆ ಬೆಳಕಾದ ಪಲಿಮಾರು ಪರ್ಯಾಯ ಮಠ
ಉಡುಪಿ, ಜುಲೈ.24: ಕನ್ನಡ ನಾಡಲ್ಲಿ ಕನ್ನಡ ಉಳಿಸಿ ಎಂಬ ಹೋರಾಟ ಎಲ್ಲೆಡೆ ನಡೆಯುತ್ತಿದ್ದು, ಕನ್ನಡ ಉಳಿಸಲು ನಡೆಯುತ್ತಿರುವ ಪ್ರಯತ್ನ ಮಾತ್ರ ಶೂನ್ಯ. ಆದರೆ ಇದೆಲ್ಲದರ ನಡುವೆ ಉಡುಪಿಯ ಪಲಿಮಾರು ಪರ್ಯಾಯ ಮಠ ಕನ್ನಡ ಶಾಲೆಗಳಿಗೂ, ಬಡಮಕ್ಕಳ ಪಾಲಿಗೂ ಬೆಳಕಾಗಿದೆ. ಅನುದಾನಿತ ಶಾಲೆಗಳಿಗೂ ವರವಾಗಿದೆ. ಅದರ ಫುಲ್ ಡೀಟೆಲ್ಸ್ ಇಲ್ಲಿದೆ.
ಒಂದು ಕಡೆಯಿಂದ ಕನ್ನಡ ಉಳಿಸಿ, ಕನ್ನಡ ಶಾಲೆ ಉಳಿಸಿ ಅನ್ನುವ ಕೂಗುಗಳು ಮಾತ್ರ ಮೊಳಗುತ್ತಿವೆ. ಆದರೆ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮಾತ್ರ ಒಂದೊಂದಾಗಿ ಬಾಗಿಲು ಮುಚ್ಚಿಕೊಳ್ಳುತ್ತಿವೆ. ಇನ್ನು ಅನುದಾನಿತ ಶಾಲೆಗಳ ಕಥೆಯೂ ಇದಕ್ಕೆ ಹೊರತಾಗಿಲ್ಲ.
'ಕಂಪ್ಯೂಟರ್ ಸಾಕ್ಷರತೆ ಕುರಿತು ಕನ್ನಡದಲ್ಲಿ ಮತ್ತಷ್ಟು ಪುಸ್ತಕ ಹೊರಬರಲಿ'
ಆದರೆ ಅಂತಹ ಶಾಲೆಗಳನ್ನು ಉಳಿಸುವ ಮತ್ತು ಪೋಷಿಸುವ ಯೋಜನೆಗಳಿಗೆ ಉಡುಪಿಯ ಕೃಷ್ಣ ಮಠ ಮುನ್ನುಡಿ ಬರೆದಿದೆ. ಅಷ್ಟಮಠಗಳ ಪೈಕಿ ಒಂದಾದ ಪಲಿಮಾರು ಮಠದ ಶ್ರೀಗಳು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದ್ದಾರೆ.
ಸೋದೆ ವಿಶ್ವವಲ್ಲಭ ಸ್ವಾಮೀಜಿ ಜಿಲ್ಲೆಯ ಮಕ್ಕಳಿಗಾಗಿ ಸಮವಸ್ತ್ರ ವಿತರಣೆ ಯೋಜನೆಯನ್ನು ಆರಂಭಿಸಿದ್ದು, ಪಲಿಮಾರು ಶ್ರೀ ಆ ಯೋಜನೆಯನ್ನು ಬೃಹತ್ ಮಟ್ಟದಲ್ಲಿ ಅನುಷ್ಠಾನಗೊಳಿಸಿದ್ದಾರೆ. ಆಂಗ್ಲಮಾಧ್ಯಮ ಮೋಹ, ಸರ್ಕಾರದ ನಿರ್ಲಕ್ಷದಿಂದ ಸಾಕಷ್ಟು ಕನ್ನಡ ಶಾಲೆಗಳು ಬೀಗ ಜಡಿದು ಅಂತಿಮ ಮೊಳೆ ಹೊಡೆದಿದೆ.
2017-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 9 ಅನುದಾನಿತ ಶಾಲೆಗಳು ಬಾಗಿಲು ಮುಚ್ಚಿಕೊಂಡ್ರೆ, 13 ಸರ್ಕಾರಿ ಶಾಲೆಗಳು ಬಂದ್ ಅಗಿದೆ. ಇನ್ನಷ್ಟೂ ಶಾಲೆಗಳು ಬಾಗಿಲು ಮುಚ್ಚಿಕೊಳ್ಳುವ ಹಂತದಲ್ಲಿದೆ. ಆದ್ರೆ ಉಡುಪಿ ಕೃಷ್ಣ ಮಠದ ಸ್ವಾಮಿಗಳು ಮಾತ್ರ ಸದ್ದಿಲ್ಲದೇ ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮ ಪಡುತ್ತಿದ್ದಾರೆ.
ಈ ಬಾರಿ ಪಲಿಮಾರು ಶ್ರೀಗಳು ತಮ್ಮ ಪರ್ಯಾಯ ಅವಧಿಯಲ್ಲಿ 100 ಅನುದಾನಿತ ಶಾಲೆಗಳ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ತಾರತಮ್ಯವಿಲ್ಲದೆ ಸಮವಸ್ತ್ರ ವಿತರಣೆ ಮಾಡಿದ್ದಾರೆ. ಸಮವಸ್ತ್ರ ಸಿದ್ದಪಡಿಸುವ ವೆಚ್ಚವನ್ನು ಕೂಡ ಮಠವೇ ವಹಿಸಿಕೊಂಡಿದೆ.
ಕೃಷ್ಣ ಮಠದೊಳಗೆ ಕೃಷ್ಣ ಪೂಜೆ ಮಾಡೊ ಕೈಗಳು, ಪರೋಕ್ಷವಾಗಿ ಶಾರದೆಯ ಆರಾಧನೆಯನ್ನು ನೆರವೇರಿಸುತ್ತಿದ್ದಾರೆ. ಈ ಹಿಂದೆ ಪಲಿಮಾರು ಶ್ರೀಗಳು ತನ್ನ ಪರ್ಯಾಯ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಅನ್ನದಾಸೋಹ ಪರಿಕಲ್ಪನೆ ಹುಟ್ಟುಹಾಕಿ ಕಾರ್ಯಗತ ಮಾಡಿದ್ದರು.
ಮುಂದೆ ರಾಜ್ಯ ಸರ್ಕಾರ ಕೂಡ ಅದೇ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿತು. ಒಟ್ಟಿನಲ್ಲಿ ಅಳಿವಿನ ಅಂಚಿಗೆ ಸರಿಯುತ್ತಿರುವ ಕನ್ನಡ ಶಾಲೆಗಳ ಉಳಿವಿಗಾಗಿ ಮಠದ ಕಡೆಯಿಂದ ಹೀಗೊಂದು ಮೌನ ಕ್ರಾಂತಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ.