ಗಮನಸೆಳೆದ ಪಡುಬಿದ್ರೆ ಗಣಪತಿ ದೇವಸ್ಥಾನದ ವಿಶೇಷ ಅಪ್ಪ ಸೇವೆ
ಉಡುಪಿ, ಆಗಸ್ಟ್.06: ಗಣಪತಿ ವಿಘ್ನ ನಿವಾರಕ. ಯಾವುದೇ ಒಳ್ಳೆಯ ಕೆಲಸ ಮಾಡುವ ಮೊದಲು ಗಣಪತಿಯ ಪ್ರಾರ್ಥನೆ ಮಾಡೋದು ಒಂದು ಸಂಪ್ರದಾಯ. ಅಲ್ಲಿಗೆ ಗಣಪನನ್ನು ನೆನೆದ ಮೇಲೆ ಅಪ್ಪವನ್ನು ಬಿಡಲಾಗಲ್ಲ ಅಲ್ಲವೇ? ಯಾಕೆಂದರೆ ಗಣಪನ ನೆಚ್ಚಿನ ಖಾದ್ಯ ಅಪ್ಪ.
ಅಂದಹಾಗೆ ಪಡುಬಿದ್ರೆಯ ನಡ್ಸಲದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ರೀತಿಯಲ್ಲಿ ಅಪ್ಪ ಸೇವೆ ನೆರವೇರಿತು. ಈ ಕ್ಷೇತ್ರಕ್ಕೆ ಸಾಕಷ್ಟು ಇತಿಹಾಸದ ನಂಟಿದ್ದು, ಋಷಿಮುನಿಗಳಿಂದ ಸ್ಥಾಪಿತವಾದ ಈ ದೇವಾಲಯಕ್ಕೆ ತುಳುನಾಡಿನಲ್ಲಿ ವಿಶೇಷ ಸ್ಥಾನವಿದೆ.
ಭೂಲೋಕದ ಸ್ವರ್ಗದಂತೆ ಕಂಗೊಳಿಸಿದ ಅಂಬಲಪಾಡಿ ಮಹಾಕಾಳಿ ದೇವಸ್ಥಾನ
ಹಿಂದೆ ಭೃಗು ಮುನಿಯವರಿಂದ ಮಹಾಲಿಂಗೇಶ್ವರ ಲಿಂಗವನ್ನು ಇಲ್ಲಿ ಸ್ಥಾಪನೆ ಮಾಡಲಾಯಿತು. ಜೊತೆಗೆ ತುಳುನಾಡಿನ ಸೃಷ್ಟಿಕರ್ತ ಎಂದೇ ಹೆಸರುವಾಸಿಯಾದ ಪರಶುರಾಮನಿಂದ ವಿಘ್ನ ನಿವಾರಕನಾದ ಗಣಪತಿಯ ಮೂರ್ತಿಯನ್ನು ರುದ್ರಾಕ್ಷಿ ಕಲ್ಲಿನಿಂದ ಕೆತ್ತಲಾಯಿತು. ಇದಿಷ್ಟು ಕ್ಷೇತ್ರದ ಹಿನ್ನಲೆ.
ಈ ಕ್ಷೇತ್ರದಲ್ಲಿರುವ ಗಣಪನಿಗೆ ವಿಶೇಷ ಶಕ್ತಿ ಇದೆ. ಪ್ರತಿ ನಿತ್ಯ ಗಣಪತಿಗೆ ಅಪ್ಪ ಸೇವೆ ತಪ್ಪಿದ್ದಲ್ಲ. ಅಪ್ಪ ಸೇವೆ ಇಲ್ಲಿನ ಸೇವೆಗಳಲ್ಲಿ ಪ್ರಮುಖವಾಗಿದ್ದು. ದಿನನಿತ್ಯ ಅಪ್ಪ ಸೇವೆ ಮಾಡಿಸೋ ಭಕ್ತರಿಗೆ ಅಚ್ಚರಿಯೊಂದು ಕಾದಿತ್ತು.
ಅದೇನಪ್ಪಾ ಅಂದ್ರೆ 12 ಸಾವಿರ ಭಕ್ತರು ಸೇರಿ ಸುಮಾರು ಲಕ್ಷಾಂತರ ಅಪ್ಪ ಸೇವೆಯನ್ನು ನೆರೆವೇರಿಸಿ ದೇವರಿಗೆ ಭಕ್ತಿಯನ್ನು ಸಲ್ಲಿಸಿದರು. ಪರ ಊರಿನಿಂದ ಬಂದ ಭಕ್ತಾದಿಗಳು ಈ ವಿಶೇಷ ಸೇವೆಯಲ್ಲಿ ಭಾಗವಹಿಸಿದ್ದರು.
ಪ್ರತೀ ವರ್ಷ ಈ ತಿಂಗಳಲ್ಲಿ ಗಣಪನಿಗೆ ವಿಶೇಷ ರೀತಿಯಲ್ಲಿ ಅಪ್ಪ ಸೇವೆ ಜರಗುತ್ತೆ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು, ಹೊಸತನ್ನೇ ಸೃಷ್ಟಿ ಮಾಡಿದರು ಎನ್ನುತ್ತಾರೆ ಇಲ್ಲಿನ ಅರ್ಚಕರು. ಒಟ್ಟಿನಲ್ಲಿ ಕರಾವಳಿಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ನಡ್ಸಲ ಗಣಪತಿ ದೇವಸ್ಥಾನ ಅಪ್ಪ ಸೇವೆಯಲ್ಲಿ ಭಕ್ತರಿಗೆ ಅಚ್ಚರಿ ಮೂಡಿಸಿ, ಎಲ್ಲರನ್ನೂ ತನ್ನತ್ತ ಸೆಳೆದಿದೆ.
ದಿನನಿತ್ಯ ನಡೆಯುವ ಅಪ್ಪ ಸೇವೆಯ ಜೊತೆ ಈ ತಿಂಗಳ ವಿಶೇಷ ಅಪ್ಪ ಸೇವೆ ಊರಿನ ಹಾಗೂ ಜನರ ಗಮನ ಸೆಳೆಯಿತು ಎಂದರೆ ತಪ್ಪಲ್ಲ.