ಉಡುಪಿಗೆ ಬಂದ ಟಾಲಿವುಡ್, ಬಾಲಿವುಡ್ ನಾಯಕಿ ಪೂಜಾ ಹೆಗ್ಡೆ ಸಂದರ್ಶನ
ಉಡುಪಿ, ಆಗಸ್ಟ್ 29: ಆಕೆಯ ಚೆಲುವು, ಅಭಿನಯ ಚಾತುರ್ಯಕ್ಕೆ ಬಾಲಿವುಡ್, ಟಾಲಿವುಡ್ ಬೆಕ್ಕಸ ಬೆರಗಾಗಿ ನೋಡುತ್ತಿದೆ. ಹೃತಿಕ್ ರೋಷನ್ ಜತೆಗೆ ನಟಿಸಿದ್ದ ಮೊಹಂಜೋದಾರೋ ಸಿನಿಮಾದ ನಾಯಕಿ ಪೂಜಾ ಹೆಗ್ಡೆ ಬಗ್ಗೆಯೇ ಹೇಳುತ್ತಿರುವುದು. ಆಕೆ ನಟಿಸಿದ ಮತ್ತೊಂದು ಸಿನಿಮಾ ಡಿಜೆ. ಅದರಲ್ಲಿ ನಾಯಕರಾಗಿದ್ದವರು ಅಲ್ಲು ಅರ್ಜುನ್.
ಸದ್ಯಕ್ಕಂತೂ ನಟಿ ಪೂಜಾ ಹೆಗ್ಡೆ ಬೇಡಿಕೆಯ ನಟಿ. ಬಾಲಿವುಡ್ ನ ಬಳಕುವ ಬಳ್ಳಿ ಪೂಜಾ ಹೆಗ್ಡೆ ಉಡುಪಿಯ ಮಾರಿಯಮ್ಮ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇಂದಿನ ವ್ಯವಸ್ಥೆ ಬದಲಾವಣೆಗೆ ಹೊಸಬರೇ ಬೇಕು, ಉಪೇಂದ್ರ ಸಂದರ್ಶನ
ಅಂದಹಾಗೆ, ಪೂಜಾ ಹೆಗ್ಡೆ ತುಳುನಾಡ ಕುವರಿ. ಹುಟ್ಟಿ- ಬೆಳೆದದ್ದು ಮಾತ್ರ ಮುಂಬೈಯಲ್ಲಿ. ಆದರೆ ತುಳು ಮನೆತನದ ಪರಂಪರೆ, ನಂಬಿಕೆಯನ್ನು ಪೂಜಾ ಕುಟುಂಬ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ತಮ್ಮ ಕುಟುಂಬದ ಮೂಲ ಸ್ಥಾನಕ್ಕೆ ಬಂದು ದೇವರು, ದೈವಗಳಿಗೆ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬಂದಿದ್ದಾರೆ.
ಪೂಜಾ ಹೆಗ್ಡೆ ಉಡುಪಿಯ ಕಾಪು ಮಾರಿಯಮ್ಮ ದೇವಸ್ಥಾನದಲ್ಲಿ ಮಂಗಳವಾರ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಒನ್ಇಂಡಿಯಾ ಕನ್ನಡ ನಡೆಸಿದ ಸಂದರ್ಶನ ಇಲ್ಲಿದೆ.
ಪ್ರಶ್ನೆ: ಹುಟ್ಟಿದ ಊರಿಗೆ ಬಂದಿದ್ದಕ್ಕೆ ವಿಶೇಷ ಕಾರಣ ಏನಾದರೂ ಇದೆಯಾ?
ಪೂಜಾ ಹೆಗ್ಡೆ: ದೇವರ ಪೂಜೆಗಾಗಿ ಊರಿಗೆ ಬಂದಿದ್ದೇನೆ. ಮನೆಗೆ ಬಂದು ಎರಡು ವರ್ಷಗಳಾಯ್ತು. ಆದ್ದರಿಂದ ಮನೆತನದ ಪ್ರತೀತಿಯಂತೆ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ದೇನೆ.
ಪ್ರಶ್ನೆ: ಸದ್ಯಕ್ಕೆ ಯಾವ ಸಿನಿಮಾದಲ್ಲಿ ನಟಿಸುತ್ತಾ ಇದ್ದೀರಿ, ಅವಕಾಶಗಳ ಬಗ್ಗೆ ಹೇಳಿ.
ಪೂಜಾ ಹೆಗ್ಡೆ: ಸದ್ಯಕ್ಕೆ ತೆಲುಗಿನ ಒಂದು ಚಿತ್ರದಲ್ಲಿ ನಟಿಸ್ತಾಯಿದ್ದೇನೆ. ಹಿಂದಿಯ ಮೂರು ಸ್ಕ್ರಿಪ್ಟ್ ಬಂದಿದೆ. ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದ್ರೆ ಮಾತ್ರ ಒಪ್ಪಿಕೊಳ್ಳುತ್ತೇನೆ.
ಪ್ರಶ್ನೆ: ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಅಭಿನಯಿಸ್ತೀರಾ?
ಪೂಜಾ ಹೆಗ್ಡೆ: ಒಳ್ಳೆ ನಿರ್ದೇಶಕರು, ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲೂ ಖಂಡಿತಾ ನಟಿಸುತ್ತೇನೆ.
ಪ್ರಶ್ನೆ: ಮದುವೆಗೆ ಪ್ರಸ್ತಾವ ಬಂದಿದೆಯಾ, ಆ ಬಗ್ಗೆ ಯೋಚಿಸಿದ್ದೀರಾ?
ಪೂಜಾ ಹೆಗ್ಡೆ: ಮದುವೆ ಬಗ್ಗೆ ಯೋಚಿಸುವಷ್ಟು ನನಗೆ ವಯಸ್ಸಾಗಿಲ್ಲ. ನನ್ನ ಮುಂದೆ ದೊಡ್ಡ ದೊಡ್ಡ ಕನಸುಗಳಿವೆ. ನಾನು ಇನ್ನೂ ಹೆಸರು ಮಾಡಬೇಕಿದೆ.