ವೀರಪ್ಪ ಮೊಯ್ಲಿಯವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರದ್ಧಾಂಜಲಿ ಭಾಗ್ಯ
ಉಡುಪಿ, ಏಪ್ರಿಲ್ 19: ಕಾರ್ಕಳದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಎದ್ದಿರುವ ಅಸಮಾಧಾನ ಈಗಲೂ ಮುಂದುವರೆದಿದೆ. ಕಾರ್ಕಳ ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್. ಗೋಪಾಲ್ ಭಂಡಾರಿಗೆ ಟಿಕೆಟ್ ನೀಡಿದ ಕ್ರಮವನ್ನು ಇನ್ನೋರ್ವ ಆಕಾಂಕ್ಷಿ ಉದಯಕುಮಾರ್ ಶೆಟ್ಟಿ ಬೆಂಬಲಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಮೊನ್ನೆ ಕಾರ್ಕಳದಲ್ಲಿ , ನಿನ್ನೆ ಹೆಬ್ರಿಯಲ್ಲಿ ಮತ್ತು ಇವತ್ತು ಉಡುಪಿಯ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ಬೆಂಬಲಿಗರು ಟಿಕೆಟ್ ಹಂಚಿಕೆ ಮರುಪರಿಶೀಲನೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.
ಮಧ್ಯೆ ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಮೊನ್ನೆ ಕಾರ್ಕಳದಲ್ಲಿ ಮೊಯ್ಲಿ ಅಣಕು ಶವಯಾತ್ರೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಈಗ ಮೊಯ್ಲಿಯವರಿಗೆ ಶ್ರದ್ದಾಂಜಲಿ ಅಂತ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರವನ್ನು ಹರಿಯಬಿಟ್ಟಿದ್ದಾರೆ.
ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು, ಮೊಯ್ಲಿ ವಿರುದ್ದ ಭಾರೀ ಆಕ್ರೋಶ
ಭಾವಪೂರ್ಣ ಶ್ರದ್ದಾಂಜಲಿ. ಜನನ 12-01-1940, ಮರಣ 15-04-2018 ಎಂದು ಬರೆದಿರುವ ಈ ಶ್ರದ್ದಾಂಜಲಿಯ ಭಾವಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಮೊದಲು ಎತ್ತಿನಹೊಳೆ ಯೋಜನೆ ಜಾರಿ ಸಂದರ್ಭದಲ್ಲೂ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿಯವರ ವಿರುದ್ಧ ಕರಾವಳಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಕಾರ್ಕಳ ಕ್ಷೇತ್ರದಾದ್ಯಂತ ಉದಯಕುಮಾರ್ ಶೆಟ್ಟಿ ಬೆಂಬಲಿಗರು ಮೊಯ್ಲಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ತಮ್ಮ ಶಿಷ್ಯ ಗೋಪಾಲ್ ಭಂಡಾರಿಯವರಿಗೆ ಟಿಕೆಟ್ ಕೊಡಿಸುವ ಮೂಲಕ ಮೊಯ್ಲಿ ಉದಯಕುಮಾರ್ ಶೆಟ್ಟಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂಬುದು ಈ ಭಾಗದ ಕಾರ್ಯಕರ್ತರ ಆರೋಪವಾಗಿದೆ.
ಇದೇ ವೇಳೆ ಬುಧವಾರ ಗೋಪಾಲ್ ಭಂಡಾರಿಯವರು ತಮ್ಮ ಬಗ್ಗೆ ಮತ್ತು ವೀರಪ್ಪ ಮೊಯಿಲಿ ಬಗ್ಗೆ ಶೆಟ್ಟಿ ಕಾರ್ಯಕರ್ತರು ದೂಷಣೆ ಮಾಡುತ್ತಿರುವುದರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ
ಕಾಂಗ್ರೆಸ್ ಕಚೇರಿ ಮುತ್ತಿಗೆ
ಎರಡು ದಿನಗಳ ಪ್ರತಿಭಟನೆ ಬಳಿಕ ಇಂದು ಉಡುಪಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಬೆಂಬಲಿಗರು, ಟಿಕೆಟ್ ಹಂಚಿಕೆ ಮರು ಪರಿಶೀಲನೆ ಮಾಡುವಂತೆ ಮನವಿ ಮಾಡಿದರು.
ಉಡುಪಿ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು, ಸಹಿ ಸಂಗ್ರಹ ಮಾಡಿ ಜಿಲ್ಲಾಧ್ಯಕ್ಷರಿಗೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ, ನಾಳೆಯೊಳಗೆ ಉದಯ ಕುಮಾರ್ ಬೆಂಬಲಿಗರು ಕೊಟ್ಟ ಮನವಿ ಕೆಪಿಸಿಸಿಗೆ ಕಳುಹಿಸುತ್ತೇನೆ. ಮೊನ್ನೆಯಿಂದ ನಡೆಯುತ್ತಿರುವ ಬೆಳವಣಿಗೆಗಳು ನಾಯಕರ ಗಮನಕ್ಕೆ ಬಂದಿವೆ. ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.