ಎನ್ಎಸ್ ಯುಐ ದ.ಕ. ಕಾರ್ಯದರ್ಶಿ ವಿಗ್ರಹ ಕಳ್ಳಸಾಗಣೆ ಕೇಸಲ್ಲಿ ಅಂದರ್
ಉಡುಪಿ, ಫೆಬ್ರವರಿ 26 : ಜಿಲ್ಲೆಯ ಕುಂದಾಪುರ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ವಿಗ್ರಹ ಕಳ್ಳ ಸಾಗಣೆಯ ಜಾಲವೊಂದನ್ನು ಕುಂದಾಪುರ ಪೊಲೀಸರು ಭೇದಿಸಿ, ಕೋಟ್ಯಂತರ ರುಪಾಯಿ ಬೆಲೆ ಬಾಳುವ ಜೈನ ತೀರ್ಥಂಕರರ 4 ಮೂರ್ತಿ ವಶಪಡಿಸಿಕೊಂಡಿದ್ದಾರೆ.
ಕೋಟೇಶ್ವರ ದೇವಸ್ಥಾನ ಬಳಿ ವಿಗ್ರಹ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ದಾಳಿ ನಡೆಸಿ, ವಿಗ್ರಹಗಳೊಂದಿಗೆ ಎನ್ಎಸ್ ಯುಐ ಮುಖಂಡ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಮಂಗಳೂರು: ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಚಿನ್ನ ವಶ, 4 ಬಂಧನ
ಬಂಧಿತರನ್ನು ಮಂಗಳೂರಿನ ಪಡೀಲ್ ನಿವಾಸಿ ನೆವೀಲ್ ವಿಲ್ಲಿ ಮಸ್ಕರೇನಸ್, ಶಿವಮೊಗ್ಗ ತಾಳಗುಪ್ಪದ ಅನಿಲ್ ಪುಟಾರ್ಡೋ, ಮಂಗಳೂರಿನ ಕುಲ ಶೇಖರದ ಆಸ್ಟನ್ ಸಿಕ್ವೇರಾ, ಕುಂದಾಪುರದ ಜಾನ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿ ಮಂಗಳೂರು ಕುಲಶೇಖರದ ಆಸ್ಟನ್ ಸಿಕ್ವೇರಾ ದಕ್ಷಿಣ ಕನ್ನಡ ಎನ್ಎಸ್ ಯುಐ ಘಟಕದ ಕಾರ್ಯದರ್ಶಿ. ಆಸ್ಟನ್ ಸಿಕ್ವೇರಾ ಕಾಂಗ್ರೆಸ್ ನಾಯಕರೊಂದಿಗೆ ಇರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಧಿತರಿಂದ 4 ಜೈನ ತೀರ್ಥಂಕರ ಮೂರ್ತಿಗಳನ್ನು ವಶಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಹಿಂದೆಯೂ ವಿಗ್ರಹ ಕಳ್ಳತನ ಹಾಗೂ ಅಕ್ರಮ ಸಾಗಾಟ ನಡೆಸುತ್ತಿದ್ದ ಕುರಿತು ಮಾಹಿತಿ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.