ಮದುಮಕ್ಕಳ ಜಾತ್ರೆ ಕೋಟಿಲಿಂಗೇಶ್ವರನ ಕೊಡಿಹಬ್ಬ ಕಂಡಿರಾ?
ಉಡುಪಿ, ಡಿಸೆಂಬರ್ 12: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಡಿ ಹಬ್ಬ ಹಲವು ನಂಬಿಕೆಗಳ ಪ್ರತೀಕ. ಮದುವೆಯಾಗದವರಿಗೆ ಇಲ್ಲಿನ ಕೋಟಿಲಿಂಗೇಶ್ವರ ಅಭಯ ನೀಡುವ ದೇವರು. ಇಲ್ಲಿನ ರಥೋತ್ಸವ ಅದ್ಧೂರಿತನಕ್ಕೆ ಇನ್ನೊಂದು ಹೆಸರು.
"ಚಿಕ್ಕತಿರುಪತಿ"ಯ ಗಿಡದ ಜಾತ್ರೆಯಲ್ಲಿ ಏನೆಲ್ಲಾ ವೈಶಿಷ್ಟ್ಯ...
ಹೊಸದಾಗಿ ಮದುವೆಯಾದವರಿಗೆ ತಮ್ಮ ದಾಂಪತ್ಯದ ಬಗ್ಗೆ ಸಾವಿರ ಕನಸುಗಳಿರುತ್ತವೆ. ಈ ದೇವ ಸನ್ನಿಧಿಯಲ್ಲಿ ದಾಂಪತ್ಯಗೀತೆ ಆರಂಭವಾದರೆ ಪೂರ್ಣ ಜೀವನ ಸುಖವಾಗಿರುತ್ತದೆ ಅನ್ನುವುದು ಇಲ್ಲಿನ ನಂಬಿಕೆ. ಹಾಗಂತಲೇ ಸಾವಿರ ಸಾವಿರ ಮಂದಿ ಕುಂದಾಪುರದ ಕೋಟಿಲಿಂಗೇಶ್ವರ ದರ್ಶನಕ್ಕೆ ಬರುತ್ತಾರೆ. ಇಂದು ಕೂಡ ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಸೇರಿದ್ದರು.
ಕರಾವಳಿ- ಮಲೆನಾಡು ಭಾಗದ ಅತೀದೊಡ್ಡ ಜಾತ್ರೆ ಅಂದ್ರೆ ಈ ಕೊಡಿ ಹಬ್ಬ. ಏಳು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಮೊದಲ ದಿನ ನವದಂಪತಿಗಳ ಜಾತ್ರೆ ನಡೆಯುತ್ತದೆ. ಹೊಸದಾಗಿ ಮದುವೆಯಾದ ದಂಪತಿಗಳು ಕೈ ಕೈಹಿಡಿದು ಬಂದು, ಮನದಲ್ಲಿ ಹರಕೆ ಹೊತ್ತು ದೇವರಿಗೆ ಕೈ ಮುಗಿಯುತ್ತಾರೆ. ಪುಷ್ಕರಣಿಗೆ ಪ್ರದಕ್ಷಿಣೆ ಬಂದು ಸುತ್ತಲೂ ಅಕ್ಕಿ ಚೆಲ್ಲಿ ಹರಕೆ ತೀರಿಸುತ್ತಾರೆ. ಇಲ್ಲಿಂದ ಮುಂದೆ ಹೊಸ ಜೀವನ ಆರಂಭಿಸುತ್ತಾರೆ.
ಮೈಲಾರ ಜಾತ್ರೆ ನಾಚಿಸುವ ಕಡಲೆಕಾಯಿ ಪರಿಷೆ: ಈ ಬಾರಿ ಕಡಲೆ ಕಮ್ಮಿ, ಬರೀ ಜನ..ಜನ
ಸಂತಾನದ ಆಸೆ ಹೊತ್ತವರೇ ಹೆಚ್ಚು ಸಂಖ್ಯೆಯಲ್ಲಿ ಬರುವುದರಿಂದ ಇದನ್ನು ಕುಡಿ ಹಬ್ಬ ಅಂತಲೂ ಕರೆಯುತ್ತಾರೆ. ಜಾತ್ರೆಗೆ ಬಂದವರೆಲ್ಲಾ ಕಬ್ಬಿನ ಜಲ್ಲೆ ತೆಗೆದುಕೊಂಡು ಹೋಗೋದು ವಾಡಿಕೆ. ಕಬ್ಬಿನ ಜಲ್ಲೆಯ ಕೊಡಿ ಕೊಂಡೊಯ್ಯುವುದರಿಂದಲೂ ಇದನ್ನು ಕೊಡಿ ಹಬ್ಬ ಎಂದು ಕರೆಯುತ್ತಾರೆ. ಅತೀ ದೊಡ್ಡ ಬ್ರಹ್ಮರಥವನ್ನು ಭಕ್ತರೆಲ್ಲಾ ಸೇರಿ ಎಳೆಯುತ್ತಾರೆ. ಇಲ್ಲಿ ಶಿವ ದೇವರು ಕೋಟಿ ಲಿಂಗ ಸ್ವರೂಪದಲ್ಲಿ ನೆಲೆ ನಿಂತಿದ್ದಾನೆ ಅನ್ನುವುದು ನಂಬಿಕೆ. ಗ್ರಾಮೀಣ ಜನರು ಕೊಡಿ ಹಬ್ಬಕ್ಕಾಗಿ ವರ್ಷವೆಲ್ಲಾ ಕಾಯುತ್ತಾರೆ. ಏಳು ದಿನದ ಜಾತ್ರೆಯಲ್ಲಿ ನಿತ್ಯವೂ ಬಂದು ಪಾಲ್ಗೊಂಡು ಸಂಭ್ರಮಿಸುತ್ತಾರೆ.