ಇದು ಅಂತಿಂಥ ಜಾತ್ರೆಯಲ್ಲ, ಪೆರ್ಡೂರಿನ ಮದುಮಕ್ಕಳ ಜಾತ್ರೆ!
ಉಡುಪಿ, ಆಗಸ್ಟ್ 19: ಉಡುಪಿಯ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದಲ್ಲಿ ಶಿವಸಂಕ್ರಮಣದ ಆಕರ್ಷಣೆಯೆಂದರೆ ಜಾತ್ರೆ. ಅದು ಮಾಮೂಲಿ ಜಾತ್ರೆಯಲ್ಲ, ಮದುಮಕ್ಕಳೇ ತುಂಬಿರುವ ಜಾತ್ರೆ. ಮದುಮಕ್ಕಳ ಜಾತ್ರೆಯೆಂದೇ ಕರೆಸಿಕೊಳ್ಳುವ ಈ ದಿವಸ ನವವಿವಾಹಿತರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ.
ಕೋಳಿ ಮರಿ ಎಸೆದು ಹರಕೆ ತೀರಿಸುವ ವಡಗಾವಿ ಜಾತ್ರೆ...
ವರ್ಷಕ್ಕೊಮ್ಮೆ ಶಿವಸಂಕ್ರಮಣದಲ್ಲಿ ಉಡುಪಿಯಲ್ಲದೆ ಅಕ್ಕಪಕ್ಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ನವ ದಂಪತಿಗಳು ಇಲ್ಲಿಗೆ ಆಗಮಿಸುತ್ತಾರೆ. ಶಿವ ಸಂಕ್ರಮಣ ದಿನದಂದು ಅನಂತಪದ್ಮನಾಭನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರೆ ತಮ್ಮ ದಾಂಪತ್ಯ ಸುಖಕರವಾಗಿರುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಈ ವರ್ಷ ಕೂಡ ಅನಂತ ಪದ್ಮನಾಭನ ಸನ್ನಿಧಿಗೆ ಆಗಮಿಸಿದ ನೂರಾರು ನವದಂಪತಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ನವದಂಪತಿಗಳು ಪೂಜೆ ಸಲ್ಲಿಸುವುದರೊಂದಿಗೆ ಹರಕೆ ಹೊರುವುದು ಮತ್ತು ಹರಕೆ ತೀರಿಸುವುದನ್ನೂ ಇಲ್ಲಿ ಮಾಡುತ್ತಾ ಬಂದಿದ್ದಾರೆ. ಬಾಳೆ ಹಣ್ಣಿಗೊಲಿಯುವ ಭಗವಂತ ಎಂದೇ ಪ್ರಸಿದ್ಧವಾಗಿರುವ ಪದ್ಮನಾಭನಿಗೆ ಇಲ್ಲಿ ನಿತ್ಯವೂ ಬಾಳೆಹಣ್ಣಿನ ನೈವೇದ್ಯ ನಡೆಯುವುದು ಇನ್ನೊಂದು ವಿಶೇಷ. ಪದ್ಮನಾಭನ ಸನ್ನಿಧಿಗೆ ಆಗಮಿಸುವ ಭಕ್ತಾದಿಗಳು ಬಾಳೆಹಣ್ಣಿನೊಂದಿಗೇ ಇಲ್ಲಿಗೆ ಬರುತ್ತಾರೆ. ದಿನಕ್ಕೊಂದರಂತೆ ಮುನ್ನೂರರವತ್ತೈದು ಬಾಳೆಹಣ್ಣಿನ ನೈವೇದ್ಯವೂ ಇಲ್ಲಿ ನಡೆಯುತ್ತದೆ. ಹೀಗಾಗಿ ಜಾತ್ರೆಯ ತುಂಬ ದಂಪತಿ ಬಾಳೆಹಣ್ಣನ್ನು ಹಿಡಿದುಕೊಂಡು ಬರುವ ದೃಶ್ಯ ಇಲ್ಲಿ ಸಾಮಾನ್ಯ.
ಕಳೆದ ಸಂಕ್ರಮಣದ ನಂತರ ಮದುವೆಯಾದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಸಂಸಾರಸ್ಥರೂ ಬಂದು ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಮದುಮಕ್ಕಳ ಜಾತ್ರೆಯೆಂದೇ ಜನಜನಿತವಾಗಿರುವ ಪೆರ್ಡೂರು ಸನ್ನಿಧಿಯಲ್ಲಿ ತಮ್ಮ ಬಾಳು ಹಸನುಗೊಳ್ಳಲಿ ಎಂದು ಬೇಡಿಕೊಳ್ಳುತ್ತಾರೆ.