ಕೃಷ್ಣ ಕೃಷ್ಣಾ ..! ಉಡುಪಿ ಕೃಷ್ಣನೇ ಈಗ ಹೊಸ ವಿವಾದದಲ್ಲಿ
ಇತ್ತೀಚಿನ ದಿನಗಳಲ್ಲಿ ವಿವಾದ ಎನ್ನುವುದು ಉಡುಪಿಗೆ ಮತ್ತು ಉಡುಪಿ ಮಠಾಧೀಶರಿಗೆ ಬಯಸದೇ ಬಂದ ದೌರ್ಭಾಗ್ಯ. ಏನೇ ಮಾಡಿದರೂ, ಮಾತಾಡಿದರೂ ವಿವಾದ ಕಟ್ಟಿಟ್ಟಬುತ್ತಿ.
ಕನಕನ ಕಿಂಡಿ, ಮಡೆಸ್ನಾನ, ಸಹಪಂಕ್ತಿ ಭೋಜನ, ಕೃಷ್ಣ ಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವುದು, ದಲಿತರಿಗೆ ಮಾಧ್ವ ದೀಕ್ಷೆ ಹೀಗೆ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದ್ದ ಉಡುಪಿ ಕ್ಷೇತ್ರ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದೆ.
ಈ ವಿವಾದ 13ನೇ ಶತಮಾನದಲ್ಲಿ ಆಚಾರ್ಯ ಮಧ್ವರು ಸ್ಥಾಪಿಸಿದರು ಎನ್ನಲಾಗುವ ಉಡುಪಿ ಕೃಷ್ಣನ ಮೂಲ ಪೀಠವನ್ನೇ ಅಲುಗಾಡಿಸುವಂತದ್ದು. ಹೌದು, ಈಗಿರುವ ವಿವಾದ ಉಡುಪಿಯಲ್ಲಿ ನೆಲೆ ನಿಂತಿರುವುದು ಪೊರದೊಡೆಯ ಶ್ರೀಕೃಷ್ಣ ಪರಮಾತ್ಮನಲ್ಲ ಬದಲಿಗೆ ಅದು ಸುಬ್ರಮಣ್ಯ ಎನ್ನುವುದು.
ವಾಸ್ತು ಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಇತಿಹಾಸ ತಜ್ಞರು ಉಡುಪಿಯಲ್ಲಿನ ವಿಗ್ರಹ ಕೃಷ್ಣನ ವಿಗ್ರಹವಲ್ಲ ಬದಲಿಗೆ ಅದು ಸುಬ್ರಮಣ್ಯ ಸ್ವಾಮಿಯ ವಿಗ್ರಹ, ಉಡುಪಿ ಮಠಾಧೀಶರು ತಮಗೆ ಬೇಕಾದಂತೆ ಮಾರ್ಪಾಡು ಮಾಡಿಕೊಂಡು ಪೂಜಾ ವಿಧಿವಿಧಾನ ಸಲ್ಲಿಸುತ್ತಿದ್ದಾರೆಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಮೇಲುಕೋಟೆಯ ಜ್ಯೋತಿಷಿ ಶ್ರೀನಿವಾಸನ್ ಎನ್ನುವವರು ಈ ಸಂಬಂಧ ಮಾತನಾಡುತ್ತಾ, ಸಂಪ್ರದಾಯವನ್ನು ಉಡುಪಿಯಲ್ಲಿ ತಿರುಚಲಾಗಿದೆ. ಅಸಲಿಗೆ ಅಲ್ಲಿ ಇರುವುದು ಕೃಷ್ಣನ ವಿಗ್ರಹವಲ್ಲ, ಅಲ್ಲಿರುವುದು ಸುಬ್ರಮಣ್ಯನ ವಿಗ್ರಹ.
ಬೆಂಗಳೂರಿನ ಕೆಲವು ಇತಿಹಾಸ ತಜ್ಞರು ಇದೇ ಮಾತನ್ನು ಎರಡು ಮೂರು ವರ್ಷಗಳಿಂದ ಹಿಂದೆನೇ ಹೇಳಿದ್ದಾರೆ. ಹಲಾವರು ವಿವಾದಗಳಲ್ಲಿ ಉಡುಪಿ ಸಿಲುಕುತ್ತಿರುವುದರಿಂದ ಈ ವಿಷಯಕ್ಕೆ ಇಷ್ಟು ದಿನ ಪ್ರಾಮುಖ್ಯತೆ ಸಿಕ್ಕಿರಲಿಲ್ಲ. ಈಗ ಇದು ಸುದ್ದಿಯಾಗುತ್ತಿದೆ ಎಂದು ಶ್ರೀನಿವಾಸನ್ ಹೊಸ ಬಾಂಬ್ ಎಸೆದಿದ್ದಾರೆ.
ಅವರು ಮಂಡಿಸುವ ಇಂಟರೆಸ್ಟಿಂಗ್ ಮತ್ತಷ್ಟು ವಾದ ಏನು? ಸ್ಲೈಡಿನಲ್ಲಿ ನೋಡಿ
ಉಡುಪಿ ಶ್ರೀಕೃಷ್ಣ
ಶ್ರೀಕೃಷ್ಣ ಗೋಪ್ರಿಯ, ಕಾಳಿಂಗಮರ್ಧನನ ಅವತಾರ, ತುಳಸಿ ಪ್ರಿಯ, ಕಡಗೋಲು ಇರುತ್ತದೆ. ದೇಶದ ಇತರ ಕೃಷ್ಣನ ದೇವಾಲಯಗಳಾದ ಗುರುವಾಯೂರು, ಮಥುರಾದಲ್ಲಿ ಇದರಲ್ಲಿ ಯಾವುದಾದರೂ ಒಂದು ಕೃಷ್ಣ ವಿಗ್ರಹದ ಬಳಿ ಕಾಣಸಿಗುತ್ತದೆ. ಸುಬ್ರಮಣ್ಯನ ವಿಗ್ರಹವನ್ನು ಹೋಲುವ ಉಡುಪಿ ಕೃಷ್ಣನ ವಿಗ್ರಹ ಅಸಲಿಗೆ ಸುಬ್ರಮಣ್ಯನ ವಿಗ್ರಹ . ಉಡುಪಿಯಲ್ಲಿ ನವಿಲುಗರಿ ಮೂಲಕವೂ ಅಲಂಕಾರ ಮಾಡುವ ಪದ್ದತಿಯಿದೆ. ನವಿಲು ಸುಬ್ರಮಣ್ಯನ ವಾಹನ ಎನ್ನುವುದು ಬೆಂಗಳೂರಿನ ರಮೇಶ್ ಶರ್ಮಾ ಎನ್ನುವ ವಿದ್ವಾಂಸರ ವಾದ.
ಹಾಗಿದ್ದರೆ ಇತಿಹಾಸ
ಆದರೆ, ಶತಮಾನಗಳ ಕೆಳಗೆ ವಾದಿರಾಜ ತೀರ್ಥರು ಉಡುಪಿಯಲ್ಲಿ ಕೃಷ್ಣನ ಪೂಜಿಸುತ್ತಿದ್ದರು. ಅದಕ್ಕಾಗಿ ಅಷ್ಠ ಮಠಗಳನ್ನು ಸ್ಥಾಪಿಸಿದರು. ಕನಕದಾಸನ ಭಕ್ತಿಗೆ ಮೆಚ್ಚಿ ಕೃಷ್ಣ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿದ. ಚೈತನ್ಯ ಮಹಾಪ್ರಭುಗಳು ಶತಮಾನಗಳ ಕೆಳಗೆ ತಮ್ಮ ಗ್ರಂಥದಲ್ಲಿ ಉಡುಪಿಗೆ ಬಂದು ಕೃಷ್ಣನ ಪೂಜಿಸಿರುವ ಉಲ್ಲೇಖದ ಬಗ್ಗೆ ಈ ವಾದ ಮಂಡಿಸುವವರು ಸೂಕ್ತ, ಸ್ಪಷ್ಟ ಉತ್ತರ ನೀಡುತ್ತಿಲ್ಲ.
ಉಡುಪಿ ಶಿರೂರು ಶ್ರೀಗಳು ಹೇಳುವುದೇನು
ಅಷ್ಠ ಮಠಗಳಲ್ಲಿ ಒಂದಾದ ಶಿರೂರು ಶ್ರೀಗಳ ಪ್ರಕಾರ, ಇದೊಂದು ಪ್ರಚಾರ ಬಯಸುವವರ ಗೊತ್ತು ಗುರಿಯಿಲ್ಲದ ವಾದ. ವಾದಿರಾಜರ, ಕನಕದಾಸರ ಇತಿಹಾಸ ಸುಳ್ಳೇ? ಉಡುಪಿಯನ್ನು ಪರಶುರಾಮ ಕ್ಷೇತ್ರ ಎನ್ನುತ್ತಾರೆ. ಉಡುಪಿಯಲ್ಲಿರುವುದು ಕೃಷ್ಣ ವಿಗ್ರಹ ಅಲ್ಲ ಎನ್ನುವುದಕ್ಕೆ ಏನಿದೆ ಇವರಲ್ಲಿ ಪುರಾವೆ. ಬೇಕಾಬಿಟ್ಟಿ ಹೇಳಿಕೆ ನೀಡಿ ಇತಿಹಾಸವನ್ನು ತಿರುಚ ಬೇಡಿ. ಭಕ್ತಾದಿಗಳನ್ನು ಗೊಂದಲಕ್ಕೆ ಈಡಾಗುವಂತೆ ಮಾಡಬೇಡಿ.
ಕನಕನ ಮಂದಿರ
ಕೆಲವು ದಿನಗಳ ಹಿಂದೆ ಉಡುಪಿ ರಥಬೀದಿ ಆವರಣದಲ್ಲಿರುವ ಕನಕದಾಸನ ವಿಗ್ರಹಕ್ಕೆ ಸಮಪರ್ಕವಾಗಿ ಪೂಜೆ ನಡೆಯುತ್ತಿಲ್ಲ ಎಂದು ವರದಿಯಾಗಿ ದೊಡ್ದ ಸುದ್ದಿಯಾಗಿತ್ತು. ತದನಂತರ ಕಾಗಿನೆಲೆ ಮಠದಿಂದ ಉಡುಪಿವರೆಗೆ ಸಾಗಿದ ರಥಯಾತ್ರೆ ಕನಕ ಜಯಂತಿಯಂದು ಉಡುಪಿಯಲ್ಲಿ ಸಂಪನ್ನಗೊಂಡಿತ್ತು. ಅಲ್ಲಿ ಕಾಗಿನೆಲೆ ಶಾಖಾ ಮಠದ ಪೀಠಾಧಿಪತಿಗಳಿಗೆ ಪೇಜಾವರ ಶ್ರೀಗಳು ಕನಕನಿಗೆ ಸಲ್ಲಿಸುವ ಪೂಜಾ ಕ್ರಮಗಳನ್ನು ವಿವರಿಸಿದ್ದರು. ಅಲ್ಲಿಗೆ ವಿಷಯ ತಣ್ಣಗಾಗಿತ್ತು.
ಕುರುಬರಿಗೆ ಮಾಧ್ವ ದೀಕ್ಷೆ
ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುವ ಪೇಜಾವರರ ಹೇಳಿಕೆ ಭಾರೀ ಸಂಚಲವನ್ನು ಉಂಟುಮಾಡಿತ್ತು. ನಿಡುಮಾಮಿಡಿ ಶ್ರೀಗಳಿಂದ ಆದಿಯಾಗಿ ರಾಜ್ಯದ ಹಲವಾರು ಶ್ರೀಗಳು ಪೇಜಾವರರ ವಿರುದ್ದ ತಿರುಗಿ ಬಿದ್ದಿದ್ದರು.