ಪ್ರವಾಹ ಪೀಡಿತ ಉಡುಪಿಗೆ ತಕ್ಷಣ NDRF ತಂಡ ರವಾನೆ: ಸಚಿವ ಕೋಟ ಸೂಚನೆ, ಕಾರ್ಯಾಚರಣೆ ಚುರುಕು
ಉಡುಪಿ, ಸೆಪ್ಟೆಂಬರ್ 20: ಭಾರಿ ಮಳೆಗೆ ತುತ್ತಾಗಿ ಹಲವು ಮನೆಗಳು ಜಲಾವೃತಗೊಂಡಿರುವ ಉಡುಪಿಗೆ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯಿಂದ NDRF ತಂಡ ರವಾನೆ ಮಾಡುವಂತೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯವರಿಗೆ ಸಚಿವ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದ್ದು, ತಕ್ಷಣ ಉಡುಪಿಯ ಪ್ರವಾಹ ಸಂಕಷ್ಟಕ್ಕೆ ಧಾವಿಸುವಂತೆ ಆದೇಶಿಸಿದ್ದಾರೆ.
ಭಾರಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಕೃಷ್ಣನಗರಿ: 4 ದಶಕಗಳ ಬಳಿಕ ಪ್ರವಾಹ
ಭಾರಿ ಮಳೆಗೆ ಉಡುಪಿಯ ಮಲ್ಪೆಯಲ್ಲಿ 3 ಬೋಟ್ ಮುಳುಗಡೆಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಕಲ್ಲು ಬಂಡೆ ಮೇಲೆ ಆಶ್ರಯ ಪಡೆದು ಮೀನುಗಾರರು ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ NDRF ತಂಡವನ್ನು ಉಡುಪಿಗೆ ಕಳುಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಜಿ.ಜಗದೀಶ್ ರಿಂದ ವೀಕ್ಷಣೆ
ಜಲಾವೃತಗೊಂಡ ನಗರದ ತಗ್ಗು ಪ್ರದೇಶಗಳಿಗೆ ಇಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜೊತೆಗಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಭಾನುವಾರ ಸಹ ಜಿಲ್ಲೆಯ ಇತರೆ ಪ್ರವಾಹ ಪೀಡಿತ ಪ್ರದೇಶಗಳಿಗೂ ಜಿಲ್ಲಾಧಿಕಾರಿ ಭೇಟಿ ನೀಡಲಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಹಲವು ಗ್ರಾಮಗಳಲ್ಲಿ ಪ್ರವಾಹದ ನೀರು ಏರತೊಡಗಿದ್ದು, ಕೆಲವು ಗ್ರಾಮಗಳ ಸಂಪರ್ಕಗಳು ಕಡಿತಗೊಂಡಿವೆ. ಸ್ಥಳೀಯರು, ಅಗ್ನಿಶಾಮಕ ದಳ ಮತ್ತು ಎನ್.ಡಿ.ಆರ್.ಎಫ್ ತಂಡ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕೃಷ್ಣನಗರಿ ಉಡುಪಿ ತತ್ತರಿಸಿ ಹೋಗಿದೆ
ಭಾರಿ ಮಳೆಯ ಆರ್ಭಟಕ್ಕೆ ಅಕ್ಷರಶಃ ಕೃಷ್ಣನಗರಿ ಉಡುಪಿ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳಿಂದ ಸತತ ಮಳೆಯಾಗುತ್ತಿದ್ದು, ಉಡುಪಿ ನಗರದ ಹಲವು ಬೀದಿಗಳು ಜಲಾವೃತಗೊಂಡಿವೆ. ಶನಿವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಉಡುಪಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜಲಾವೃತಗೊಂಡ ಮನೆಗಳಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.
4 ದಶಕಗಳ ಬಳಿಕ ಉಡುಪಿಯಲ್ಲಿ ಪ್ರವಾಹ
ಮಠದ ಕೆರೆ, ಬೈಲಕೆರೆ, ನಿಟ್ಟೂರು, ಕೊಡಂಕೂರು, ಚಿಟ್ಪಾಡಿ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು, 4 ದಶಕಗಳ ಬಳಿಕ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನೆರೆ ಉಂಟಾಗಿದೆ. ತಗ್ಗು ಪ್ರದೇಶದಲ್ಲಿ ಸಿಕ್ಕಿಬಿದ್ದವರನ್ನು, ಅಗ್ನಿಶಾಮಕ ದಳದ ಸಿಬ್ಬಂದಿಗಳು ದೋಣಿಯಲ್ಲಿ ರಕ್ಷಿಸಿ ಸ್ಥಳಾಂತರ ಮಾಡಿದ್ದಾರೆ. ಉಡುಪಿ ನಗರದ ಹಲವು ಅಂಗಡಿ, ಗೋದಾಮುಗಳಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ಕೃಷ್ಣಮಠದ ಆವರಣ ಕೂಡಾ ಸಂಪೂರ್ಣ ಜಲಾವೃತ
ಇನ್ನು ಉಡುಪಿ ಕೃಷ್ಣಮಠದ ಪಾರ್ಕಿಂಗ್ ಆವರಣ ಕೂಡಾ ಸಂಪೂರ್ಣ ಜಲಾವೃತಗೊಂಡಿದ್ದು, ಜಿಲ್ಲೆಯ ವಿವಿಧ ಕಡೆಗಳಲ್ಲಿ ಇದೇ ರೀತಿ ಕೃತಕ ನೆರೆ ಉಂಟಾದ ಬಗ್ಗೆ ವರದಿಗಳಾಗುತ್ತಿವೆ. ಇದೇ ಮೊದಲ ಬಾರಿ ಎಂಬಂತೆ ಉಡುಪಿ-ಮಣಿಪಾಲದ ರಾಜ್ಯ ಹೆದ್ದಾರಿಯ ಹಲವೆಡೆ ನೀರು ನಿಂತಿದ್ದು, ಮುಂಜಾನೆ ಹೊತ್ತಿಗೆ ಉಡುಪಿ-ಮಣಿಪಾಲ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆಯ ಹಿನ್ನೆಲೆಯಲ್ಲಿ ಭಾನುವಾರ ಕೂಡಾ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
Recommended Video