ಸುವರ್ಣ ತ್ರಿಭುಜ ಬೋಟನ್ನು ಹೊರತೆಗೆದರೆ ಸತ್ಯಾಂಶ ತಿಳಿಯಲಿದೆಯೇ?
ಉಡುಪಿ, ಮೇ 09: ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳನ್ನು ಮಾಲ್ವಾನ್ ಸಮೀಪ ಆಳ ಸಮುದ್ರದಲ್ಲಿ ನೌಕಾ ಪಡೆ ಪತ್ತೆ ಹಚ್ಚಿತ್ತು. ಪತ್ತೆಯಾದ ಅವಶೇಷಗಳು ಸುವರ್ಣ ತ್ರಿಭುಜ ಬೋಟ್ ನದ್ದು ಎಂದು ನೌಕಾ ಪಡೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಈಗ ನೌಕಾಪಡೆಯ ಅಧಿಕಾರಿಗಳು ಕಡಲಾಳದಲ್ಲಿರುವ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ.
ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ ಬಗ್ಗೆ ಕಾರವಾರ ನೌಕಸೇನೆ ಹೇಳಿದ್ದೇನು?
ಮಲ್ಪೆಯಿಂದ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ಮಾಲ್ವಾನ್ನ ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್ 15 ರಂದು ಮುಳುಗಡೆಯಾಗಿ ನಾಪತ್ತೆಯಾಗಿತ್ತು.ನಾಲ್ಕು ತಿಂಗಳ ಹುಡುಕಾಟದ ನಂತರ ಇತ್ತೀಚೆಗಷ್ಟೇ ಬೋಟಿನ ಅವಶೇಷಗಳನ್ನು ನೌಕಾ ಪಡೆ 60 ಮೀಟರ್ ಆಳದಲ್ಲಿ ಪತ್ತೆ ಹಚ್ಚಿತ್ತು.
ಮಲ್ಪೆ ಬಂದರಿನಿಂದ ಹೊರಟಿದ್ದ ಬೋಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯ 5, ಉಡುಪಿಯ ಇಬ್ಬರು ಸೇರಿ 7 ಮಂದಿ ಮೀನುಗಾರಿಕೆಗೆ ತೆರಳಿದ್ದು ಎಲ್ಲರೂ ಬೋಟ್ ನಲ್ಲಿ ಜಲಸಮಾಧಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಅಧಿಕೃತವಾಗಿ ನೌಕಾದಳದವರು ಮಾಹಿತಿ ಹೊರಹಾಕಬೇಕಿದೆ.
ಮಲ್ಪೆಯಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ
ಬೋಟ್ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸುವರ್ಣ ತ್ರಿಭುಜಕ್ಕೆ ಹಡಗೊಂದು ಡಿಕ್ಕಿ ಹೊಡೆದು ಅಪಘಾತವಾಗಿರುವುದು ಈಗಾಗಲೇ ಅಧಿಕೃತವಾಗಿದೆ. ಯಾವ ಹಡಗು ಸುವರ್ಣ ತ್ರಿಭುಜ ಬೋಟ್ ಗೆ ಡಿಕ್ಕಿ ಹೊಡೆದಿತ್ತು ಎನ್ನುವ ಪ್ರಶ್ನೆ ಈಗ ಎದ್ದಿದ್ದು, ನೌಕಾದಳದ ಐ.ಎನ್.ಎಸ್ ಕೊಚ್ಚಿ ಹಡಗು ಹೊಡೆದಿರುವ ಶಂಕೆಯನ್ನು ಪುರಾವೆ ಸಹಿತ ಮೀನುಗಾರರು ನೀಡಿದ್ದಾರೆ.
ಮೀನುಗಾರರು ಜಲಸಮಾಧಿಯಾಗಿದ್ದಾರೆಯೇ?
ಈ ಬಗ್ಗೆ ನೌಕಾದಳದವರು ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಇದಲ್ಲದೇ ಬೋಟ್ ಮುಳುಗಿರುವುದನ್ನು ದೃಢಪಡಿಸಿರುವ ನೌಕಾದಳದ ಏಳುಜನ ಮೀನುಗಾರರು ಬದುಕಿದ್ದಾರೆಯೇ ಅಥವಾ ಜಲಸಮಾಧಿಯಾಗಿದ್ದಾರೆಯೇ ಎಂಬುದನ್ನು ಕೂಡ ತಿಳಿಸಿಲ್ಲ. ಇದರ ಜೊತೆಗೆ ಸಮುದ್ರದಾಳದಲ್ಲಿ ಹೂತುಹೋಗಿರುವ ಬೋಟನ್ನು ಮೇಲೆತ್ತಬೇಕೆಂಬ ಆಗ್ರಹ ಮೀನುಗಾರರಿಂದ ಕೇಳಿಬಂದಿದ್ದು, ಬೋಟನ್ನು ಹೊರಗೆ ತೆಗೆದರೆ ಸತ್ಯಾಂಶ ಹೊರಬರಲಿದೆ ಎಂದು ಮೀನುಗಾರರು ವಿಶ್ವಾಸವ್ಯಕ್ತಪಡಿಸಿದ್ದಾರೆ.
ದೃಢಪಡಿಸಿದ್ದ ಕದಂಬ ನೇವಲ್ ಬೇಸ್ ಅಧಿಕಾರಿಗಳು
ಇತ್ತೀಚೆಗೆ ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದ ಆಳ ಸಮುದ್ರದಲ್ಲಿ ನೌಕಾಪಡೆ ಪತ್ತೆ ಮಾಡಿದ್ದ ಬೋಟ್ ನ ಅವಶೇಷ ಸುವರ್ಣ ತ್ರಿಭುಜದ್ದು ಎಂದು ಕದಂಬ ನೇವಲ್ ಬೇಸ್ ಅಧಿಕಾರಿಗಳು ದೃಢಪಡಿಸಿದ್ದರು.
ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?
ನಿಶಾ ಜೇಮ್ಸ್ ಮನವಿ ಮಾಡಿದ್ದರು
ಬೋಟ್ ನ ಅವಶೇಷ ಪತ್ತೆಯಾಗಿರುವ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ನೌಕಸೇನೆಯ ಕಾರವಾರ ನೇವಲ್ ಬೇಸ್ ಅಧಿಕಾರಿಗಳಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮೇ 3ರಂದು ಮನವಿ ಸಲ್ಲಿಸಿದ್ದರು. ಇದಕ್ಕೆ ನೇವಲ್ ಬೇಸ್ ಅಧಿಕಾರಿಗಳು ಬೋಟು ಹಾಗೂ ಮೀನುಗಾರರ ಪತ್ತೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯ ಕುರಿತ ವಿವರವನ್ನು ಎಸ್ಪಿಯವರಿಗೆ ನೀಡಿದ್ದರು.
60 ಮೀಟರ್ ಆಳದಲ್ಲಿ ಬೋಟಿನ ಅವಶೇಷ ಪತ್ತೆ
ನೌಕಾ ಪಡೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಏಪ್ರಿಲ್ 30ರಿಂದ ಮೇ 2ರವರೆಗೆ ನೌಕಾಪಡೆಯ ಹಡಗು ಐಎನ್ಎಸ್ ನಿರೀಕ್ಷಕ್ ಮಹಾರಾಷ್ಟ್ರದ ಮಾಲ್ವಾನ್ ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದೆ. ಕಾರ್ಯಚರಣೆಯ ಕೊನೆಯ ದಿನ ಸಮುದ್ರದ ಸುಮಾರು 60 ಮೀಟರ್ ಆಳದಲ್ಲಿ ಬೋಟಿನ ಅವಶೇಷ ಪತ್ತೆಯಾಗಿದೆ. ಕಾರ್ಯಾಚರಣೆಗೆ ಮುಳುಗು ತಜ್ಞರು ಹಾಗೂ ಸೋನಾರ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ ಎಂದು ನೌಕಾ ಪಡೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.