ಹೈವೇ ಆಯ್ತು ಡೈವೇ: ಆಮೆಗತಿ ಕಾಮಗಾರಿಗೆ ಜನ ಆದ್ರು ಹೈರಾಣಾ
ಉಡುಪಿ, ಜೂನ್. 26: ಸುರತ್ಕಲ್ ಕುಂದಾಪುರ ಹೈವೇ 66 ಡೈ ವೇ ಯಾಗುತ್ತಿದೆ. ಜನ ನಿತ್ಯ ಪ್ರಾಣ ಕೈಯ್ಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನವಯುಗ ಕಂಪೆನಿ ಹೈವೇ ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆಸುತ್ತಿರುವುದೇ ಇದಕ್ಕೆ ಕಾರಣ.
ಈ ಕಂಪೆನಿ ಕಳೆದ ಆರು ವರ್ಷಗಳಿಂದ ಉಡುಪಿಯಲ್ಲಿ ಫ್ಲೈಓವರ್, ಅಂಡರ್ ಪಾಸ್ ಕಾಮಗಾರಿ ನಡೆಸುತ್ತಿದ್ದು, ಆಮೆಗತಿಯ ಕಾಮಗಾರಿಗೆ ಜನ ಹೈರಾಣಗೊಂಡಿದ್ದಾರೆ. ಕಿರಿದಾದ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನ ಸಂಚಾರದಿಂದ ಟ್ರಾಫಿಕ್ ಕಿರಿಕಿರಿ ನಿತ್ಯ ತಪ್ಪಿದ್ದಲ್ಲ.
ಅನುಮೋದನೆ ಸಿಕ್ಕಿರುವ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ?
ಮುಂಬೈನ ಪನ್ವೇಲ್ ನಿಂದ ಕನ್ಯಾಕುಮಾರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಉಡುಪಿಯಿಂದ ಹಾದು ಹೋಗುತ್ತದೆ. ಮಂಗಳೂರಿನ ತಲಪಾಡಿಯಿಂದ ಉಡುಪಿ ಜಿಲ್ಲೆಯ ಕುಂದಾಪುರದವರೆಗೂ ಈ ಹೆದ್ದಾರಿ ಚತುಷ್ಪದಗೊಳಿಸುವ ಗುತ್ತಿಗೆಯನ್ನು ನವಯುಗ ಕನ್ಸ್ಟ್ರಕ್ಷನ್ ಕಂಪೆನಿ 2010ರಲ್ಲಿ ಒಪ್ಪಂದ ಪಡೆದಿತ್ತು.
ಆದರೆ 674 ಕೋಟಿ ರೂ ವೆಚ್ಚದ ಕಾಮಗಾರಿ ಆರಂಭಿಸಿ 8 ವರ್ಷಗಳೇ ಕಳೆದ್ರೂ ಇನ್ನೂ ಪೂರ್ತಿಯಾಗಿಲ್ಲ. ಉಡುಪಿಯ ಕುಂದಾಪುರದ ಶಾಸ್ತ್ರೀ ಸರ್ಕಲ್ ನಲ್ಲಿ ಮತ್ತು ಕರಾವಳಿ ಬೈಪಾಸ್ ನಲ್ಲಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಿ ಆರು ವರ್ಷ ಕಳೆಯಿತು. ಆದ್ರು ಪೂರ್ತಿಯಾಗಿಲ್ಲ.
ಮಳೆ ಬಂದರೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿ ಕೆರೆಯಾಗಿ ಬಿಡುತ್ತೆ. ಸಾರ್ವಜನಿಕರಿಂದ ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಕುಂದಾಪುರ ಎ.ಸಿ ಭೂಬಾಲನ್ ನವಯುಗ ಕಂಪೆನಿಗೆ ನಿಧಾನಗತಿಯ ಕಾಮಗಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 ಅಡಿಯಲ್ಲಿ ಸೆಕ್ಷನ್ 133 ಪ್ರಕಾರ ಪಬ್ಲಿಕ್ ನ್ಯೂಸೆನ್ಸ್ ನಡೆಯುತ್ತಿದೆ ಎಂದು ಕಂಪೆನಿಗೆ ನೋಟಿಸ್ ಜಾರಿಯಾಗಿದೆ.
ಆದರೆ ಕಂಪೆನಿ ಮಾತ್ರ ಬೆರಳೆಣಿಕೆಯಷ್ಟು ಕಾರ್ಮಿಕರನ್ನು ಬಳಸಿ ಕಾಮಗಾರಿ ನಡೆಸುತ್ತಿದೆ. ಪ್ರಾರಂಭದಲ್ಲಿ ಹೆದ್ದಾರಿ ಅಗಲೀಕರಣ ಕೆಲಸವನ್ನು ನವಯುಗ ಕಂಪೆನಿ ಚುರುಕಿನಿಂದ ನಡೆಸಿದರೂ ಬಳಿಕ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಸರ್ಕಾರ ಗುತ್ತಿಗೆ ಅವಧಿಯನ್ನು ವಿಸ್ತರಿಸುತ್ತಾ ಬಂದಿದೆಯೇ ಹೊರತು ಕಾಮಗಾರಿಯನ್ನು ಪೂರ್ತಿಗೊಳಿಸಿಲ್ಲ.
ಆದಷ್ಟು ಬೇಗ ಕಾಮಗಾರಿ ಮುಗಿಸಿ ಜನರ ಸೇವೆಗೆ ಅಂಡರ್ ಪಾಸ್, ಫ್ಲೈಒವರ್ ಲಭ್ಯವಾಗಲಿ ಅನ್ನುವ ನೀರೀಕ್ಷೆ ಜನರದ್ದಾಗಿದೆ.