ಹತ್ತು ವರ್ಷವಾದರೂ ಅರೆಬರೆ ಕಾಮಗಾರಿ, ಫ್ಲೈ ಓವರ್ ಗಾಗಿ ಪ್ರತಿಭಟನೆ
ಉಡುಪಿ, ಡಿಸೆಂಬರ್ 4: ಹತ್ತು ವರ್ಷಗಳಿಂದ ನಡೆಯುತ್ತಿರುವ ಕುಂದಾಪುರದ ಫ್ಲೈ ಓವರ್ ಅರೆಬರೆ ಕಾಮಗಾರಿ ವಿರೋಧಿಸಿ ಇಂದು ರಾಷ್ಟ್ರೀಯ ಹೆದ್ದಾರಿ 66 ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
ಹತ್ತು ವರ್ಷ ಕಳೆದರೂ ಮುಗಿದಿಲ್ಲ ಕುಂದಾಪುರದ ಈ ಫ್ಲೈ ಓವರ್ ಕಾಮಗಾರಿ
ಕುಂದಾಪುರದಿಂದ ಕೂಳೂರುವರೆಗೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿರುವ ನವಯುಗ ಕಂಪೆನಿ ಕಾಮಗಾರಿ ಕುರಿತು ಸಾಕಷ್ಟು ಅವಾಂತರಗಳನ್ನು ಸೃಷ್ಟಿಮಾಡಿದೆ. ಅದರಲ್ಲಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಾಸ್ತ್ರೀ ಸರ್ಕಲ್ ಮುಂಭಾಗದಲ್ಲಿ ಹತ್ತು ವರ್ಷಗಳ ಹಿಂದೆ ಸುಲಲಿತ ಸಂಚಾರಕ್ಕಾಗಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಯನ್ನು ನವಯುಗ ಸಂಸ್ಥೆ ವಹಿಸಿಕೊಂಡಿತ್ತು.
ಆದರೆ ಕುಂದಾಪುರದ ಫ್ಲೈ ಓವರ್ ಹತ್ತು ವರ್ಷಗಳಿಂದ ರಾಷ್ಟ್ರೀಯ ಸ್ಮಾರಕದಂತೆ ಅರ್ಧಕ್ಕೆ ನಿಂತು ಅಪಘಾತಗಳು, ಸಂಚಾರಿ ಸಮಸ್ಯೆ ಸೃಷ್ಟಿಸುತ್ತಿರುವ ಕುರಿತು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದುವರೆಗೂ ಫ್ಲೈ ಓವರ್ ವಿಚಾರವಾಗಿ ಧ್ವನಿ ಎತ್ತದ ಜನಪ್ರತಿನಿಧಿಗಳು, ಸಂಸದೆ ಶೋಭ ಕರಂದ್ಲಾಜೆ ವಿರುದ್ಧವೂ ಘೋಷಣೆ ಕೂಗಲಾಯಿತು. ಆದಷ್ಟು ಶೀಘ್ರದಲ್ಲಿ ಫ್ಲೈ ಓವರ್ ಗೆ ಮುಕ್ತಿ ನೀಡಿ, ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ಈ ಸಂದರ್ಭ ಪ್ರತಿಭಟನಾಕಾರರು ನೀಡಿದರು.