ಮೋದಿಯಷ್ಟು ಸಮರ್ಥರಲ್ಲದ ಯೋಗಿ ಪ್ರಧಾನಿ ಅಭ್ಯರ್ಥಿ ಆಗಬಾರದು: ಪೇಜಾವರ ಶ್ರೀ
Recommended Video
ಉಡುಪಿ, ಡಿಸೆಂಬರ್ 13: ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಡ ಬಳಿಕ ಬಿಜೆಪಿ ಪಾಳಯದಲ್ಲಿ ತಳಮಳ ಆರಂಭವಾಗಿದೆ. ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ 2019ರ ಲೋಕ ಸಭಾ ಚುನಾವಣೆಗೆ ತನ್ನ ತಂತ್ರಗ್ರಾರಿಕೆ ಬದಲಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದೆ.
ಈ ಮಧ್ಯೆ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಪಂಚರಾಜ್ಯ ಚುನಾವಣೆಯ ಸೋಲು ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ಗಂಟೆ ಎಂದು ಅವರು ಆಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಫಲಿತಾಂಶವು ಪ್ರಧಾನಿ ಮೋದಿಗೆ ಎಚ್ಚರಿಕೆ ಕರೆ ಗಂಟೆಯಾಗಿದೆ. ದೇಶದ ಆರ್ಥಿಕ ಸುಧಾರಣೆ ಮತ್ತು ರಾಮಮಂದಿರಕ್ಕೆ ಪ್ರಧಾನಿ ಮೋದಿ ಆದ್ಯತೆ ಕೊಡಲಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿಗೆ ಶಾಕ್, ರಾಮಮಂದಿರ ವಿಚಾರಕ್ಕೆ ಇನ್ನು ಬ್ರೇಕ್; ಇನ್ನೇನಿದ್ದರೂ 'ಪ್ಲ್ಯಾನ್ ಬಿ'!
ತಮಿಳು ನಟ ಹಾಗೂ ಮೋದಿ ಅವರಿಗೆ ಆಪ್ತರಾದ ರಾಜನೀಕಾಂತ್ ಕೂಡ ಇಂಥದ್ದೇ ಅಭಿಪ್ರಾಯ ಪಟ್ಟಿದ್ದರು. ಬಿಜೆಪಿಯು ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂದಿದ್ದರು. ಅಂದಹಾಗೆ, ಪೇಜಾವರ ಶ್ರೀಗಳು ಇನ್ನೇನು ಹೇಳಿದರು ಎಂಬುದನ್ನು ಮುಂದೆ ಓದಿ.
ಸಮಾನ ವಿಚಾರ ಧಾರೆಯ ಪಕ್ಷಗಳ ಜತೆ ಮೈತ್ರಿ ಆಗಲಿ
ರಾಮ ಮಂದಿರ ನಿರ್ಮಾಣ ವಿಚಾರವು ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು. ಎನ್ ಡಿಎ ಮೈತ್ರಿಕೂಟ ಉಳಿಸಲು ಮಂದಿರ ನಿರ್ಮಾಣ ನಿರ್ಧಾರದಿಂದ ಹಿಂದೆಯೂ ಸರಿಯಬಹುದು. ಮೋದಿ ಅವರು ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು. ಸಮಾನ ವಿಚಾರಧಾರೆ ಉಳ್ಳ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಳ್ಳಬಾರದು
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಳ್ಳಬೇಡಿ ಎಂದು ಹೇಳಿದ ಪೇಜಾವರ ಶ್ರೀ, ಚಂದ್ರಬಾಬು ನಾಯ್ಡು ಅವರ ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟ ಆಗಲಿದೆ. ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ಮಾಜಿ ಪ್ರಧಾನಿ ದಿ. ವಾಜಪೇಯಿ ನೀತಿಯನ್ನು ಪ್ರಧಾನಿ ಮೋದಿ ಅನುಸರಿಸಬೇಕು ಎಂದು ಕರೆ ನೀಡಿದರು.
ಮೋದಿ ಬಗ್ಗೆ ಮೊದಲಿದ್ದ ನಿರೀಕ್ಷೆ ಈಗಿಲ್ಲ
ಪ್ರಧಾನಿ ಮೋದಿ ಕೆಲವು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಮೋದಿ ಬಗ್ಗೆ ಮೊದಲಿದ್ದ ನಿರೀಕ್ಷೆ ಈಗ ಜನರಲ್ಲಿ ಇಲ್ಲ. ಜನರು ನಿರೀಕ್ಷೆ ಇಟ್ಟಷ್ಟು ಕೆಲಸ ದೇಶದಲ್ಲಿ ಆಗಿಲ್ಲ ಎಂದು ಹೇಳಿದ ಅವರು, ನೋಟು ನಿಷೇಧದ ಫಲ ಜನಸಾಮಾನ್ಯರಿಗೆ ಮುಟ್ಟಿಲ್ಲ ಎಂದು ಅಭಿಪ್ರಾಯ ಪಟ್ಟರು.
ಆದಿತ್ಯನಾಥ್ ಪ್ರಧಾನಿ ಅಭ್ಯರ್ಥಿ ಆಗಬಾರದು
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಅಭ್ಯರ್ಥಿ ಆಗಬಾರದು ಎಂದು ಹೇಳಿದ ಅವರು, ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿ ಆಗಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೋದಿಯಷ್ಟು ಸಮರ್ಥ ಅಲ್ಲ ಎಂದು ಹೇಳಿದ ಅವರು, ಆದಿತ್ಯನಾಥರು ರಾಜಕಾರಣಿಯಲ್ಲ, ಅವರು ಒಬ್ಬ ಸಂತ. ಯೋಗಿ ಆದಿತ್ಯನಾಥ್ ಉತ್ತರಪ್ರದೇಶದಲ್ಲಿ ಇಷ್ಟು ಮಾಡುವುದೇ ವಿಶೇಷ ಎಂದು ಹೇಳಿದರು.