ಕ್ರೈಸ್ತರು, ಮುಸ್ಲಿಮರಿಗೆ ಭೋಜನ ಕೂಟ ಆಯೋಜಿಸ್ತೀವಿ: ಪೇಜಾವರ ಶ್ರೀ
ಉಡುಪಿ, ಜೂನ್ 15 : ಈದ್ ಉಲ್ ಫಿತ್ರ್ ಹಿನ್ನೆಲೆಯಲ್ಲಿ ಶುಕ್ರವಾರ ಮುಸ್ಲಿಮರು ಪೇಜಾವರ ಶ್ರೀಗಳಾದ ವಿಶ್ವೇಶ್ವರ ತೀರ್ಥರನ್ನು ಭೇಟಿಯಾದರು. ಪೇಜಾವರ ಮಠದಲ್ಲಿ ಶ್ರೀಗಳನ್ನು ಭೇಟಿಯಾಗಿ, ಸ್ವಾಮೀಜಿಗೆ ಫಲವನ್ನು ನೀಡಿ, ಗೌರವಿಸಿ ಆಶೀರ್ವಾದ ಪಡೆದರು.
ಇನ್ನು ಪೇಜಾವರ ಶ್ರೀಗಳು ಈದ್ ಉಲ್ ಫಿತ್ರ್ ಹಬ್ಬದ ಶುಭಾಶಯವನ್ನು ಸಲ್ಲಿಸಿ ಫಲ, ಖರ್ಜೂರವನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಪೇಜಾವರ ಸ್ವಾಮೀಜಿ, ಇಫ್ತಾರ್ ಕೂಟವೇ ಆಗಬೇಕಿಲ್ಲ, ಸ್ನೇಹ ಕೂಟ ಯಾವಾಗ ಬೇಕಾದರೂ ಮಾಡಬಹುದು. ಉತ್ತರ ಭಾರತ ಪ್ರವಾಸದಲ್ಲಿ ಇದ್ದುದರಿಂದ ಈ ಭಾರೀ ಅವಕಾಶ ಸಿಕ್ಕಿಲ್ಲ ಎಂದರು.
ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?
ಇತರ ಕಾರ್ಯಕ್ರಮಗಳು ನಿಗದಿ ಆಗಿತ್ತು. ಹೀಗಾಗಿ ರಮ್ಜಾನ್ ಸಮಯದಲ್ಲಿ ಸ್ನೇಹ ಕೂಟ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ನೇಹ ಕೂಟ ಮಾಡುತ್ತೇವೆ. ಕ್ರೈಸ್ತರು, ಮುಸಲ್ಮಾನರನ್ನು ಈ ಸ್ನೇಹ ಕೂಟಕ್ಕೆ ಕರೆಯುತ್ತೇವೆ. ಯೋಗ್ಯ ಸಂದರ್ಭ ನೋಡಿ ಸ್ನೇಹ ಕೂಟ ಮಾಡುತ್ತೇವೆ. ಈ ಬಾರಿಯ ಸ್ನೇಹ ಕೂಟಕ್ಕೆ ಯಾರ ವಿರೋಧವು ಇರಲಿಲ್ಲ ಎಂದರು.
ನಮ್ಮ ವಿರೋಧವಿಲ್ಲ ಎಂದು ಸಂಘದ ಪ್ರಮುಖರೇ ಹೇಳಿದ್ದರು. ಆದರೆ ಕಳೆದ ಬಾರಿ ಹಿಂದೂಗಳಲ್ಲೆ ಕೆಲವರು, ನೀವು ಮಾಡಿದ್ದು ತಪ್ಪು ಎಂದು ಹೇಳಿದ್ದರು. ನಮ್ಮ ಪರಮಗುರುಗಳು ಪರ್ಯಾಯ ಪೂರ್ವದಲ್ಲಿ ಹಾಜೀ ಅಬ್ದುಲ್ಲಾ ಅವರಿಂದ ಪಾದ ಪೂಜೆ ಸ್ವೀಕಾರ ಮಾಡಿದ್ದಾರೆ. ನಾವು ಅವರನ್ನು ಕರೆಸಿ ಊಟ ಹಾಕಿದರೆ ಏನು ತಪ್ಪಾಗುತ್ತದೆ ಎಂದು ಪ್ರಶ್ನೆ ಮಾಡಿದ್ದೆ ಎಂದು ತಿಳಿಸಿದರು.
ಹಿಂದೂಗಳು ಕೆಲ ಬೇಡಿಕೆ ನಡೆಸಬೇಕು. ಮುಸಲ್ಮಾನರು ನಮ್ಮ ಕೆಲ ಬೇಡಿಕೆ ನಡೆಸಬೇಕು. ಹೀಗಾಗಿ ಸ್ನೇಹಕೂಟ, ಮಾತುಕತೆ ನಡೆಯುತ್ತಿದ್ದರೆ ಮತ್ತಷ್ಟು ಸಮನ್ವಯ ಬೆಳೆಯಲು ಅನುಕೂಲ. ನಮ್ಮಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಜಕಾರಣಿಗಳು ಮಾಡುವುದೆಲ್ಲಾ ಮುಸ್ಲಿಂ ತುಷ್ಟೀಕರಣಕ್ಕೆ, ವೋಟಿಗಾಗಿ. ಆದರೆ ನಮ್ಮದು ಹಾಗಲ್ಲ. ಎಲ್ಲರ ಜೊತೆ ಸೌಹಾರ್ದ ಇರಬೇಕು ಎಂದು ಪೇಜಾವರ ಶ್ರೀ ಹೇಳಿದರು.
ಸರ್ವಧರ್ಮೀಯರನ್ನು ಕರೆದು ಭೋಜನ ಆಯೋಜಿಸುತ್ತೇವೆ: ಪೇಜಾವರ ಶ್ರೀ
ಇದೇ ಸಂದರ್ಭ ಮಾತನಾಡಿದ ಮುಸ್ಲಿಂ ಮುಖಂಡ ಅನ್ಸಾರ್ ಅಹಮ್ಮದ್, ಪ್ರತಿ ವರ್ಷದಂತೆ ಈ ಬಾರಿ ಈದ್ ಉಲ್ ಫಿತ್ರ್ ದಿನದಂದು ಸ್ವಾಮೀಜಿಗೆ ಫಲ ಸಲ್ಲಿಸಿ, ಆಶೀರ್ವಾದ ಪಡೆದಿದ್ದೇವೆ ಎಂದು ಹೇಳಿದರು.