ಕಳೆದೊಂದು ವಾರದಿಂದ ಉಡುಪಿಯಲ್ಲಿ ಅಣಬೆಗಳಿಗೆ ಭಾರೀ ಡಿಮ್ಯಾಂಡ್
ಉಡುಪಿ, ಆಗಸ್ಟ್.14: ಅಣಬೆಗಳಿಗೆ ಮಳೆಗಾಲದಲ್ಲಿ ಭಾರೀ ಡಿಮ್ಯಾಂಡ್. ಸಹಜವಾಗಿ ಪಟ್ಟಣ ಪ್ರದೇಶಗಳಲ್ಲಿ ಕೃತಕವಾಗಿ ಅಣಬೆಗಳನ್ನು ಬೆಳೆಸುವುದರಿಂದ ಗ್ರಾಮೀಣ ಭಾಗದಲ್ಲಿ ದೊರೆಯುವ ಅಣಬೆಗಳಿಗೆ ವಿಶೇಷ ಬೇಡಿಕೆಯಿರುತ್ತದೆ.
ಉತ್ತರ ಕನ್ನಡದ ಅಣಬೆಗಳಿಗೂ ವಿಶೇಷವಾದ ಬೇಡಿಕೆಯಿದ್ದು, ಗ್ರಾಮೀಣ ಭಾಗದ ಕೆಲವರಿಗೆ ಅಣಬೆ ಹುಡುಕುವುದು ಆದಾಯದ ಮೂಲವಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಅಣಬೆಗಳ ಮಾರಾಟ ಕಂಡು ಬರುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಣಬೆ ಮಾರಾಟ ಕಡಿಮೆಯಿದೆ.
ಬೊಚ್ಚುಬಾಯಲ್ಲೂ ಜೊಲ್ಲುಕ್ಕಿಸುವ ಆಳಂಬೆ ಮಸಾಲೆ ಸಾರು
ಮಳೆಗಾಲದಲ್ಲಿ ಮಾತ್ರ ದೊರೆಯುವ ಈ ಅಣಬೆಗಳು ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯಂತರದವರೆಗೆ ಕಾಣ ಸಿಗುತ್ತವೆ. ವಿಷ ಜಂತುಗಳು ಸ್ಪರ್ಶಿಸುತ್ತದೆ ಎನ್ನುವ ಕಾರಣದಿಂದ ನಾಗರಪಂಚಮಿ ಬಳಿಕ ಅಣಬೆಗಳನ್ನು ತಿನ್ನುವುದಿಲ್ಲ.
ಹಳ್ಳಿಗಳಲ್ಲಿ ಕೃಷಿಕರು ಮತ್ತು ಪ್ರಕೃತಿಯ ನಡುವೆ ವಿಶೇಷವಾದ ಬಾಂಧವ್ಯವಿದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಮುಗಿದಾಕ್ಷಣ ಆಷಾಢ ಮಾಸದಲ್ಲಿ ಸುರಿವ ಮಳೆ, ಚಳಿಗೆ ರೈತರು ಅಣಬೆಯನ್ನು ಶೋಧಿಸುತ್ತಾರೆ. ಕೃಷಿ ಚಟುವಟಿಕೆಯಿಲ್ಲದ ಕಾರಣ ಈ ಸಮಯದಲ್ಲಿ ರೈತರು ಕಾಡಿನಲ್ಲಿ ದೊರೆಯುವ ಅಣಬೆಗಳನ್ನು ಹುಡುಕಿ ತರುತ್ತಾರೆ.
ಹಿಂದೆಲ್ಲಾ ಕಾಡಿನ ಪ್ರಮಾಣ ಅಧಿಕವಾಗಿರುವ ಕಾರಣ ಅಣಬೆ ವ್ಯಾಪಕವಾಗಿ ದೊರೆಯುತ್ತಿತ್ತು. ಆದರೆ ಇತ್ತೀಚೆಗೆ ರಾಸಾಯನಿಕ ಗೊಬ್ಬರಗಳ ಅಳವಡಿಕೆ, ಕಾಡು ನಾಶವಾದ ಪರಿಣಾಮ ಅಣಬೆಗಳು ದೊರೆಯುವುದು ಅಪರೂಪವಾಗಿದೆ.
ಅಂದಹಾಗೆ ಅಣಬೆಗಳು ಬೈಂದೂರು, ಗಂಗನಾಡು, ಮದ್ದೋಡಿ, ತೂದಳ್ಳಿ, ಶಿರೂರು ಸಮೀಪದ ಹಾಡುವಳ್ಳಿ, ಕೋಣಾರ, ಮಾರುಕೇರಿ ಮುಂತಾದ ಕಡೆ ವ್ಯಾಪಕವಾಗಿ ದೊರೆಯುತ್ತದೆ. ಈ ಅಣಬೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿದ್ದು, ನೂರು ಅಣಬೆಗೆ ಇನ್ನೂರ ಐವತ್ತರಿಂದ ಎಂಟುನೂರು ರೂಪಾಯಿ ದರವಿದೆ.
ಗ್ರಾಮೀಣ ಭಾಗದಲ್ಲಿ ಅಣಬೆಗಳನ್ನು ಕೊಂಡು ಪಟ್ಟಣ ಪ್ರದೇಶದಲ್ಲಿ ಮಾರಾಟ ಮಾಡಲು ಎಜೆಂಟರುಗಳೂ ಸಹ ಇದ್ದಾರೆ. ಸರಾಸರಿ 15 ದಿನಗಳಿಂದ ಒಂದು ತಿಂಗಳು ಮಾತ್ರ ಅಣಬೆಗಳು ದೊರೆಯುತ್ತದೆ. ಅಣಬೆಗಳಿಂದ ತಯಾರಿಸಿದ ಖಾದ್ಯಗಳು ಶಿರೂರು, ಭಟ್ಕಳ ಮುಂತಾದ ಕಡೆಗಳಿಂದ ಮುಂಬೈ ಹಾಗೂ ವಿದೇಶಕ್ಕೂ ರವಾನೆಯಾಗುತ್ತದೆ.