"ಉಪ ಚುನಾವಣೆಯಲ್ಲಿ ಡಿ.ಕೆ ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ''
ಉಡುಪಿ, ಅಕ್ಟೋಬರ್ 11: ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಐಎಎಸ್ ಅಧಿಕಾರಿ ಡಿ.ಕೆ ರವಿ ಪತ್ನಿ ಹೆಚ್.ಕುಸುಮ ಸ್ಪರ್ಧೆಯ ವಿಚಾರವಾಗಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಉಪ ಚುನಾವಣೆಯಲ್ಲಿ ಮಾಜಿ ಐಎಎಸ್ ಅಧಿಕಾರಿ ಡಿ.ಕೆ ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ. ಡಿ.ಕೆ ರವಿ ಓರ್ವ ದಕ್ಷ ಅಧಿಕಾರಿಯಾಗಿದ್ದರು, ಇಂದು ಅವರು ನಮ್ಮ ಜೊತೆಗಿಲ್ಲ ಎಂದರು.
ಆರ್.ಆರ್.ನಗರ ಚುನಾವಣೆಯಲ್ಲಿ ವಿಭಿನ್ನ ಕಾರ್ಯತಂತ್ರ: ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದ ಡಿಕೆಶಿ
ಡಿ.ಕೆ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗುವುದಿಲ್ಲ, ಡಿ.ಕೆ ರವಿ ಬದುಕಿದ್ದಾಗ ಕುಸುಮಾ ಅವರ ಕುಟುಂಬ ಏನು ಮಾಡಿತ್ತು? ಡಿ.ಕೆ ರವಿಯ ಮಾವ ಏನು ಮಾಡಿದರು? ಡಿ.ಕೆ ರವಿ ತೀರಿಕೊಂಡ ತಕ್ಷಣ ಕುಸುಮಾ ಅವರು ಎಲ್ಲಿಗೆ ಹೋದರು? ಯಾಕೆ ಹೋದರು? ಇದೆಲ್ಲವೂ ಚರ್ಚೆಯಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಹೆಚ್.ಕುಸುಮಾ ಅವರಿಗೆ ತಿರುಗೇಟು ನೀಡಿದರು.
ಡಿ.ಕೆ ರವಿ ಅವರ ತಂದೆ-ತಾಯಿಗೆ ಆದ ಅವಮಾನ
ಈ ಎಲ್ಲ ಬೆಳವಣಿಗೆಗೋಸ್ಕರ ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕುಸುಮಾ ಅವರು ರವಿ ಹೆಸರು ಪ್ರಸ್ತಾಪಿಸದೆ ಇರುವುದು ಒಳ್ಳೆಯದು. ರವಿ ಬಗ್ಗೆ, ಅವರ ಪತ್ನಿಯ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲವೆಂದು ತಿಳಿಸಿದರು.
ಡಿ.ಕೆ ರವಿ ಸಾವಿನ ನಂತರ ಅವರ ತಂದೆ-ತಾಯಿಗೆ ಆದ ಅವಮಾನ, ಅವರ ಕೆಟ್ಟ ಪರಿಸ್ಥಿತಿ ಎಲ್ಲವೂ ಚರ್ಚೆಯ ವಿಷಯವಾಗಿದೆ. ಚುನಾವಣಾ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪ ಆಗುವುದು ಒಳ್ಳೆಯದಲ್ಲ. ಒಂದು ವೇಳೆ ಅವಳು ಚರ್ಚೆ ತೆಗೆದರೆ ನಮ್ಮಲ್ಲೂ ಚರ್ಚೆಗೆ ಸಾಕಷ್ಟು ವಿಚಾರ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.
ಬಿಜೆಪಿ ಸರಕಾರಕ್ಕೆ ಮುಜುಗರ ಮಾಡುವ ಷಡ್ಯಂತ್ರ
ಇದೇ ಸಂದರ್ಭದಲ್ಲಿ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕೆರಂದ್ಲಾಜೆ, ""ಉತ್ತರಪ್ರದೇಶ ಘಟನೆ ಒಂದು ವ್ಯವಸ್ಥಿತ ಷಡ್ಯಂತ್ರ, ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಸರಕಾರಕ್ಕೆ ಮುಜುಗರ ಮಾಡುವ ಷಡ್ಯಂತ್ರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಮಗ್ರವಾದ ತನಿಖೆಯಾಗಲಿ
ಈ ಘಟನೆಯ ಹಿಂದೆ ಪಿಎಫ್ಐ ಮತ್ತು ಎಸ್.ಡಿ.ಪಿ.ಐ ಕೈವಾಡ ಇದೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನಾನು ಹೇಳುವುದಿಲ್ಲ, ಈ ಎರಡು ಸಂಘಟನೆಗಳು ವ್ಯವಸ್ಥಿತ ಜಾಲ ಹೆಣೆದಿವೆ ಎಂದು ಆರೋಪಿಸಿದರು. ಈ ಘಟನೆಯ ಬಗ್ಗೆ ಸಮಗ್ರವಾದ ತನಿಖೆಯಾಗಲಿ, ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಬೇಕು. ಅತ್ಯಾಚಾರ ಮಾಡಿದವರಿಗೆ ಹಿಂದೂ-ಮುಸ್ಲಿಂ-ಕ್ರೈಸ್ತ ಅನ್ನುವಂಥ ಭೇದ ಇಲ್ಲ. ಇದೊಂದು ಮಾನಸಿಕತೆಯ ವಿಚಾರವಾಗಿದೆ ಎಂದು ತಿಳಿಸಿದರು.
ನಿಷೇಧ ಮಾಡುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ
ಅತ್ಯಾಚಾರ ವಿಷಯದಲ್ಲಿ ಪಿಎಫ್ಐ ಮತ್ತು ಎಸ್.ಡಿ.ಪಿ.ಐ ಕುಮ್ಮಕ್ಕು ಇದೆ ಅಂತಾದರೆ ಎನ್ಐಎ ಯಿಂದ ತನಿಖೆಯಾಗಬೇಕು, ಎರಡು ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಭವಿಷ್ಯದ ದಿನಗಳಲ್ಲಿ ಈ ಸಂಘಟನೆಗಳು ನಿಷೇಧ ಆಗುತ್ತವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.
Recommended Video