ಉಡುಪಿಗೆ ಆಷಾಢ ತಂದ ಸಂಭ್ರಮ; ಬೊಮ್ಮಾಯಿ ಸಿಎಂ, ಕರಂದ್ಲಾಜೆ ಕೇಂದ್ರ ಸಚಿವೆ
ಉಡುಪಿ, ಜುಲೈ 28: ಆಷಾಢ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ, ಆಷಾಢ ಕಷ್ಟದ ತಿಂಗಳು ಅನ್ನುವ ನಂಬಿಕೆ ಕೂಡಾ ಇದೆ. ಆದರೆ ರಾಜ್ಯ ಕರಾವಳಿ ಜಿಲ್ಲೆಯಾದ ಉಡುಪಿಗೆ ಮಾತ್ರ ಈ ಆಷಾಢ ಮಾತ್ರ ಬಂಪರ್ ಸಂಭ್ರಮ ನೀಡಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಗೆ ಆಷಾಢವೇ ಶ್ರಾವಣವಾಗಿ ಬದಲಾಗಿದೆ. ಬೊಮ್ಮಾಯಿಗೆ ಮುಖ್ಯಮಂತ್ರಿ ಸ್ಥಾನ ಹುಡುಕಿಕೊಂಡು ಬಂದಿದೆ. ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿದ್ದಾರೆ.
ಕೇಂದ್ರ ಸಂಪುಟಕ್ಕೆ ಶೋಭಾ ಕರಂದ್ಲಾಜೆ: ಬಿಎಸ್ವೈ ಕೈಬಿಟ್ಟರೂ ಮೋದಿ ಕೈಬಿಡಲಿಲ್ಲ
ಬಿಜೆಪಿ ಶಾಸಕರೇ ತುಂಬಿರುವ ಉಡುಪಿಗೆ ಹೊಸ ಸಚಿವ ಸ್ಥಾನ ಲಭಿಸುವ ಸಾಧ್ಯಗಳಿವೆ. ಹೀಗಾಗಿ ಈ ಜುಲೈ ತಿಂಗಳು ಉಡುಪಿಯನ್ನು ನಂಬಿದ ರಾಜಕರಾಣಿಗಳಿಗೆ ಬಂಪರ್ ಸಂಭ್ರಮ ನೀಡಿದೆ.
ಕೃಷ್ಣನೂರಿನ ಜನಪ್ರತಿನಿಧಿಗಳಿಗೆ ಅಷಾಢದಲ್ಲಿ ಸಂಭ್ರಮವಾದರೆ, ಜನರು ಮಾತ್ರ ನೀವು ಇನ್ನಾದರೂ ಕೆಲಸ ಮಾಡಿ ಅಂತಾ ಹೇಳುತ್ತಿದ್ದಾರೆ. ಯಾಕೆಂದರೆ ಬೊಮ್ಮಾಯಿ ಉಡುಪಿ ಜಿಲ್ಲಾ ಉಸ್ತುವಾರಿಯಾಗಿದ್ದಾಗ ಉಡುಪಿ ಜಿಲ್ಲೆಗೆ ಬಂದದ್ದೇ ಬಹಳ ಅಪರೂಪ. ಕೇವಲ ಬೆರಳೆಣಿಕೆಯ ಸಲವಷ್ಟೇ ಬಂದಿರಬಹುದು.
ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಗೆ ಆಷಾಢ ಶುಭವಾಗಿದ್ದರೆ, ಇನ್ನು ಮೂಲತಃ ಉಡುಪಿ ಜಿಲ್ಲೆಯ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಿಎಂ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರು ಅಂದುಕೊಂಡಂತೆ ಅಗಲಿಲ್ಲ ಎನ್ನುವುದು ಉಡುಪಿ ಜಿಲ್ಲೆಗೆ ಆಷಾಢ ಮಿಶ್ರಫಲ ಎಂದೇ ಹೇಳಬಹುದು.
"ಉಡುಪಿಗೆ ಬೊಮ್ಮಾಯಿ ಕೊಡುಗೆ ಕೂಡ ಅತ್ಯಲ್ಪವಾಗಿದೆ. ಕೋವಿಡ್ ಕಾಲದಲ್ಲೂ ಜಿಲ್ಲೆಯ ಜನರೊಂದಿಗೆ ಇದ್ದು ಧೈರ್ಯ ತುಂಬಲಿಲ್ಲ ಎನ್ನುವ ಆಪಾದನೆ ಇದೆ. ಇನ್ನು ಸಂಸದೆ ಶೋಭಾ ಕರಂದ್ಲಾಜೆಯವರು ಜಿಲ್ಲೆಗೆ ಆಗಮಿಸುವ ಅಪರೂಪದ ಸಂಸದೆ. ಉಡುಪಿ ಜಿಲ್ಲೆಯ ಜನರಿಗೆ ಸಂಸದೆಯನ್ನು ನೋಡುವ ಭಾಗ್ಯ ಮಾಧ್ಯಮಗಳಲ್ಲಿ ಮಾತ್ರ ಸಿಗುತ್ತಿತ್ತು,'' ಅಂತಾ ಉಡುಪಿ ಜನರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಉಡುಪಿಯ ಜನ ಮತ ಹಾಕಿದ ಎಲ್ಲಾ ರಾಜಕಾರಣಿಗಳಿಗೆ ಅವಕಾಶ ಹುಡುಕಿಕೊಂಡು ಬಂದಿದೆ. ಕೆ.ಕೆ. ಪೈ, ಆಸ್ಕರ್ ಫರ್ನಾಂಡೀಸ್, ವಿ.ಎಸ್. ಆಚಾರ್ಯ, ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್ ಹೀಗೆ ಹಲವು ಜನ ಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೆ ಉಡುಪಿಯನ್ನು ಅಭಿವೃದ್ಧಿ ಮಾಡಿದ್ದು ಮಾತ್ರ ಅಷ್ಟಕಷ್ಟೆಯಾಗಿದೆ.
Recommended Video