ಉಡುಪಿ: ನವಜಾತ ಹೆಣ್ಣು ಶಿಶುವನ್ನು ಕಸದ ತೊಟ್ಟಿಗೆ ಎಸೆದು ಹೋದ ತಾಯಿ
ಉಡುಪಿ, ಆಗಸ್ಟ್ 10: ನವಜಾತ ಹೆಣ್ಣು ಶಿಶುವೊಂದು ಕಸದ ತೊಟ್ಟಿಯಲ್ಲಿದ್ದುದನ್ನು ಗಮನಿಸಿದ ನಗರಸಭೆ ಸ್ವಚ್ಛತಾ ಕಾರ್ಮಿಕರು, ಮಗುವನ್ನು ರಕ್ಷಿಸಿದ ಘಟನೆ ಉಡುಪಿಯ ಚಿತ್ತರಂಜನ್ ಸರ್ಕಲ್ ಸಮೀಪ ನಡೆದಿದೆ.
Recommended Video
ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ಇರುವ ಕಸದ ತೊಟ್ಟಿಗೆ ಇಂದು ಜನಿಸಿರುವ ಮಗುವನ್ನು ಹೆತ್ತ ತಾಯಿ ಎಸೆದು ಹೋಗಿದ್ದರು. ಮಗು ಅಳುವುದನ್ನು ಗಮನಿಸಿದ ನಗರಸಭೆಯ ಸ್ವಚ್ಛತಾ ಕಾರ್ಮಿಕರು, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ಮಗುವನ್ನು ರಕ್ಷಿಸಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸೇರಿಸಿದರು.
ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ: ಚರಂಡಿಗೆ ಬಿದ್ದು ಮಹಿಳೆ ಸಾವು
ಇಂದು ಜನಿಸಿದ ಮಗುವಾದ ಕಾರಣ ಮಗುವಿನ ಹೊಕ್ಕುಳ ಬಳ್ಳಿ ಕೂಡ ಹಾಗೇ ಇತ್ತು. ತಕ್ಷಣ ವೈದ್ಯರು ಮಗುವಿನ ಆರೈಕೆ ಮಾಡಿದ್ದು, ಹೆಣ್ಣು ಮಗು ಈಗ ಆರೋಗ್ಯವಾಗಿದ್ದು, ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿಯಂತಹ ಅಕ್ಷರಸ್ಥರ ಊರಿನಲ್ಲಿ ತಾಯಿಯೊಬ್ಬಳು ಮಳೆಗಾಲದಲ್ಲಿ ಕಸದ ತೊಟ್ಟಿಗೆ ಮಗುವನ್ನು ಹಾಕಿರುವ ಹೇಯ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಗುವನ್ನು ಸಾಕಲು, ಆರೈಕೆ ಮಾಡಲು ಯಾರಿಗೆ ಸಾಧ್ಯವಿಲ್ಲವೋ, ಅಂತಹ ಮಗುವನ್ನು ಮಮತೆಯ ತೊಟ್ಟಿಲುಗೆ ಹಾಕಿ ಹೋಗಿ, ಇಂತಹ ತೊಟ್ಟಿಲುಗಳನ್ನು ಆಸ್ಪತ್ರೆಗಳಲ್ಲಿ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಇರಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.