ಕರಾವಳಿಯಾದ್ಯಂತ ಕ್ರೈಸ್ತರಿಂದ ಮಾತೆ ಮೇರಿಯಮ್ಮ ಜನ್ಮದಿನ ಆಚರಣೆ
ಉಡುಪಿ, ಸೆಪ್ಟೆಂಬರ್ 8: ಕರಾವಳಿಯಾದ್ಯಂತ ಭಾನುವಾರ ಕ್ರೈಸ್ತರು ಭಕ್ತಿ- ಶ್ರದ್ಧೆಯಿಂದ ತೆನೆ ಹಬ್ಬ ಆಚರಿಸಿಕೊಂಡರು. ಮಾತೆ ಮೇರಿಯಮ್ಮ ಹುಟ್ಟುಹಬ್ಬ ದಿನವಾದ ಈ ದಿನ ಕ್ರೈಸ್ತರು ತೆನೆ ಹಬ್ಬವನ್ನಾಗಿ ಆಚರಿಸುವುದು ಪದ್ಧತಿ. ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್, ಕಲ್ಯಾಣಪುರದ ಮಿಲಾಗ್ರೀಸ್ ಚರ್ಚ್ ಸಹಿತ ನಗರದ ವಿವಿಧ ಚರ್ಚ್ ಗಳಲ್ಲಿ ಬೆಳಿಗ್ಗೆಯಿಂದಲೇ ಆಗಮಿಸಿದ ಭಕ್ತರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಬಲಿ ಪೂಜೆ ನಡೆಸಿದರು.
ಮಾತೆ ಮೇರಿಗೆ ಬಲಿ ಪೂಜೆ ನಡೆಸಿ, ಶುಭಾಶಯಗಳನ್ನು ಹಂಚಿಕೊಂಡರು. ಮುಖ್ಯವಾಗಿ ಭತ್ತದ ತೆನೆ, ದವಸ- ಧಾನ್ಯಗಳನ್ನು ಮೇರಿಯಮ್ಮನಿಗೆ ಸಮರ್ಪಿಸುವ ಮೂಲಕ ಹೊಸ ಫಲಗಳನ್ನು ಸ್ವಾಗತಿಸುವುದೂ ಈ ದಿನದ ಮಹತ್ವ.
ತೆನೆ ಹಬ್ಬದಂದು ಹೂವಿಗೆ ವಿಶೇಷ ಮಹತ್ವ. ಕ್ರೈಸ್ತರು ಭಾನುವಾರ ಬೆಳಗ್ಗೆಯೇ ಹೂಗಳನ್ನು ಹಿಡಿದು, ಚರ್ಚ್ ಗಳಿಗೆ ಆಗಮಿಸಿದರು. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೂಗಳನ್ನು ತಂದು ಬಲಿಪೀಠಕ್ಕೆ ಅರ್ಪಿಸಿದರು. ದೂರದ ಊರುಗಳಲ್ಲಿರುವ ಬಂಧುಗಳು ಈ ದಿನ ಒಂದೇ ಕಡೆ ಸೇರುವುದು ವಾಡಿಕೆ.
ವರ್ಷಕ್ಕೊಮ್ಮ ಬರುವ ತೆನೆ ಹಬ್ಬದಂದು ಬಂಧುಗಳು ಯಾವುದೇ ಊರಿನಲ್ಲಿರಲಿ ಒಂದೆಡೆ ಸೇರಿ ಹೊಸ ಫಲಗಳ ಅಡುಗೆ ಸೇವಿಸಿ, ಖುಷಿ ಪಡುತ್ತಾರೆ. ಈ ವರ್ಷ ಹೊಸದಾಗಿ ಬೆಳೆದ ದವಸ- ಧಾನ್ಯ, ತರಕಾರಿಗಳನ್ನು ಎಲ್ಲೇ ಇದ್ದರೂ ತಂದು ಅದನ್ನು ಸೇವಿಸುವ ಮೂಲಕ ಸಸ್ಯಾಹಾರ ವ್ರತ ಕೈಗೊಳ್ಳುತ್ತಾರೆ.
ಕ್ರೈಸ್ತರಿಗೆ ಕಬ್ಬು ಈ ದಿನದ ಸಿಹಿತಿನಿಸು. ಚರ್ಚ್ ಗಳಲ್ಲಿ ಹೇರಳವಾಗಿ ಕಬ್ಬು ಹಂಚುವುದು ಈ ದಿನದ ವಿಶೇಷ. ಕ್ರೈಸ್ತರ ಪ್ರಾಬಲ್ಯ ಹೆಚ್ಚಿರುವ ಉಡುಪಿ ನಗರ, ಕಲ್ಯಾಣಪುರ, ಹೂಡೆ, ಸಂತೆಕಟ್ಟೆ, ಶಂಕರಪುರ, ಕಟಪಾಡಿ, ಉದ್ಯಾವರ ಮುಂತಾದೆಡೆಗಳಲ್ಲಿ ಮೇರಿ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು.