ಉಡುಪಿ: ಕಡಲ್ಕೊರೆತಕ್ಕೆ ತತ್ತರಗೊಂಡ ಕಡಲತಡಿ ನಿವಾಸಿಗಳು
ಉಡುಪಿ, ಜೂನ್.26: ಮಳೆಗಾಲ ಬಂತೆಂದರೆ ಕಡಲತಡಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡುತ್ತದೆ. ಪ್ರತೀ ವರ್ಷ ಮಳೆಗಾಲದಲ್ಲಿ ಸಮುದ್ರ ತೀರದಲ್ಲಿ ಸಂಭವಿಸುವ ಕಡಲ್ಕೊರೆತದಿಂದ ಕಡಲತೀರದ ಬಹುಭಾಗ ಕೊಚ್ಚಿಹೋಗುತ್ತದೆ.
ರಾತ್ರಿ ಸಮಯದಲ್ಲಿ ಮಳೆ ಸುರಿಯುವಾಗ ಒಂದೇ ಸಮನೇ ಭೀಮ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತವೆ. ಸಮುದ್ರ ದಡವನ್ನು ದಾಟಿ ಬಂದು ಭೂಭಾಗವನ್ನೇ ಕಬಳಿಸುತ್ತವೆ. ಅತೀ ವೇಗದಲ್ಲಿ ಬೀಸುವ ಗಾಳಿಯ ಹೊಡೆತಕ್ಕೆ ಸಮುದ್ರ ವಾಸಿಗಳ ಮನೆಗಳು ಹಾನಿಗೊಳಗಾಗುತ್ತವೆ.
ಹವಮಾನ ವೈಪರಿತ್ಯದಿಂದ ದಕ್ಷಿಣಕನ್ನಡದಲ್ಲಿ 40 ಅಡಿ ಮುಂದೆ ಬಂದ ಕಡಲು
ಉಡುಪಿಯ ಪಡುಕೆರೆ ಪ್ರದೇಶದಲ್ಲಿ ಕಡಲತೀರದಲ್ಲಿ ಕಡಲ್ಕೊರೆತ ಸಂಭವಿಸಿ ಬಹುಭಾಗ ಕಡಲಿನ ಒಡಲು ಸೇರಿದೆ. ಪ್ರತೀ ವರ್ಷ ಕಡಲ್ಕೊರೆತ ಸಂಭವಿಸುವ ಕಾರಣ ಜಿಲ್ಲಾಡಳಿತ ವಿಪತ್ತು ನಿರ್ವಹಣೆಗಾಗಿ ಮುಂಜಾಗ್ರತೆ ಕ್ರಮ ಕೈಗೊಂಡಿದೆ.
ಕಡಲ ತೀರದಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಹಾಕಲಾಗುತ್ತದೆ. ಆದರೆ ಪ್ರತೀ ವರ್ಷವೂ ಮಳೆಗಾಲದಲ್ಲಿ ಭೋರ್ಗರೆಯುವ ಸಮುದ್ರದ ಅಲೆಗಳು ಕಲ್ಲಿನ ತಡೆಗೋಡೆಯನ್ನೂ ಭೇಧಿಸಿವೆ. ಪಡುಕೆರೆ ,ತೊಟ್ಟಂ, ಉದ್ಯಾವರ ಮತ್ತು ಕುಂದಾಪುರದ ಮರವಂತೆ ಗಂಗೊಳ್ಳಿ ಮುಂತಾದೆಡೆ ಕಡಲು ಸಾಕಷ್ಟು
ಭೂಭಾಗವನ್ನು ಕಬಳಿಸಿದೆ.
ಸಮುದ್ರ ತೀರದಲ್ಲಿ ವಾಸಿಸುವ ಜನ ಆತಂಕದಿಂದ ದಿನಕಳೆಯುತ್ತಿದ್ದಾರೆ. ಕೆಲೆವೆಡೆಗಳಲ್ಲಿ ತೀರವಾಸಿಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ.
ಕಡಲ್ಕೊರೆತದ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಸರ್ಕಾರ ಚಿಂತನೆ ಮಾಡಬೇಕು. ಬ್ರೇಕ್ ವಾಟರ್ ನಿರ್ಮಾಣ ಮಾಡುವ ಮೂಲಕ ಶಾಶ್ವತವಾಗಿ ಪರಿಹಾರ ಮಾಡಬೇಕು ಎನ್ನುವ ತೀರ ವಾಸಿಗಳ ಹಲವು ವರುಷಗಳ ಬೇಡಿಕೆ ಇನ್ನೂ ಈಡೇರಿಲ್ಲ.
ಪ್ರತೀ ವರ್ಷ ಕಡಲ್ಕೊರೆತದ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಇದಕ್ಕೆ ಶಾಶ್ವತವಾದ ಪರಿಹಾರ ಇನ್ನೂ ಸಿದ್ದವಾಗಿಲ್ಲ. ಮೀನುಗಾರರು ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರಿಗೆ ಪ್ರತೀ ಮಳೆಗಾಲವೂ ಕಷ್ಟದ ದಿನಗಳಾಗಿವೆ.
ಚುನಾವಣೆ ಕಾಲದಲ್ಲಿ ಜನಪ್ರತಿನಿಧಿಗಳು ಜನರಿಗೆ ಭರವಸೆ ನೀಡಿ ಬೆನ್ನುಹಾಕುತ್ತಾರೆ. ಮಳೆಗಾಲದಲ್ಲಿ ಒಂದಿಷ್ಟು ಲಕ್ಷ ಹಣ ವ್ಯಯಮಾಡಿ ಸಮುದ್ರಕ್ಕೆ ಕಲ್ಲು ಹಾಕಿ ನೀರಿನಲ್ಲಿ ಹೋಮ ಮಾಡುತ್ತಾರೆ. ಜಿಲ್ಲಾಡಳಿತ ಇನ್ನಾದರೂ ಶಾಶ್ವತ ಪರಿಹಾರ ಒದಗಿಸುವತ್ತ ಕ್ರಮ ಕೈಗೊಳ್ಳಬೇಕಿದೆ.