ಕರಾವಳಿಯ ಬಾನಂಗಳದಲ್ಲಿ ಚೆಲ್ಲಿತ್ತು ಬಣ್ಣದೋಕುಳಿ
ಉಡುಪಿ, ಜೂನ್ 10: ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಮುಂಗಾರು ಮಾರುತಗಳ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆ ಸಂಜೆಯಿಂದ ಕರಾವಳಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಇಂದು ಮುಂಜಾನೆಯಿಂದಲೂ ಮಂಗಳೂರು ಸೇರಿದಂತೆ ಇತರೆಡೆ ತುಂತುರು ಮಳೆ ಸುರಿಯುತ್ತಿದೆ.
ಕರಾವಳಿ; ಚಂಡಮಾರುತದ ಎಚ್ಚರಿಕೆ, ಸಮುದ್ರಕ್ಕಿಳಿಯದಂತೆ ಸೂಚನೆ
ಮೋಡ ಕವಿದ ಈ ವಾತಾವರಣದ ನಡುವೆ ಕರಾವಳಿಯಲ್ಲಿ ಭಾನುವಾರ ಸಂಜೆ ಆಗಸದಲ್ಲಿ ರಂಗು ರಂಗಿನ ಚಿತ್ತಾರವೂ ಸೃಷ್ಟಿಯಾಗಿತ್ತು. ಸಂಜೆ ಸೂರ್ಯಾಸ್ತದ ಸಂದರ್ಭ ಆಗಸದಲ್ಲಿ ಕಾರ್ಮೋಡಗಳ ನಡುವೆ ಮೂಡಿದ ಬೆಳಕಿನ ಕಿರಣಗಳ ಆಟ ಜನರನ್ನು ಆಕರ್ಷಿಸಿತ್ತು. ಬಂಗಾರದ ಬೆಳಕಿನ ನಡುವೆ ಕಾರ್ಮೋಡದ ಬಾನಲ್ಲಿ ರಂಗಿನೋಕುಳಿ ಚೆಲ್ಲಿತ್ತು.
ಸಂಜೆ ಸೂರ್ಯ ಸಮುದ್ರಕ್ಕೆ ಇಳಿಯುತ್ತಿದ್ದಂತೆ ಬಾನಲ್ಲಿ ಹಳದಿ, ಕೆಂಪು, ನೀಲಿ, ಕಪ್ಪು, ಬಿಳಿ ಹೀಗೆ ನಾನಾ ಬಣ್ಣಗಳು ತುಂಬಿಕೊಂಡವು. ಜನಸಾಮಾನ್ಯರು ತಮ್ಮ ಮೊಬೈಲ್ ಗಳಲ್ಲಿ ಆಗಸದಲ್ಲಿ ಮೂಡಿದ ಈ ಬೆಳಕಿನ ರಂಗೋಲಿಯನ್ನು ಸೆರೆಹಿಡಿದು ಖುಷಿ ಪಟ್ಟರು.