ನೆಟ್ ವರ್ಕ್ ಸಮಸ್ಯೆ; ವಿದ್ಯಾರ್ಥಿಗಳ ಅರಣ್ಯರೋದನ
ಉಡುಪಿ, ಜೂನ್ 23; ಕೋವಿಡ್ ಮಹಾಮಾರಿ ಅಪ್ಪಿಳಿಸಿದ ಬಳಿಕ ಕಳೆದ ಒಂದೂವರೆ ವರ್ಷಗಳಿಂದ ಅತಿ ಹೆಚ್ಚು ಕಿವಿಗೆ ಬೀಳುತ್ತಿರುವ ಶಬ್ದ ಆನ್ಲೈನ್ ಕ್ಲಾಸ್. ಎಲ್ಲಾ ಮನೆಗಳಲ್ಲೂ ಇದೇ ರಾಗ, ಇದೇ ಹಾಡು. ಮಕ್ಕಳಿಗೆ ಶಾಲೆ ಇಲ್ಲ, ಹೀಗಾಗಿ ಇದು ಅನಿವಾರ್ಯವೂ ಹೌದು.
ಕಂಪ್ಯೂಟರ್ ಅಥವಾ ಮೊಬೈಲ್ ಜ್ಞಾನ ಇರುವ ಮಕ್ಕಳು ಇದನ್ನು ಎಂಜಾಯ್ ಮಾಡುತ್ತಿರಬಹುದೇನೋ. ಆದರೆ ಗ್ರಾಮೀಣ ಭಾಗದ ಮಕ್ಕಳಿಗಂತೂ ಇದು ಕಬ್ಬಿಣದ ಕಡಲೆಯೇ ಸರಿ. ಅವರು ಮನಸ್ಸಿಲ್ಲದೇ ಆನ್ಲೈನ್ ಮೂಲಕ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ತರಗತಿಗೆ ಹಾಜರಾಗುವುದು ದೊಡ್ಡ ಸವಾಲು.
OneIndia Impact Story: ಮಲೆನಾಡ ಮಕ್ಕಳ ಸಮಸ್ಯೆಗೆ ಸಚಿವ ಸುರೇಶ್ ಕುಮಾರ್ ಪರಿಹಾರ!
ಗ್ರಾಮೀಣ ಭಾಗಗಳಲ್ಲಿ ವಿಪರೀತ ನೆಟ್ವರ್ಕ್ ಸಮಸ್ಯೆ. ಆಗ ಏನು ಮಾಡುವುದು?. ಅಂತಹ ಮಕ್ಕಳ ಪಾಡು ಹೇಳತೀರದು. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹಿಂದೊಮ್ಮೆ ವಿಪರೀತ ನಕ್ಸಲ್ ಸಮಸ್ಯೆ ಇದ್ದ ಹಳ್ಳಿಗಳ ವಿದ್ಯಾರ್ಥಿಗಳು ನೆಟ್ವರ್ಕ್ಗಾಗಿ ಗುಡ್ಡ ಹತ್ತುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಗುಡ್ಡಗಾಡು ಅಲೆದರೂ ಸಿಗ್ತಿಲ್ಲ ಇಂಟರ್ನೆಟ್, ವಿದ್ಯಾರ್ಥಿಗಳ ಪಾಡು ಕೇಳಲೇಬೇಡಿ
ಮಡಾಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶ ಹಂಜ, ಕಾರೀಮನೆ ಹಾಗೂ ಎಡ್ಮಲೆ ಪರಿಸರದಲ್ಲಿ ನೆಟ್ವರ್ಕ್ ಸೌಲಭ್ಯವೇ ಇಲ್ಲ. ಇಲ್ಲಿ ಸುಮಾರು 54 ಮನೆಗಳಿವೆ. 450 ರಿಂದ 500 ಜನರು ವಾಸವಾಗಿದ್ದಾರೆ. ಒಂದನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ತನಕ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 32 ವಿದ್ಯಾರ್ಥಿಗಳು ಇದ್ದಾರೆ.
ಶಿವಮೊಗ್ಗ: 5ಜಿ ಯುಗದಲ್ಲೂ ನೆಟ್ವರ್ಕ್ಗಾಗಿ ಮರದಡಿ ಟೆಂಟ್ ನಿರ್ಮಿಸಿಕೊಂಡ ಯುವತಿ
ಈ ಮಕ್ಕಳಿಗೆ ಈಗ ಆನ್ಲೈನ್ ಕ್ಲಾಸ್ ಬೇರೆ. ಹೀಗಾಗಿ ಮನೆಯಲ್ಲಿ ನೆಟ್ವರ್ಕ್ ಸಿಗದ ಕಾರಣ ವಿದ್ಯಾರ್ಥಿಗಳು 5 ಕಿ. ಮೀ. ದೂರದ ಬೆಟ್ಟವೇರಿ ತರಗತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಷಕರು ಗುಡ್ಡದ ಮೇಲೆ ಮಕ್ಕಳಿಗಾಗಿ ಟೆಂಟ್ ನಿರ್ಮಿಸಿದ್ದಾರೆ. ಕಾಡಿನ ಮಧ್ಯದಲ್ಲಿ ಇರುವ ಈ ಟೆಂಟ್ನಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಆಲಿಸುವ ಪರಿಸ್ಥಿತಿ ಇದೆ.
ಈಗ ಭಾರೀ ಮಳೆಯಾಗುತ್ತಿದ್ದು ಚಿಕ್ಕ ಮಕ್ಕಳನ್ನು ಈ ಮಳೆಯಲ್ಲೂ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಟೆಂಟ್ನಲ್ಲಿ ಕೂರಿಸಿ ಪಾಠ ಕೇಳಿಸುವ ಹೆಚ್ಚುವರಿ ಜವಾಬ್ದಾರಿ ಪೋಷಕರ ಮೇಲೆ ಬಿದ್ದಿದೆ.
Recommended Video
ನೆಟ್ವರ್ಕ್ ಸಮಸ್ಯೆ ಸರಿಪಡಿಸಿ ಎಂದು ಈ ಭಾಗದ ಜನ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಆನ್ಲೈನ್ ಕ್ಲಾಸ್ ಮಾಡುತ್ತೇವೆ ಎಂದು ಹೇಳುವ ಶಾಲೆಗಳಿಗೆ ಮತ್ತು ಸರ್ಕಾರಕ್ಕೆ ಮಕ್ಕಳ ಗೋಳು ತಲುಪಿಲ್ಲ.