ನಾಪತ್ತೆಯಾದ ಮೀನುಗಾರರನ್ನು ಹುಡುಕಲು ಸಾಗರದಾಳಕ್ಕೆ ಇಳಿದ ನೌಕಾಪಡೆ
ಉಡುಪಿ, ಫೆಬ್ರವರಿ 12: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ 7 ಮಂದಿ ಮೀನುಗಾರರ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಅವರು ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನ ಕುರುಹು ಕೂಡ ದೊರೆತಿಲ್ಲ. ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಉಡುಪಿ ಪೊಲೀಸರು, ತಟರಕ್ಷಣಾ ಪಡೆ ಒಂದೆಡೆ ತಮ್ಮ ಪ್ರಯತ್ನ ಮುಂದುವರೆಸಿದರೆ, ಇನ್ನೊಂದೆಡೆ ಮೀನುಗಾರರ ಪತ್ತೆಗೆ ಭಾರತೀಯ ನೌಕೆಯ ಐಎನ್ ಎಸ್ ಸಟ್ಲೆಜ್ ನೌಕೆ ಶೋಧಕಾರ್ಯಾಚರಣೆ ಆರಂಭಿಸಿದೆ. ಈ ನೌಕೆ ಸಾಗರದಾಳದ ಕಾರ್ಯಾಚರಣೆಯಲ್ಲಿ ತೊಡಗಿದೆ.
ಪತ್ತೆಯಾಗಿರುವ ಬೋಟ್ ಅವಶೇಷ ನಾಪತ್ತೆಯಾದ ಸುವರ್ಣ ತ್ರಿಭುಜದ್ದಲ್ಲ!
ಹೈಡ್ರೋ ಗ್ರಾಫಿಕ್ ಸರ್ವೇ ಮೂಲಕ ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ನ ಕುರುಹುಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ. ಈ ತುರ್ತು ಅಗತ್ಯ ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲ ರೀತಿಯ ಸೌಲಭ್ಯಗಳು ಇದರಲ್ಲಿವೆ. ಸಮುದ್ರಯಾನ ಹಾಗೂ ಸಾಗರದೊಳಗಿನ ವಸ್ತುಗಳ ಸಮೀಕ್ಷೆ ನಡೆಸುವಲ್ಲಿ ಇದು ಮಹತ್ತರ ಪಾತ್ರ ವಹಿಸಿದೆ.
ಸಾಗರದಾಳದಲ್ಲಿ ಹುದುಗಿಹೋಗಿರುವ ವಸ್ತುಗಳ ಬಗ್ಗೆ ಈ ನೌಕೆ ಶೋಧಕಾರ್ಯ ನಡೆಸುತ್ತಿದೆ. ಬೋಟ್ ನ ಅವಶೇಷಗಳಿಗಾಗಿ ಶೋಧಕಾರ್ಯ ನಡೆಸುತ್ತಿರುವ ಈ ನೌಕೆ, ಕಡಲಾಳದಲ್ಲಿ ದೊರಕುವ ವಸ್ತುಗಳ ಬಗ್ಗೆ ಖಚಿತಪಡಿಸಿಕೊಳ್ಳುವುದಕ್ಕಾಗಿ ಹಡಗಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಪ್ರಯೋಗಾಲಯ ಹೊಂದಿದೆ. ಅದರ ಮೂಲಕ ಲಭಿಸಿದ ವಸ್ತುಗಳ ಮಾಹಿತಿ ಕಲೆ ಹಾಕುವ ಕೆಲಸವೂ ನಡೆಯುತ್ತಿದೆ.
ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯ:ಇನ್ನೆರೆಡು ದಿನಗಳಲ್ಲಿ ಸ್ಪಷ್ಟ ಚಿತ್ರಣ
ನೌಕಾ ಪಡೆ ಕಾರ್ಯಾಚರಣೆ ಆರಂಭಿಸಿರುವ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಮೀನುಗಾರರ ಕುಟಂಬಸ್ಥರಲ್ಲಿ ಚಿಕ್ಕದೊಂದು ಆಶಾಭಾವನೆ ಮೂಡಿದೆ. ಆದರೆ ಡಿಸೆಂಬರ್ 13 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮಲ್ಪೆ ಮೀನುಗಾರರು ಎಲ್ಲಿ ಹೋದರು? ಏನಾದರು? ಎಂಬುದೇ ಇನ್ನೂ ನಿಗೂಢವಾಗಿಯೇ ಉಳಿದಿದೆ.