ಬೋಟ್ ಮಿಸ್, ರಾತ್ರಿಯಿಡಿ ದ್ವೀಪದಲ್ಲೇ ಕಳೆದ ಪ್ರವಾಸಿಗರು
ಉಡುಪಿ, ನವೆಂಬರ್ 25: ಮಲ್ಪೆ ಸೇಂಟ್ ಮೇರೀಸ್ ದ್ವೀಪಕ್ಕೆ ತೆರಳಿದ್ದ ಕೇರಳದ ನಾಲ್ವರು ಪ್ರವಾಸಿಗರು, ಬೋಟು ತಪ್ಪಿ ರಾತ್ರಿಯಿಡೀ ದ್ವೀಪದಲ್ಲೇ ಕಳೆದಿದ್ದಾರೆ.
ಸಂಜೆಯ ಕೊನೆಯ ಬೋಟ್ ಮಿಸ್ಸಾಗಿ ಈ ಅವಾಂತರ ಸೃಷ್ಟಿಯಾಗಿದ್ದು, ಕೇರಳದ ಕೊಚ್ಚಿನ್ ನಿವಾಸಿ ಶೀಜಾ (33), ಜೋಶ್ (28), ಜಸ್ಟಿನ್ (34), ಹರೀಶ್(17) ದ್ವೀಪದಲ್ಲಿ ರಾತ್ರಿ ಕಳೆದಿದ್ದಾರೆ.
ಕೈ ಬೀಸಿ ಕರೆಯುತಿದೆ ಮಳೆಗೆ ಮೈ ಒಡ್ಡಿದ ಪುಟ್ಟ ದ್ವೀಪ, ಮತ್ತೇಕೆ ತಡ?
ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣ ಸೇಂಟ್ ಮೇರೀಸ್ ಕಣ್ತುಂಬಿಸಿಕೊಳ್ಳಲು ನಿತ್ಯ ಸಾವಿರಾರು ಜನ ಬರುತ್ತಾರೆ. ಇಲ್ಲಿಗೆ ತೆರಳಲು ಎರಡು ಬೋಟ್ ಗಳಿದ್ದು ಪ್ರವಾಸಿಗರನ್ನು ಅತ್ತಿಂದಿತ್ತ ಕರೆದೊಯ್ಯುತ್ತವೆ. ಸಂಜೆ ಬಳಿಕ ಈ ದ್ವೀಪಕ್ಕೆ ಹೋಗುವುದು ನಿಷೇಧ. ಇಲ್ಲಿ ಪ್ರವಾಸಿಗರು ರಾತ್ರಿ ಹೊತ್ತು ಇರುವಂತಿಲ್ಲ. ಆದರೆ ಸಂಜೆಯ ಕೊನೆ ಬೋಟ್ ಮಿಸ್ ಆದ ಪರಿಣಾಮ ನಾಲ್ವರು ಇಡೀ ರಾತ್ರಿ ದ್ವೀಪದಲ್ಲಿ ಕಳೆಯುವಂತಾಗಿದೆ.
ಈ ನಾಲ್ವರನ್ನು ಭಾನುವಾರ ಬೆಳಗ್ಗೆ 7.30ಕ್ಕೆ ಸೇಂಟ್ ಮೇರಿಸ್ ದ್ವೀಪದಿಂದ ರಕ್ಷಿಸಿ ತೀರಕ್ಕೆ ಕರೆತರಲಾಗಿದೆ. ನಾಲ್ವರು 21ರಂದು ಕೇರಳದಿಂದ ರೈಲಿನಲ್ಲಿ ಉಡುಪಿಗೆ ಬಂದಿದ್ದರು. ಉಡುಪಿಯ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಬಳಿಕ ಗೋವಾಕ್ಕೆ ತೆರಳಿದ್ದರು. ಅಲ್ಲಿಂದ ನ.23ರ ಮಧ್ಯಾಹ್ನ ಉಡುಪಿಗೆ ಪುನಃ ಆಗಮಿಸಿ, ಮಧ್ಯಾಹ್ನ 12.30ಕ್ಕೆ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಬೋಟ್ ಮೂಲಕ ಸೇಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದರು.
ವಾಹ್ ಎನಿಸುವ 'ಇಂಥ' ಸ್ಕೂಬಾ ಡೈವಿಂಗ್ ಪ್ರವಾಸೋದ್ಯಮ ಮಂಗ್ಳೂರಲ್ಲಿ
ದ್ವೀಪದಲ್ಲಿ ವಿಹರಿಸಿದ ನಾಲ್ವರು ಸಮೀಪದಲ್ಲಿರುವ ಇನ್ನೊಂದು ದ್ವೀಪಕ್ಕೆ ತೆರಳಿದ್ದೇ ಘಟನೆಗೆ ಕಾರಣ. ಸಾಯಂಕಾಲ ವೇಳೆ ನೀರಿನ ಮಟ್ಟ ಏರಿದ ಹಿನ್ನೆಲೆಯಲ್ಲಿ ಇವರಿಗೆ ಸಣ್ಣ ದ್ವೀಪದಿಂದ ಸೇಂಟ್ ಮೇರೀಸ್ ದ್ವೀಪಕ್ಕೆ ಬರಲು ಸಾಧ್ಯವಾಗಿಲ್ಲ. ಬೇರೆ ಅವಕಾಶವಿಲ್ಲದೆ ಅಲ್ಲಿಯೇ ಉಳಿದುಕೊಂಡರು. ಪ್ರವಾಸಿಗರನ್ನು ವಾಪಸ್ ಕರೆತರುವ ಕೊನೆಯ ಬೋಟು ಸಾಯಂಕಾಲ 6.45ಕ್ಕೆ ದ್ವೀಪದಿಂದ ಪ್ರವಾಸಿಗರನ್ನು ಕರೆದುಕೊಂಡು ಹೊರಟಿತು. ಸಣ್ಣ ದ್ವೀಪದಲ್ಲಿದ್ದ ಪ್ರವಾಸಿಗರು ನೀರಿನ ಮಟ್ಟ ಇಳಿದ ಬಳಿಕ ಸೇಂಟ್ ಮೇರಿಸ್ ದ್ವೀಪದ ತೀರಕ್ಕೆ ಬಂದು ನೋಡುವಷ್ಟರಲ್ಲಿ ಬೋಟು ತೆರಳಿರುವುದು ಗಮನಕ್ಕೆ ಬಂದಿದೆ.
ಸಹಾಯಕ್ಕಾಗಿ ಯಾರನ್ನೂ ಸಂರ್ಪಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಾಲ್ವರು ಇಡೀ ರಾತ್ರಿ ಅಲ್ಲೇ ಕಳೆಯಬೇಕಾಯಿತು.