ಭಾಗೀರತಿಗೆ ಗಂಗಾರತಿ ಸಂದರ್ಭ ಸುರಿಯಿತು ಭಾರೀ ಮಳೆ
ಉಡುಪಿ, ಜೂನ್ 13: ಉಡುಪಿ ಪರ್ಯಾಯ ಪಲಿಮಾರು ಸ್ವಾಮೀಜಿಯವರು ಭಾಗೀರತಿಗೆ ಗಂಗಾರತಿ ಎತ್ತುತ್ತಿದ್ದಂತೆ ಉಡುಪಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಇದು ಕಾಕತಾಳಿಯವೋ ಅಥವಾ ಪವಾಡಯೋ ಗೊತ್ತಿಲ್ಲ. ಆದರೆ ಈ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಬರದ ನಾಡಾಗಿ ಪರಿವರ್ತನೆಗೊಂಡಿದ್ದ ಉಡುಪಿಯಲ್ಲಿ ಮಳೆಯಿಂದ ಇದೀಗ ಜನರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಭಾರತದಲ್ಲಿ ಅನಾದಿಕಾಲದಿಂದಲೂ ನದಿಗಳಿಗೆ ದೇವಾನುದೇವತೆಗಳ ಸ್ಥಾನ ನೀಡಿ ಪೂಜಿಸಲಾಗುತ್ತಿದೆ. ಬುಧವಾರ ದೇಶದ ಎಲ್ಲೆಡೆ ಭಾಗೀರಥಿಯನ್ನು ವಿಶೇಷವಾಗಿ ಪೂಜಿಸಲಾಯಿತು. ಭೂಮಿಗೆ ಉತ್ತಮ ಮಳೆಯಾಗಲಿ, ಜಲ-ಬೆಳೆ ಸಮೃದ್ಧಿಯಾಗಿಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಬೋರ್ ವೆಲ್ ನಲ್ಲಿ ಉಕ್ಕಿದ ಜಲ: ಪೂಜೆಯ ಪವಾಡ?
ಬುಧವಾರ ಗಂಗೆಯ ತಂಗಿ ಭಾಗೀರಥಿಯ ಜನ್ಮದಿನ. ಭಗೀರಥ ಮುನಿಯ ಮಹಾತಪಸ್ಸಿಗೆ ಒಲಿದು ಭೂಮಿಗೆ ಇಳಿದವಳು ಭಾಗೀರಥಿ. ಉಡುಪಿಯ ಕೃಷ್ಣಮಠದಲ್ಲೂ ಭಾಗೀರಥಿ ದೇವಿಯ ಸನ್ನಿಧಾನವಿದೆ. ಹೀಗಾಗಿ ಪರ್ಯಾಯ ಪಲಿಮಾರು ಸ್ವಾಮಿಗಳು ಭಾಗೀರಥಿಗೆ ಪೂಜೆ ಸಲ್ಲಿಸಿದ್ದು, ಗಂಗಾರತಿ ಎತ್ತುತ್ತಿದ್ದಂತೆ ಉಡುಪಿಯಲ್ಲಿ ಧಾರಾಕಾರ ಮಳೆ ಆರಂಭವಾಗಿದೆ.
ಭಗೀರಥ ಮುನಿಯು ತನ್ನ ಪೂರ್ವಜರ ಪಾಪದೋಷ ಕಳೆಯುವುದಕ್ಕಾಗಿಯೇ ಭಾಗೀರಥಿ ದೇವಿಯನ್ನು ತಪಸ್ಸಿನಿಂದ ಒಲಿಸಿಕೊಂಡ, ಆಕೆ ಇಳೆಗೆ ಇಳಿದು ಬರುವಂತೆ ಮಾಡಿದ ಅನ್ನುವುದು ಪುರಾಣ. ಅಂತಹ ಭಾಗೀರಥಿ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಉಡುಪಿ ಕೃಷ್ಣ ಮಠಕ್ಕೂ ಭಾಗೀರಥಿ ದೇವಿಗೂ ನಂಟಿದೆ ಅನ್ನುವ ನಂಬಿಕೆಯಿದೆ. ಆಚಾರ್ಯ ಮದ್ವರ ಭಕ್ತಿಗೆ ಒಲಿದ ಭಾಗೀರಥಿ ಉಡುಪಿ ಕೃಷ್ಣ ಮಠಕ್ಕೂ 12 ವರುಷಕ್ಕೊಮ್ಮೆ ಬರುತ್ತಾಳೆ ಅನ್ನೋದು ಪ್ರತೀತಿ. ಅದಮಾರು ಮಠ ಹಿರಿಯ ಶ್ರೀ ಪಾದರು ಭಾಗೀರತಿ ದೇವಿಗಾಗಿಗೇ ಕೃಷ್ಣಮಠದ ಮಧ್ವ ಸರೋವರದದಲ್ಲಿ ಗುಡಿ ಕಟ್ಟಿ ಪೂಜೆ ಆರಂಭಿಸಿದರು. ವರ್ಷಂಪ್ರತಿ ಪರ್ಯಾಯ ಸ್ವಾಮಿಗಳು ಭಾಗೀರಥಿ ದೇವಿಗೆ ವಿಶೇಷವಾಗಿ ಪೂಜೆ ನಡೆಸುತ್ತಾರೆ. ಮಧ್ವ ಸರೋವರದ ದೇವಿಯ ಗುಡಿಯಲ್ಲಿ ಬುಧವಾರವೂ ವಿಶೇಷ ಪೂಜೆಯನ್ನು ನಡೆಸಲಾಯಿತು.
ದಕ್ಷಿಣ ಕನ್ನಡದ ಅನಂತನ ಸನ್ನಿಧಿಯಲ್ಲಿ ಒಂದರ ಹಿಂದೆ ಮತ್ತೊಂದು ಪವಾಡ!
ಭಾಗೀರಥಿ ಜನ್ಮದಿನದಂದು ಮಧ್ವ ಸರೋವರ ತುಂಬಿ ತುಳುಕೋದು ಸಹಜ. ಆದರೆ ಈ ಬಾರಿ ಉಡುಪಿಗೆ ಬರ ತಟ್ಟಿದೆ. ಹಾಗಾಗಿ ತೆಪ್ಪೋತ್ಸವಕ್ಕೆ ಅವಕಾಶ ಇಲ್ಲದಂತಾಗಿದೆ. ತೆಪ್ಪೋತ್ಸವ ನಡೆದಿಲ್ಲವಾದರೂ, ಪಲಿಮಾರು ವಿದ್ಯಾಧೀಶ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಕಾಕತಾಳೀಯವೋ, ಅಚ್ಚರಿಯೋ ಎಂಬಂತೆ ಅದೇ ಸಮಯದಲ್ಲಿ ಕೃಷ್ಣಮಠ ಸೇರಿದಂತೆ ಉಡುಪಿಯ ಆಸುಪಾಸು ಜೋರಾಗಿ ಮಳೆ ಆರಂಭವಾಯಿತು.