ಸಿಎಂ ಆರೋಗ್ಯವಾಗಿ, ಲವಲವಿಕೆಯಿಂದ ಇದ್ದಾರೆ: ಸಚಿವ ಆರ್.ಅಶೋಕ್
ಉಡುಪಿ, ಆಗಸ್ಟ್ 07: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮುಂದೆ ಬರುತ್ತಾರೆ. ಸದ್ಯ ಅವರು ಆರೋಗ್ಯವಾಗಿ, ಲವಲವಿಕೆಯಿಂದ ಇದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
Recommended Video
ಉಡುಪಿಯ ಜಿಲ್ಲಾಧಿಕಾರಿ ಸಭಾ ಭವನದಲ್ಲಿ ಮಾತನಾಡಿದ ಸಚಿವ ಅಶೋಕ್, ಕೋವಿಡ್ ಮತ್ತು ಪ್ರವಾಹ ಸಮಯದಲ್ಲಿ ಮುಖ್ಯಮಂತ್ರಿಗಳು ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ಸರಕಾರದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಶೀಘ್ರ ಗುಣಮುಖವಾಗಿ ಬರಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.
ಡಿಕೆಶಿಗೆ ಸಿದ್ದು ಕಾಟ!
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿಗಿಂತ ಸಿದ್ದರಾಮಯ್ಯನವರ ಕಾಟನೇ ಜಾಸ್ತಿಯಾಗಿದೆ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದರು.
ಕೋವಿಡ್ ಆಸ್ಪತ್ರೆಯಿಂದ ಯಡಿಯೂರಪ್ಪ ಡಿಸ್ಚಾರ್ಜ್: ಸರ್ಕಾರದ ಸ್ಪಷ್ಟನೆ
ಡಿಕೆಶಿ ಅವರು ಮೊದಲು ಸಿದ್ದರಾಮಯ್ಯ ಅವರ ಕಾಟದಿಂದ ತಪ್ಪಿಸಿಕೊಂಡು ಹೊರಬರಲಿ. ಆಮೇಲೆ ಸರಕಾರದ ವಿರುದ್ಧ ಟೀಕೆ ಮಾಡಲಿ. ಸರಕಾರ ಇದೆಯೋ ಇಲ್ಲವೋ ಎಂಬ ವಿಪಕ್ಷ ನಾಯಕರ ಪ್ರಶ್ನೆಗೆ ಅಶೋಕ್ ಟಾಂಗ್ ನೀಡಿದರು.
ವಿರೋಧ ಪಕ್ಷ ಇದೆಯೋ ಇಲ್ಲವೋ ಗೊತ್ತಿಲ್ಲ. ಸಿದ್ದರಾಮಯ್ಯನವರೂ ಕೊರೊನಾದಿಂದ ಆಸ್ಪತ್ರೆಯಲ್ಲಿದ್ದಾರೆ. ಡಿ.ಕೆ ಶಿವಕುಮಾರ್ ಇನ್ನೂ ಕೂಡ ಪದಗ್ರಹಣ, ಸನ್ಮಾನದ ಗುಂಗಿನಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಿನ್ನೂ ಫೀಲ್ಡಿಗೇ ಇಳಿದಿಲ್ಲ ಎಂದು ಮಾತಿನ ಕುಟುಕಿದರು.
ಸಿಎಂ ಅವರಿಗೆ ಅಷ್ಟು ವಯಸ್ಸಾಗಿದ್ದರೂ ಕ್ರಿಯಾಶೀಲರಾಗಿದ್ದಾರೆ. ವಿಪಕ್ಷದವರು ಕಾಮಾಲೆ ಕಣ್ಣಿಂದ ನೋಡಿದರೆ ನಮ್ಮ ಕೆಲಸ ಕಾಣಲ್ಲ. ಸರಕಾರ ಎಲ್ಲದಕ್ಕೂ ಉತ್ತರ ಕೊಡಲು ಸಿದ್ಧವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.