"ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುವುದು ಸರ್ಕಾರದ ಜವಾಬ್ದಾರಿ'
ಉಡುಪಿ, ಏಪ್ರಿಲ್ 19: ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಮುಖ್ಯ. ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಮೀನುಗಾರಿಕೆ ಮತ್ತು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಿಎಂ ಲಾಕ್ ಡೌನ್ ಸಡಿಲಿಕೆ ನಿರ್ಧಾರ ವಾಪಸ್ ತೆಗೆದುಕೊಂಡ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಸಚಿವ ಪೂಜಾರಿ, ""ಲಾಕ್ ಡೌನ್ ಸಡಿಲಿಕೆಗೆ ಮುಖ್ಯಮಂತ್ರಿಗಳು ಒಲವು ತೋರಿದ್ದರು. ಕಠಿಣ ಜೀವನ ನಡೆಸಲು ಸಿದ್ಧ ಎಂಬ ಜನಾಭಿಪ್ರಾಯ ಮೂಡಿದೆ. ಜನರು ಕೊರೊನಾ ವೈರಸ್ ನಿಯಂತ್ರಿಸಲು ಲಾಕ್ ಡೌನ್ ಮುಂದುವರಿಸಿ ಎಂದಿದ್ದಾರೆ ಎಂದು ತಿಳಿಸಿದರು.
ನಿಖಿಲ್ ಮದುವೆಯಲ್ಲಿ ಕಾನೂನು ಉಲ್ಲಂಘನೆ: ಶ್ರೀನಿವಾಸ ಪೂಜಾರಿ ಆರೋಪ
ಜನರು ಮತ್ತು ಸರಕಾರದ ಮೇಲೆ ಆರ್ಥಿಕ ಹೊರೆ ಬರುವುದು ಸಹಜ, ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರಿಗೂ ಮನಸ್ಸು ಕಠೋರ ಮಾಡಿಕೊಳ್ಳಬೇಕು. ಎಲ್ಲರೂ ಸರಳ ಜೀವನ ನಡೆಸುವುದು ಅನಿವಾರ್ಯವಾಗಲಿದೆ ಎಂದರು.
ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಅಡ್ಡಿಯಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು. ಯಾಂತ್ರಿಕ ಮೀನುಗಾರಿಕೆ ಆರಂಭವಾದರೆ ಸಾವಿರಾರು ಜನ ಸೇರುತ್ತಾರೆ. ಮೀನುಗಾರಿಕೆಗೆ ಅವಕಾಶ ಹೆಚ್ಚಿಸಲು ಹಂತ ಹಂತವಾಗಿ ತೀರ್ಮಾನ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅನ್ಯರಾಜ್ಯದವರಿಂದ ರಾಜ್ಯದೊಳಗೆ ಮೀನುಗಾರಿಕೆ ಬಗ್ಗೆ ಮೀನುಗಾರರು ದೂರು ಕೊಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ, ಕಾನೂನು ಬಾಹಿರ ಮೀನುಗಾರಿಕೆ ತಡೆಯುವಂತೆ ಸೂಚನೆ ಕೊಟ್ಟಿದ್ದೇನೆ. ಕರಾವಳಿ ಕಾವಲು ಪಡೆಗೆ ಅವರು ಆದೇಶ ನೀಡಲಿದ್ದಾರೆ ಎಂದರು.
ಬೆಂಗಳೂರು, ಮುಂಬೈನಿಂದ ಸಾವಿರಾರು ಜನ ಕರೆ ಮಾಡುತ್ತಿದ್ದಾರೆ. ಕರಾವಳಿ ಮೂಲದ ಜನರು ಕರೆ ಮಾಡಿ ಊರಿಗೆ ಬರುತ್ತೇವೆ ಅಂತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ವ್ಯಾಪಕವಾಗಿದೆ. ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 2500 ಕಿಟ್, ಮಂದಾರ್ತಿ ದೇವಾಲಯ ದಿಂದ 2500 ಕಿಟ್, ಅನಂತೇಶ್ವರ ದೇವಸ್ಥಾನ ದಿಂದ 1000 ಆಹಾರ ಕಿಟ್ ವಿತರಣೆ ಮಾಡುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.