ಜಲಾವೃತ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರಿಗೆ ಧೈರ್ಯ ತುಂಬಿದ ಜಯಮಾಲಾ
ಉಡುಪಿ, ಆಗಸ್ಟ್.15: ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಇಂದು ಬುಧವಾರ ಬಹ್ಮಾವರದ ಉಪ್ಪೂರು ವ್ಯಾಪ್ತಿಯಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ್ಪೂರು ವ್ಯಾಪ್ತಿಯ ಕೆ.ಜಿ.ರೋಡ್, ಕುದ್ರುಬೆಟ್ಟು , ಹೆರೆಬೆಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. "ಜಲಾವೃತ ಪ್ರದೇಶದ ನಿವಾಸಿಗಳಿಗೆ ಎಲ್ಲಾ ರೀತಿಯ ಸಹಾಯ ಸಹಾಕಾರವನ್ನು ಜಿಲ್ಲಾಡಳಿತ ಒದಗಿಸಲಿದೆ. ಜನರು ಧೈರ್ಯದಿಂದ ಇರಬೇಕು" ಎಂದು ಸಚಿವೆ ಈ ಸಂದರ್ಭದಲ್ಲಿ ಸ್ಥಳೀಯರಿಗೆ ಮನವಿ ಮಾಡಿದರು.
ಕೇರಳ ನೆರೆ ಪೀಡಿತರ ನೆರವಿಗೆ ತಿಂಗಳ ವೇತನ ನೀಡಿದ ರೇವಣ್ಣ, ಉಗ್ರಪ್ಪ
ಅವಶ್ಯಕ ಸಂದರ್ಭದಲ್ಲಿ ಜನತೆ ಸ್ಥಳೀಯಾಡಳಿತವನ್ನು ಸಂಪರ್ಕಿಸಿ. ಜಿಲ್ಲಾಡಳಿತ ಕೂಡ ನೆರೆ ಪೀಡಿತ ಪ್ರದೇಶಗಳ ಬಗ್ಗೆ ನಿಗಾ ಇರಿಸಿದೆ ಎಂದು ಸಚಿವೆ ಸ್ಥಳೀಯರಿಗೆ ಧೈರ್ಯತುಂಬಿದರು.
ಇದೇ ಸಂದರ್ಭದಲ್ಲಿ ಜಲಾವೃತಗೊಂಡಿರುವ ಉಪ್ಪೂರು ಹೆರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಯಮಾಲಾ ಅವರು ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸಿದರು. ಶಾಲೆಯ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ನಿಗಾ ವಹಿಸುವಂತೆ ತಹಶೀಲ್ದಾರಿಗೆ ನಿರ್ದೇಶನ ನೀಡಿದರು.
ಉಡುಪಿಯಲ್ಲೂ ಅನಾಹುತ ಸೃಷ್ಟಿಸಿದ ಮಳೆ, ರೆಡ್ ಅಲರ್ಟ್ ಘೋಷಣೆ
ನೆರೆಪೀಡಿತ ಎಲ್ಲಾ ಪ್ರದೇಶದ ಜನರಿಗೂ ಆಹಾರ ಪೂರೈಕೆಗೆ ತೊಂದರೆಯಾಗದಂತೆ ನಿಗಾವಹಿಸುವಂತೆ ಸಚಿವರು, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವಶ್ಯಕ ಸಂದರ್ಭದಲ್ಲಿ ನೆರೆಪೀಡಿತ ಪ್ರದೇಶದ ಜನರನ್ನು ಸ್ಥಳಾಂತರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ನೆರೆಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಸಂಪ ಪೂಜಾರಿ ಎಂಬುವವರ ಮನೆಗೆ ಶೌಚಾಲಯ ಇಲ್ಲದಿರುವುದು ಸಚಿವರ ಗಮನಕ್ಕೆ ಬಂತು. ಈ ಬಗ್ಗೆ ಸಂಪ ಪೂಜಾರಿ ಹಾಗೂ ಅವರ ಪುತ್ರನ ಬಳಿ ನೋವು ಆಲಿಸಿದ ಸಚಿವೆ ನೆರೆ ನೀರು ಇಳಿದ ತಕ್ಷಣ ಇವರಿಗೆ ಸರಕಾರಿ ಯೋಜನೆಯ ಮೂಲಕ ಶೌಚಾಲಯ ನಿರ್ಮಿಸಿಕೊಡಬೇಕೆಂದು ಸ್ಥಳದಲ್ಲಿಯೇ ತಹಾಶಿಲ್ದಾರ್ ಅವರಿಗೆ ಆದೇಶಿಸಿದರು.