ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ: ನಾಲ್ಕು ಬೋಟ್ ವಶಕ್ಕೆ
ಉಡುಪಿ, ಜೂನ್ 23: ಉಡುಪಿ ಜಿಲ್ಲೆಯ ಪಡುತೋನ್ಸೆ ಗ್ರಾಮದ ಕಂಬಳ ತೋಟ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸ್ವರ್ಣಾ ನದಿಯ ಒಡಲಲ್ಲಿ ನಿರಂತರ ಅಕ್ರಮ ಮರಳುಗಾರಿಕೆ ನಡೆಸುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ನಾಲ್ಕು ಬೋಟ್ಗಳನ್ನು ವಶಕ್ಕೆ ಪಡೆದುಕೊಂಡರು.
ಅಧಿಕಾರಿಗಳು ದಾಳಿ ಮಾಡುವ ವೇಳೆ ಯಥಾಪ್ರಕಾರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಎರಡು ಪುಟ್ಟ ದೋಣಿಗಳನ್ನು ಮಲ್ಪೆ ಠಾಣೆಗೆ ವರ್ಗಾಯಿಸಲಾಗಿದ್ದು, ಬೃಹತ್ ಗಾತ್ರದ ಎರಡು ದೋಣಿಗಳನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.ಇದರ ಜೊತೆಗೆ ಮರಳುಗಾರಿಕೆಗೆ ಬಳಸುತ್ತಿದ್ದ ಪರಿಕರಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
Recommended Video
ಈ ಹಿಂದೆಯೂ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದಾಗ ದಾಳಿ ಮಾಡಿ ಬೋಟ್ಗಳನ್ನು ಸೀಜ್ ಮಾಡಲಾಗಿತ್ತು ಮಾತ್ರವಲ್ಲ, ಗಣಿ ಇಲಾಖೆ ಅಧಿಕಾರಿಗಳು ದಂಡವನ್ನೂ ಹಾಕಿದ್ದರು. ಜೊತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರವಾಗಿಯೂ ದೂರು ದಾಖಲಿಸಿಕೊಳ್ಳಲಾಗಿತ್ತು. ಇಷ್ಟಾದರೂ ಅಕ್ರಮ ಮರಳುಗಾರಿಕೆ ನಿಂತಿರಲಿಲ್ಲ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.