ಉಡುಪಿಯಲ್ಲಿ ಹಲಸು ಮೇಳ: ರುಚಿ ನೋಡಿ ಬಾಯಿ ಚಪ್ಪರಿಸಿದ ಜನರು
Recommended Video
ಉಡುಪಿ, ಜೂನ್.25: ಹಲಸು ಏಪ್ರಿಲ್ ತಿಂಗಳಿನಿಂದ ಜುಲೈ ಅಥವಾ ಆಗಸ್ಟ್ ವರೆಗೆ ಸಿಗುತ್ತದೆ. ಲೇಟಾಗಿ ಕಾಯಿ ಬಿಟ್ಟಿದ್ದ ಮರದಲ್ಲಿ ಮಾತ್ರ ಹಲಸಿನ ಹಣ್ಣುಗಳು ಸೆಪ್ಟಂಬರ್ ತಿಂಗಳಿನವರೆಗೆ ಇರುತ್ತದೆ. ನಂತರ ತಿನ್ನಬೇಕೆಂದರೆ ಮುಂದಿನ ವರ್ಷ ಏಪ್ರಿಲ್ ವರೆಗೂ ಕಾಯಬೇಕು.
ಮಳೆ ಬಿದ್ದ ಮೇಲೆ ಹಲಸಿನ ಹಣ್ಣನ್ನು ತಿಂದರೆ ಕಾಯಿಲೆ ಬರಬಹುದು ಎಂಬ ಭಯ ನಮ್ಮಲ್ಲಿ ಅನೇಕರಲ್ಲಿ ಇದೆ. ಆದರೆ ಈ ಹಣ್ಣು ಕಾಯಿಲೆ ತರುವುದಿಲ್ಲ, ಕಾಯಿಲೆ ಹೋಗಲಾಡಿಸಲು ಸಹಕಾರಿಯಾಗಿದೆ.
ಹಲಸು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ಹೃದಯದ ಸ್ವಾಸ್ಥ್ಯ ಹೆಚ್ಚುತ್ತದೆ. ಹೀಗೆ ಹತ್ತಕ್ಕೂ ಅಧಿಕ ಪ್ರಯೋಜನಗಳನ್ನು ಹೊಂದಿರುವ ಹಲಸು ಹೆಚ್ಚಿನ ಶ್ರಮ ಇಲ್ಲದೆ ಬೆಳೆಯುವ ನಿರ್ಲಕ್ಷಿತ ಫಲ.
ಇದು ಬಡವರ ಹಣ್ಣೂ ಹೌದು. ಯಥೇಚ್ಛವಾಗಿ ಸಿಗೋ ಹಲಸಿನ ಹಣ್ಣು ಸರ್ವೋಪಯೋಗಿ ಕೂಡ. ಇಂತಹ ಹಲಸಿನ ಮೇಳವನ್ನು ಉಡುಪಿಯಲ್ಲಿ ತೋಟಗಾರಿಕಾ ಇಲಾಖೆ ಏರ್ಪಡಿಸಿತ್ತು. ಎರಡು ದಿನಗಳ ಕಾಲ ನಡೆದ ಹಲಸು ಮೇಳದಲ್ಲಿ ಹಲಸು ಪ್ರಿಯರು ಮುಗಿಬಿದ್ದು ಹಲಸಿನ ವೈವಿಧ್ಯಮಯ ತಿನಿಸುಗಳನ್ನು ಚಪ್ಪರಿಸಿದರು.
ಬಾಯಿ ಚಪ್ಪರಿಸಿದ ಜನರು
ಹಲಸಿನ ಹಪ್ಪಳ ,ಗಾರಿಗೆ ,ಮುಲ್ಕ ,ಚಿಪ್ಸ್ ,ಉಡ್ಲುಂಗ ,ಗಟ್ಟಿ ,ಇಡ್ಲಿ, ಹಲಸಿನ ಬೀಜದ ಬರ್ಫಿ,ಹಲ್ವಾ ,ಬೆರಟಿ ,ಐಸ್ ಕ್ರೀಂ...ಅಬ್ಬಾ...ಒಂದೇ ಎರಡೇ... ಹಲಸುಮೇಳದಲ್ಲಿ ಹಲಸಿನ ವೈವಿಧ್ಯಮಯ ರುಚಿಗಳ ಲೋಕವೇ ಅನಾವರಣಗೊಂಡಿತ್ತು.
ಸೂಜಿಗಲ್ಲಿನಂತೆ ಸೆಳೆದ ಮೇಳ
ದುಬಾರಿಯಲ್ಲದ , ಬಡವರ ಕೈಗೂ ಎಟಕುವ ಹಣ್ಣುಗಳ ಪೈಕಿ ಹಲಸಿಗೆ ಮೊದಲ ಸ್ಥಾನ. ಇಂತಹ ಹಲಸಿನ ಹಣ್ಣಿನ ಮೇಳ ನಡೆದರೆ ಕೇಳಬೇಕೇ? ಹಲಸು ಪ್ರಿಯರು ಉಡುಪಿಯಲ್ಲಿ ನಡೆದ ಮೇಳಕ್ಕೆ ಲಗ್ಗೆ ಹಾಕಿ ವೆರೈಟಿ ಹಲಸಿನ ತಿಂಡಿಗಳನ್ನು ಸವಿದು ಖುಷಿಪಟ್ಟರು.
ಮಕ್ಕಳು, ಮಹಿಳೆಯರು ವೃದ್ಧರಾದಿಯಾಗಿ ಎಲ್ಲ ವಯಸ್ಸಿನವರನ್ನೂ ಈ ಮೇಳ ಸೂಜಿಗಲ್ಲಿನಂತೆ ಸೆಳೆದಿತ್ತು.
ಪ್ರಾತ್ಯಕ್ಷಿಕೆ ವ್ಯವಸ್ಥೆ
ಬರೀ ತಿನಿಸುಗಳಷ್ಟೇ ಅಲ್ಲದೆ, ಹಲಸಿನ ವೈವಿಧ್ಯಮಯ ತಳಿಯ ಗಿಡಗಳೂ ಇಲ್ಲಿದ್ದವು. ಮನೆಯಲ್ಲೂ ಬೆಳೆಸಬಹುದಾದ ಹಲಸಿನ ತಳಿಗಳನ್ನು ಜನ ಖರೀದಿಸುವುದು ಕಂಡು ಬಂತು. ಜೊತೆಗೆ ಹಲಸು ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ವ್ಯವಸ್ಥೆಯನ್ನೂ ಇಲಾಖೆ ಮಾಡಿತ್ತು.
ಸೂಪರ್ ಎಂದ ಜನ
ಯುವ ಉದ್ಯಮಿ ಸುಹಾಸ್ ಎಂಬುವರಂತೂ ಹಲಸಿನ ಐಸ್ ಕ್ರೀಂ ಪರಿಚಯಿಸಿ ಪ್ರದರ್ಶನಕ್ಕೆ ಬಂದ ಹಲಸು ಪ್ರಿಯರ ಹೊಟ್ಟೆ ತಣಿಸಿದ್ರು..ಒಟ್ಟಾರೆ ಮುಂಗಾರು ಮಳೆಯ ಹೊತ್ತಿಗೆ ಹಲಸಿನ ಘಮದೊಂದಿಗೆ ನಡೆದ ಈ ಮೇಳಕ್ಕೆ ಹಲಸು ಪ್ರಿಯರ ಸ್ಪಂದನೆ ಸೂಪರ್ ಆಗಿತ್ತು.