ಸರ್ಕಾರದಿಂದ ಸಾಮೂಹಿಕ ವಿವಾಹ; ನೋಂದಣಿ ಹೇಗೆ?
ಉಡುಪಿ, ಡಿಸೆಂಬರ್ 6 : ಕರ್ನಾಟಕ ಸರ್ಕಾರದ ವತಿಯಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಸಾಮೂಹಿಕ ವಿವಾಹವನ್ನು ಆಯೋಜನೆ ಮಾಡಲಾಗುತ್ತಿದೆ. 2020ರ ಏಪ್ರಿಲ್ 26ರಂದು ಸಾಮೂಹಿಕ ವಿವಾಹ ನಡೆಯಲಿದೆ.
ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. " ಉಡುಪಿ ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯಲ್ಲಿನ 23 ಎ ದರ್ಜೆಯ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ" ಎಂದರು.
ಮುಜರಾಯಿ ದೇವಾಲಯದಲ್ಲಿ ಸಾಮೂಹಿಕ ವಿವಾಹ; ಮುಹೂರ್ತ ನಿಗದಿ
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಯಿಂದ ಅರ್ಜಿ ಪಡೆದು ಮಾರ್ಚ್ 27ರೊಳಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. 27/3/2020ರಂದು ವಧು-ವರರ ವಿವರ ನೋಂದಣಿಗೆ ಕಡೆ ದಿನ.
ಮುಜರಾಯಿ ದೇವಾಲಯಗಳಲ್ಲಿ ಸರ್ಕಾರದಿಂದ ಸಾಮೂಹಿಕ ವಿವಾಹ
1/4/2020 ರಂದು ನೋಂದಾಯಿತ ವಧು ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಿಸಲಾಗುತ್ತದೆ. 6/4/2020ರಂದು ವಧು-ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. 11/4/2020 ರಂದು ಅಂತಿಮ ವಧು-ವರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಹದಿನೈದು ತೃತೀಯ ಲಿಂಗಿ ಜೋಡಿಗಳ ಸಾಮೂಹಿಕ ವಿವಾಹ
ವಿವಾಹಕ್ಕೆ ಮಾನದಂಡಗಳಲ್ಲ
"ಮುಜರಾಯಿ ಇಲಾಖೆ ಆಯೋಜಿಸುವ ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತ ಹಾಗೂ 2ನೇ ವಿವಾಹಕ್ಕೆ ಅವಕಾಶವಿಲ್ಲ. ವಿವಾಹವಾಗುವ ದಂಪತಿಗಳಿಗೆ ಎಪಿಎಲ್, ಬಿಪಿಎಲ್ ಎಂಬ ಮಾನದಂಡವಿಲ್ಲ" ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.
ಸರ್ಕಾರದಿಂದ ಪ್ರೋತ್ಸಾಹಧನ
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವರನಿಗೆ ಪೋತ್ಸಾಹಧನವಾಗಿ (ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) ರೂ. 5000 ಮತ್ತು ವಧುವಿಗೆ (ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ) 10000 ಹಾಗೂ ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) ಇದಕ್ಕಾಗಿ 40000 ಗಳನ್ನು ನೀಡಲಾಗುತ್ತದೆ. ಈ ಮೊತ್ತವನ್ನು ವಿವಾಹವಾದ ದಿನವೇ ಸಂಬಂಧಪಟ್ಟ ವಧು-ವರರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮೆ ಮಾಡಲಾಗುತ್ತದೆ. ವಿವಾಹಕ್ಕೆ ಆಗಮಿಸುವ ವಧು-ವರರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಹಾಗೂ ಇತರೆ ವ್ಯವಸ್ಥೆಗೆ ತಗಲುವ ವೆಚ್ಚವನ್ನು ದೇವಾಲಯಗಳ ನಿಧಿಯಿಂದ ಭರಿಸಲಾಗುತ್ತದೆ.
ಕೊಲ್ಲೂರು ದೇವಾಲಯ
ಕೊಲ್ಲೂರು ದೇವಾಲಯದಲ್ಲಿ ಉಡುಪಿ ಜಿಲ್ಲೆಗಿಂತ ಹೊರ ರಾಜ್ಯದಿಂದ ಬಂದು ಮದುವೆಯಾಗುವ ಸಂಖ್ಯೆಯೇ ಹೆಚ್ಚಾಗಿದೆ. ಅವರ ಸಂಪ್ರದಾಯಕ್ಕೆ ತಕ್ಕಂತೆ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಲು ಪ್ರೇರೇಪಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಅಸಾಧ್ಯವಾದಲ್ಲಿ ಅನುಮತಿ ಮೇರೆಗೆ ಸಮೀಪದ ದೇವಸ್ಥಾನದಲ್ಲಿ ನಡೆಸುವಂತಾಗಬೇಕು. ಮದುವೆ ಖರ್ಚು ಭರಿಸಲು ದೇವಾಲಯ ಮಂಡಳಿ ಅಶಕ್ತವಾಗಿದ್ದಲ್ಲಿ ಸರ್ಕಾರದಿಂದಲೇ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಸಹಾಯವಾಣಿ ಆರಂಭ
ಸಾಮೂಹಿಕ ವಿವಾಹ ಏರ್ಪಡಿಸುವ ಕುರಿತಂತೆ ಸಂಬಂಧಪಟ್ಟ ದೇವಾಲಯಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆದು ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚಿಸಲಾಗಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಉಡುಪಿ ಜಿಲ್ಲೆಯ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 0820- 2575660ಕ್ಕೆ ಕರೆ ಮಾಡಬಹುದು.