ಗೋವುಗಳ ಸಾಮೂಹಿಕ ಹತ್ಯೆ; ಸ್ತಬ್ಧವಾದ ಉಡುಪಿ ಜಿಲ್ಲೆಯ ಗಂಗೊಳ್ಳಿ
ಉಡುಪಿ, ಅಕ್ಟೋಬರ್ 1: ಗೋಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿ ಮತ್ತೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಗೋವುಗಳನ್ನು ಸಾಮೂಹಿಕ ಹತ್ಯೆ ಮಾಡುವ ವಿಡಿಯೋ ವಿಚಾರವಾಗಿ ಉಡುಪಿ ಜಿಲ್ಲೆಯ ಗಂಗೊಳ್ಳಿ ಸ್ತಬ್ಧವಾಗಿದೆ.
ಹಾರಾಡುತ್ತಿರುವ ಕೇಸರಿ ಪತಾಕೆ, ಆಕ್ರೋಶದ ಘೋಷಣೆ, ಸಹಸ್ರ ಸಹಸ್ರ ಸಂಖ್ಯೆಯ ಜನರಿಂದ ಮೆರವಣಿಗೆ. ಊರಿಗೆ ಊರೇ ಬಂದ್. ಈ ದೃಶ್ಯ ಕಂಡು ಬಂದಿದ್ದು, ಉಡುಪಿ ಜಿಲ್ಲೆಯ ಗಂಗೊಳ್ಳಿ ಗ್ರಾಮದಲ್ಲಿ.
ಗೋವುಗಳನ್ನು ಸಾಮೂಹಿಕ ಹತ್ಯೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯು ಉಡುಪಿ ಜಿಲ್ಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳು ಎರಡೇ ದಿನದಲ್ಲಿ ಬಿಡುಗಡೆಯಾಗಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ. ಈ ಹಿನ್ನಲೆ ಗಂಗೊಳ್ಳಿ ಪೇಟೆ ಬಂದ್ ಮಾಡಿ ಆಕ್ರೋಶ ವ್ಯಕ್ಯಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಗಂಗೊಳ್ಳಿ ಶಾಂತವಾದ ಕಡಲತಡಿ. ಇತ್ತೀಚೆಗೆ ಈ ಊರಲ್ಲಿ ಗೋಹತ್ಯೆ ಮಾಡಿ, ಗೋವಿನ ಕತ್ತು ಕೊಯ್ಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ದುರುಳರು ವಿಕೃತಿ ಮೆರೆದಿದ್ದರು. ಗೋ ಪ್ರೇಮಿಗಳನ್ನು ಕೆರಳಿಸಿ ಸಂಭ್ರಮ ಪಟ್ಟಿದ್ದರು. ಬಳಿಕ ಘಟನೆ ಕುರಿತಂತೆ ಹಿಂದೂ ಸಂಘಟನೆಯವರು ಕೇಸ್ ನೀಡಿದ ಪರಿಣಾಮ ಪೊಲೀಸರು ಇಲಿಯಾಸ್, ಮಾಲಿ ಸುಭಾನ್, ಅಬ್ಬು ಸಾಲಿ ಎಂಬುವವರನ್ನು ಬಂಧನ ಮಾಡಿದ್ದರು.
ಆದರೆ, ಬಂಧನವಾಗಿ ಮೂರೇ ಮೂರು ದಿನದಲ್ಲಿ ಜಾಮೀನು ಪಡೆದು ಆರೋಪಿಗಳು ಬಿಡುಗಡೆಗೊಂಡಿದ್ದಾರೆ. ಇದು ಊರಿನವರನ್ನು ಮತ್ತೆ ಕೆರಳಿಸಿದೆ. ಹೀಗಾಗಿ ಇದೇ ವಿಚಾರವನ್ನು ಮುಂದಿಟ್ಟು ಹಿಂದೂ ಜಾಗರಣ ವೇದಿಕೆಯಿಂದ ಗಂಗೊಳ್ಳಿ ಬಂದ್ ಮಾಡಿದೆ. ಬೃಹತ್ ಪ್ರತಿಭಟನಾ ಸಭೆ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೂ ಮುನ್ನ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ, ಗೋವುಗಳನ್ನು ಸಾಮೂಹಿಕ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದರೂ, ಗೋ ಹತ್ಯೆಗಳಾಗುತ್ತಿವೆ. ಗೋಹತ್ಯೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವವರನ್ನು ಗಡಿಪಾರು ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಕೆ. ಟಿ. ಉಲ್ಲಾಸ್ ಆಗ್ರಹಿಸಿದ್ದಾರೆ.
ಇನ್ನು ಗೋ ಹತ್ಯೆ ಮಾಡಿ, ವಿಡಿಯೋ ವೈರಲ್ ಮಾಡಿದವರನ್ನು ಕೂಡಲೇ ಮತ್ತೆ ಬಂಧಿಸಿ ಗಡಿಪಾರು ಮಾಡಬೇಕು ಇಲ್ಲದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.
ಪ್ರತಿಭಟನೆ ರಾಮ ಮಂದಿರದೆಡೆಗೆ ಸಾಗುತ್ತಿದ್ದ ವೇಳೆ ಕೆಲ ಅನ್ಯಮತೀಯರು ಬಂದು ಮೆರವಣಿಗೆ ವಿರೋಧ ವ್ಯಕ್ತಪಡಿಸಿದಾಗ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆದರೆ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ.
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿತ್ತು. ಸದ್ಯಕ್ಕೆ ಪ್ರತಿಭಟನೆ ಶಾಂತವಾಗಿಯೇ ಕೊನೆಗೊಂಡಿದ್ದು, ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಈ ಬಗ್ಗೆ ಬೀದರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, "ಘಟನೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ಆರೋಪಿಗಳು ಬಂಧನವಾಗಿರುವುದು ಗೊತ್ತಿದೆ. ಆದರೆ, ಬಿಡುಗಡೆಯಾಗಿರುವುದು ಗೊತ್ತಿಲ್ಲ. ಆರೋಪಿಗಳನ್ನು ನಾನು ಯಾವುದೇ ಕಾರಣಕ್ಕೂ ಬಿಡಲ್ಲ, ಕಠಿಣ ಶಿಕ್ಷೆ ನೀಡುವುದಾಗಿ," ಹೇಳಿದ್ದಾರೆ.