ಉಡುಪಿಯಲ್ಲಿ ಕಿಡಿಗೇಡಿಗಳಿಂದ ಮಾರ್ವಾಡಿ ಹಟಾವೋ ಅಭಿಯಾನ: ತೀವ್ರ ಆಕ್ಷೇಪ
ಉಡುಪಿ, ಅಕ್ಟೋಬರ್ 27: ಉಡುಪಿಯಲ್ಲಿ ಕೆಲವು ಕಿಡಿಗೇಡಿಗಳು ಮಾರ್ವಾಡಿ ಹಟಾವೊ ಅಭಿಯಾನ ಹಮ್ಮಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ "ನಮ್ಮೂರು ನಮ್ಮ ಜನ, ನಮ್ಮ ವ್ಯಾಪಾರ ನಮ್ಮ ಜನರಿಗೆ, ಮಾರ್ವಾಡಿ ಹಠಾವೋ' ಎಂಬ ಪೋಸ್ಟ್ ಗಳನ್ನು ಫೇಸ್ ಬುಕ್ ಮೂಲಕ ಹಾಕುತ್ತಿದ್ದಾರೆ.
ಮಾರ್ವಾಡಿ ಹಠಾವೋ ಅಭಿಯಾನ ಮಾರ್ವಾಡಿಗಳ ಗಮನಕ್ಕೂ ಬಂದಿದ್ದು, ಈ ರೀತಿ ಪೋಸ್ಟ್ ಹಾಕಿದವರ ವಿರುದ್ಧ ಮಾರ್ವಾಡಿ ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಕೃಷ್ಣ ಮಠದಲ್ಲಿ ಪಶ್ಚಿಮ ಜಾಗರ ಪೂಜೆ ಆರಂಭ
ಈ ಕುರಿತು ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಮಾರ್ವಾಡಿ ವರ್ತಕ ನಾರಾಯಣ ಸಿಂಗ್, ನಾವು ಉಡುಪಿಯಲ್ಲಿ ಎರಡು ಮೂರು ದಶಕಗಳಿಂದ ವ್ಯಾಪಾರ ನಡೆಸುತ್ತಿದ್ದೇವೆ. ಇದನ್ನು ಸಹಿಸದ ಕೆಲವರು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಯಾವುದೋ ಒಂದು ಅಂಗಡಿಯಲ್ಲಿ ಏನೋ ಸಣ್ಣಪುಟ್ಟ ಸಮಸ್ಯೆ ಆಗಿರಬಹುದು. ಹಾಗೆಂದು ಎಲ್ಲ ಮಾರ್ವಾಡಿಗಳು ಕೂಡ ಮೋಸಗಾರರು ಎಂದರ್ಥವಲ್ಲ. ಯಾರೋ ಮಾಡಿದ ತಪ್ಪನ್ನು ಎಲ್ಲರ ಮೇಲೆ ಹೊರಿಸಿ, ನೀವು ಮಾರ್ವಾಡಿಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂಬ ಅಭಿಯಾನ ಹಮ್ಮಿಕೊಳ್ಳುವುದು ತಪ್ಪು ಎಂದು ಹೇಳಿದರು.
Recommended Video
ನಾವು ಕೂಡಾ ಭಾರತೀಯರು, ದೇಶದ ಯಾವ ಭಾಗದಲ್ಲಿ ಬೇಕಾದರೂ ಹೋಗಿ ವ್ಯಾಪಾರ ಮಾಡುವ ಅವಕಾಶ, ಹಕ್ಕು ಎಲ್ಲರಿಗೂ ಇದೆ. ನಾವಿಲ್ಲಿ ಎಲ್ಲರ ಜೊತೆ ತುಂಬಾ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದೇವೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಮಾರ್ವಾಡಿ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಮಾತ್ರವಲ್ಲ, ಈ ರೀತಿ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು.