ಮಣಿಪಾಲ ವಿದ್ಯಾರ್ಥಿಯ ಕಿರುಚಿತ್ರಕ್ಕೆ ರಾಷ್ಟ್ರಪ್ರಶಸ್ತಿ
ಮಣಿಪಾಲ, ಜುಲೈ 29 : ಕೇವಲ 250ರೂ. ಖರ್ಚು ಮಾಡಿ ಮಣಿಪಾಲದ ವಿದ್ಯಾರ್ಥಿಗಳು ನಿರ್ಮಿಸಿದ 2.58 ನಿಮಿಷಗಳ ಕನ್ನಡ ಕಿರುಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ.
ಮಣಿಪಾಲ ವಿವಿಯ ಸ್ಕೂಲ್ ಆಫ್ ಕಮ್ಯುನಿಕೇಶನ್ ವಿದ್ಯಾರ್ಥಿ ಸೌರಭ್ ಆಚಾರ್ಯ ಅಲೆವೂರು (ನಿರ್ದೇಶಕ), ಕಾರ್ತಿಕ್ ಶೆಟ್ಟಿ ಜತೆ ರೂಪಿಸಿದ 'ಬಾನುಲಿ ಕೇಂದ್ರ' ಕಿರು ಚಲನಚಿತ್ರ, ಸ್ಪರ್ಧೆಯಲ್ಲಿದ್ದ 40 ಕಿರುಚಿತ್ರಗಳ ಪೈಕಿ ದಿ ಬೆಸ್ಟ್ ಎನಿಸಿದೆ.[ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ]
ಕಾಮನ್ ವೆಲ್ತ್ ಎಜುಕೇಶನ್ ಮೀಡಿಯಾ ಸೆಂಟರ್ ಫಾರ್ ಏಷಿಯಾ (ಸಿಇಎಂಸಿಎ) ಮತ್ತು ಯುನೈಟೆಡ್ ನೇಷನ್ಸ್ ಎಜ್ಯುಕೇಶನಲ್, ಸೈಂಟಿಫಿಕ್ ಆಂಡ್ ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ) 'ಸಮುದಾಯ ರೇಡಿಯೋ ಮೂಲಕ ವಿಕೋಪಗಳ ನಿರ್ವಹಣೆ, ಜೀವ ರಕ್ಷಣೆ' ಕುರಿತು 3 ನಿಮಿಷಗಳ ಕಿರುಚಿತ್ರ ತಯಾರಿಯ ಕಮ್ಯುನಿಟಿ ರೇಡಿಯೋ ವೀಡಿಯೊ ಛಾಲೆಂಜ್ 2016 ರಾಷ್ಟ್ರ ಮಟ್ಟದ ಸ್ಪರ್ಧೆ ಆಯೋಜಿಸಿತ್ತು.[ಗಿನ್ನಿಸ್ ದಾಖಲೆ ಮಾಡಿದ ಮಂಗಳೂರಿನ ಯುವಕ]
ಎರಡು ವರ್ಷದಿಂದ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಈ ಸ್ಪರ್ಧೆಯ ಮಾಹಿತಿಯನ್ನು ಮಣಿಪಾಲ ಕಮ್ಯುನಿಟಿ ರೇಡಿಯೋದ ಶ್ಯಾಮ್ ಭಟ್ ಅವರು ಎಸ್ಓಸಿ ಅಂತಿಮ ವರ್ಷದ ವಿದ್ಯಾರ್ಥಿ ಸೌರಭ್ಗೆ ನೀಡಿ, ಪ್ರೋತ್ಸಾಹ ನೀಡಿದ್ದರು.[ಮಿಸಿಸಿಪ್ಪಿಯ ರಸ್ತೆಗೆ ಮಣಿಪಾಲದ ವಿದ್ಯಾರ್ಥಿ ಹೆಸರು]
ಈ ಕಿರಿಚಿತ್ರದ ಕಥೆ, ಶೂಟಿಂಗ್, ಐಡಿಯಾ ಎಲ್ಲವೂ ಸೌರಭ್ ಅವರದ್ದು. ಕೊನೆಗೆ ನಿರ್ದೇಶಕರಾದ ಸೌರಬ್ ಮುಖ್ಯ ಪಾತ್ರಕ್ಕೆ ಶ್ಯಾಮ್ ಭಟ್ ಅವರನ್ನೇ ಆಯ್ಕೆ ಮಾಡಿದರು. ಮಲ್ಪೆ ಬಂದರಿನಲ್ಲಿ ಎರಡು ದಿನಗಳ ಕಾಲ ನಾಲ್ಕು ಗಂಟೆ ಚಿತ್ರೀಕರಣ ನಡೆದಿತ್ತು.
ಕಥೆಯೇನು? : ಮೀನುಗಾರ ಮಹಿಳೆಯ ಗಂಡ ಸಮುದ್ರಕ್ಕೆ ಸಹವರ್ತಿಗಳೊಂದಿಗೆ ತೆರಳುತ್ತಾನೆ. ಮನೆಯಲ್ಲಿರುವ ಪತ್ನಿ ಸಮುದಾಯ ರೇಡಿಯೋ ಕೇಳುತ್ತಿರುತ್ತಾಳೆ. 24 ಗಂಟೆಯೊಳಗೆ ಕಡಲಲ್ಲಿ ತೂಫಾನ್ ಬರಲಿದೆ, ಮೀನುಗಾರರು ಸಮುದ್ರದಿಂದ ದಡಕ್ಕೆ ಕೂಡಲೇ ಬನ್ನಿ ಎನ್ನುವ ಪ್ರಕಟಣೆ ಬಿತ್ತರವಾದಾಗ ಗಾಬರಿಯಾಗುತ್ತಾಳೆ.
ಸಮುದ್ರ ದಡಕ್ಕೆ ಓಡಿ ಬಂದಾಗ ಕಡಲ ಮೀನುಗಾರಿಕೆಗೆ ತೆರಳಿದ ದೋಣಿಗಳು ಒಂದೊಂದಾಗಿ ಮರಳಿದರೂ ಪತಿ ಇದ್ದ ಬೋಟ್ ಕಾಣದೆ ಕಂಗಾಲಾಗುತ್ತಾಳೆ, ಜತೆಗಿದ್ದ ಮೀನುಗಾರರು ಆತಂಕ ಹೊಂದಿದಾಗ 'ಅಕ್ಕೊಳ್ಳಿ ಬೋಟು ಬಂತು' ಎನ್ನುವ ಸಂತಸದ ಕೂಗು ಕೇಳುತ್ತದೆ.
ಶೋಭಾ ಅಲೆವೂರು, ಎಸ್ಓಸಿ ವಿದ್ಯಾರ್ಥಿನಿ ಸಪ್ನಾ ಹಾಗೂ 12 ಮಂದಿ ಸಹ ಕಲಾವಿದರು ಕಿರು ಚಿತ್ರದಲ್ಲಿದ್ದಾರೆ. ದೆಹಲಿಯಲ್ಲಿ ಇತ್ತೀಚಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಪ್ರಶಸ್ತಿ ಮತ್ತು 30 ಸಾವಿರ ನಗದು ಬಹುಮಾನವನ್ನು ಚಿತ್ರತಂಡಕ್ಕೆ ನೀಡಿದ್ದಾರೆ.