ನಿರ್ಜನ ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಮಣಿಪಾಲದಲ್ಲಿ ಅರೆಸ್ಟ್
ಉಡುಪಿ, ಆಗಸ್ಟ್ 14: ನಿರ್ಜನ ರಸ್ತೆಯಲ್ಲಿ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ತಂಡವೊಂದನ್ನು ಮಣಿಪಾಲ ಪೊಲೀಸರು ಭೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಓರ್ವ ಅಪ್ರಾಪ್ತ ಸೇರಿದಂತೆ ಐವರು ಸೇರಿ ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅತೀಶ್ ಡಿಸಿಲ್ವಾ (22), ಪ್ರೇಮನಾಥ್ (19), ಯೋಗೀಶ್ (19), ಸಂದೇಶ್ (18) ಮತ್ತು ಓರ್ವ ಅಪ್ರಾಪ್ತ ಬಂಧಿತರು.
ಸಿಸಿಬಿ ಬಲೆಗೆ ಬಿದ್ದ ದಡಿಯಾ ಉಮೇಶ, ಸೈಕೋ ಅಂಡ್ ಗ್ಯಾಂಗ್
ಆರೋಪಿಗಳು ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಸಗ್ರಿ ಶಾಲೆಗೆ ಹೋಗುವ ರಸ್ತೆಯಲ್ಲಿ ರಾತ್ರಿ ವೇಳೆ ಮೂಡುಸಗ್ರಿ ನಿವಾಸಿ ನರಸಿಂಹ ನಾಯಕ್ ಅವರ ಮೇಲೆ ಹಲ್ಲೆ ಮಾಡಿ 24 ಗ್ರಾಂ ತೂಕದ ಸುಮಾರು 70,000 ರೂಪಾಯಿ ಮೌಲ್ಯದ ಚಿನ್ನದ ಸರ, 29,000 ರೂಪಾಯಿ ಮೌಲ್ಯದ ಮೊಬೈಲ್ ಹಾಗೂ ಎ.ಟಿ.ಎಂ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಸಹಿತ ಸುಮಾರು 31,000 ರೂಪಾಯಿ ನಗದು ಇದ್ದ ಪರ್ಸನ್ನು ಸುಲಿಗೆ ಮಾಡಿದ್ದರು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕೆ.ಟಿ.ಎಂ ಬೈಕ್, ಡಿಯೋ ಸ್ಕೂಟರ್ ಹಾಗೂ ವಿವೋ ಮೊಬೈಲ್ ವಶಪಡಿಸಿಕೊಂಡು, ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.