ದೈವಪಾತ್ರಿಗೆ ಅಣಕ: ಕ್ಷಮೆ ಯಾಚಿಸಿದ ವೇಷಧಾರಿ
ಉಡುಪಿ, ಸೆಪ್ಟೆಂಬರ್ 7: ದೈವದ ಪಾತ್ರಿಯ ವೇಷ ಧರಿಸಿ ವ್ಯಕ್ತಿಯೊಬ್ಬ ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಘಟನೆ ವಿವಾದಕ್ಕೆ ಕಾರಣವಾಗಿದ್ದು, ಕೊನೆಗೆ ವೇಷಧಾರಿ ಕ್ಷಮೆ ಕೇಳಿದ ಪ್ರಸಂಗ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವದಲ್ಲಿ ಈ ವಿವಾದ ನಡೆದಿದೆ. ಮೊನ್ನೆ ಗಣಪತಿ ಮೂರ್ತಿ ವಿಸರ್ಜನೆ ವೇಳೆ ವೈಭವದ ಶೋಭಾಯಾತ್ರೆ ನಡೆದಿತ್ತು.
ಮೆರವಣಿಗೆಯಲ್ಲಿ ಟ್ಯಾಬ್ಲೋ, ವಿವಿಧ ವೇಷಗಳಿದ್ದವು. ಸ್ಥಳೀಯ ಶರತ್ ಎಂಬುವರು ದೈವದ ಪಾತ್ರಿಯ ವೇಷ ಹಾಕಿದ್ದಾರೆ. ಆವೇಷ ಬಂದವರಂತೆ ನಟಿಸಿ, ದೈವದ ನುಡಿಕೊಡುವವರಂತೆ ಮಾತನಾಡಿ ಸ್ಥಳದಲ್ಲಿದ್ದವರನ್ನು ರಂಜಿಸಿದ್ದರು.
ಆ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಕರಾವಳಿಯಲ್ಲಿ ಭೂತಾರಾಧನೆಯಲ್ಲಿ ದೈವಪಾತ್ರಿಗೆ ಮಹತ್ವದ ಸ್ಥಾನವಿದೆ. ಈ ರೀತಿ ಅಣಕ ಮಾಡಿರುವುದರಿಂದ ಹಿಂದೂ ಧಾರ್ಮಿಕತೆಗೆ ಧಕ್ಕೆ ಬರುತ್ತದೆ ಎಂಬುದು ಒಂದು ವರ್ಗದ ಆಕ್ಷೇಪವಾಗಿತ್ತು.
ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣಾ ವೇದಿಕೆ ಪ್ರಮುಖರು ವೇಷಧಾರಿ ಶರತ್ ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡದ್ದೂ ಆಯಿತು.
ಮೈಸೂರಿನಲ್ಲಿ ಗಣಪನ ಜೊತೆ ನಿಂತ ಮೋದಿ, ಷಾ, ಪಿ.ವಿ. ಸಿಂಧು!
ದೈವಪಾತ್ರಿಯ ಪಾತ್ರಧಾರಿ ಶರತ್ ಕೊನೆಗೂ ಕ್ಷಮೆ ಕೇಳಿದ್ದಾರೆ. ಮೆರವಣಿಗೆ, ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ದೈವ, ದೇವರನ್ನು ವೇದಿಕೆಗೆ, ರಸ್ತೆಗೆ ತರಬಾರದೆಂದು ನಾಲ್ಕೈದು ವರ್ಷಗಳ ಹಿಂದೆ ಕರಾವಳಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಕೋಟ್ಯಂತರ ಜನರ ನಂಬಿಕೆಯನ್ನು ಅಣಕ ಮಾಡಬಾರದು ಎಂಬ ಕೂಗು ಈಗ ಮತ್ತೆ ಕೇಳಿಬಂದಿದೆ.