ಉಡುಪಿಯಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಟ್ರೀ ಟೋಡ್ ಕಪ್ಪೆ ಪ್ರಬೇಧ ಪತ್ತೆ
ಉಡುಪಿ, ಜುಲೈ 3: ಅಳಿವಿನಂಚಿನಲ್ಲಿರುವ ಕಪ್ಪೆ ಪ್ರಬೇಧವೊಂದು ಪತ್ತೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ 'ಮಲಬಾರ್ ಟ್ರೀ ಟೋಡ್' ಕಪ್ಪೆ ಪ್ರಬೇಧವನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಪತ್ತೆಹಚ್ಚಲಾಗಿದೆ.
ಮಲಬಾರ್ ಟ್ರೀ ಟೋಡ್ ಕಪ್ಪೆ ಪ್ರಬೇಧ ಅಳಿವಿನಂಚಿನಲ್ಲಿರುವ ಕಪ್ಪೆಯಾಗಿದೆ. ಇತ್ತೀಚೆಗೆ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಮಣ್ಣ ಪಾಪು ಮನೆ ಪರಿಸರದಲ್ಲಿ ಮೂರು ದಿನಗಳ ಕಾಲ ನಡೆದ 'ದಿ ಫ್ರಾಗ್ ವಾಕ್' ವೇಳೆಯಲ್ಲಿ ಇದು ಪತ್ತೆಯಾಗಿದೆ. ಮಣ್ಣಪಾಪು ಮನೆ ವತಿಯಿಂದ ಈ ಪರಿಸರದ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಗಳೂರು ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಡಿಸೈನ್ ಆಂಡ್ ಟೆಕ್ನಾಲಜಿಯ ಕಪ್ಪೆ ಸಂಶೋಧಕ ಮತ್ತು ಅಧ್ಯಾಪಕ ಡಾ.ಗುರುರಾಜ ಕೆ.ವಿ. ನೇತೃತ್ವದಲ್ಲಿ ಒಟ್ಟು 8 ಮಂದಿ ಕಪ್ಪೆಗಳ ಅಧ್ಯಯನ ನಡೆಸಿದ್ದರು.
ಮಂಚಿಕೆರೆಯಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಏಕೆ?
ಈ ವೇಳೆ ಮಲಬಾರ್ ಟ್ರೀ ಟೋಡ್ ಸಹಿತ ಒಟ್ಟು 14 ಪ್ರಭೇದಗಳ ಕಪ್ಪೆಗಳು ಪತ್ತೆಯಾಗಿದ್ದವು. ಈ ಮೂಲಕ ಈ ಪ್ರದೇಶವು ಕಪ್ಪೆಗಳಿಗೆ ಸೂಕ್ತವಾದ ಆವಾಸ ಸ್ಥಾನ ಎಂಬುದಾಗಿ ಕಂಡುಕೊಳ್ಳಲಾಗಿದೆ.
ಮಲಬಾರ್ ಟ್ರೀ ಟೋಡ್ ಕಪ್ಪೆ ಪ್ರಬೇಧವು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ಅಲ್ಲಿಯವರೆಗೆ ಕರ್ನಾಟಕದ ಯಾವ ಭಾಗದಲ್ಲೂ ಈ ಕಪ್ಪೆ ಕಂಡುಬಂದಿರುವ ಬಗ್ಗೆ ವರದಿಯಾಗಿರಲಿಲ್ಲ. ಮರದಲ್ಲಿ ವಾಸ ಮಾಡುವ ಅತ್ಯಂತ ವಿಶಿಷ್ಟ ಜೀವನ ಶೈಲಿ ಇರುವ ಈ ಕಪ್ಪೆ ಪ್ರಭೇದದ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.
ಮಂಚಿಕೆರೆಯಲ್ಲಿ ಬಿರುಕು ಬಿಟ್ಟ ಭೂಮಿ; ಜನರ ಆತಂಕ
ಮಲಬಾರ್ ಟ್ರೀ ಟೋಡ್ ಪ್ರಭೇದದ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಯನ್ನು ಆಕರ್ಷಿಸಿ ಕೂಡುವುದಕ್ಕಾಗಿ ಒಟ್ಟಿಗೆ ಸೇರಿ ಕೂಗುತ್ತವೆ. ಇದನ್ನು ಕೋರಸ್ ಕಾಲ್ (ಸಮೂಹ ಕೂಗು) ಎಂದು ಕರೆಯಲಾಗುತ್ತದೆ. ಒಂದು ಗಂಡು ಕಪ್ಪೆ ಕೂಗಲು ಪ್ರಾರಂಭಿಸಿದರೆ ಸುತ್ತಮುತ್ತಲು ಇರುವ ಸುಮಾರು ಐದಾರು ಗಂಡು ಕಪ್ಪೆಗಳು ಕೂಡ ಸಮೂಹವಾಗಿ ಕೂಗಲು ಪ್ರಾರಂಭಿಸುತ್ತವೆ. ಇದರಲ್ಲಿ ಗಟ್ಟಿಯಾಗಿ ಕೂಗುವ ಮತ್ತು ಬಲಿಷ್ಠವಾಗಿರುವ ಕಪ್ಪೆಯೊಂದಿಗೆ ಹೆಣ್ಣು ಕಪ್ಪೆ ಕೂಡಿಕೊಳ್ಳುತ್ತದೆ. ನಂತರ ಹೆಣ್ಣು ಕಪ್ಪೆ ಮರದಿಂದ ಕೆಳಗೆ ಇಳಿದು ನೀರಿನಲ್ಲಿ ಮೊಟ್ಟೆ ಇಡುತ್ತದೆ.
ಗಾಳಿಬೀಡು, ವಣಚ್ಚಲ್ ಬೆಟ್ಟದಲ್ಲಿ ಭಾರೀ ಬಿರುಕು, ಭೂಮಿ ಕುಸಿತ
ಕೆಲವು ಬಾರಿ ಮರದ ಪೊಟರೆಯೊಳಗೆ ನಿಂತ ನೀರಲ್ಲೂ ಈ ಕಪ್ಪೆ ಮೊಟ್ಟೆ ಇಡುತ್ತದೆ. ಈ ಕಪ್ಪೆ ಮಳೆಗಾಲದ ಆರಂಭದಲ್ಲೇ ಕೂಡಿಕೊಂಡು ಮೊಟ್ಟೆಗಳನ್ನು ಇಡುತ್ತದೆ. ಮಳೆಗಾಲದ ಮೂರು ವಾರಗಳ ಬಳಿಕ, ಅಂದರೆ ಜೂನ್ ಅಂತ್ಯದಲ್ಲಿ ಈ ಕಪ್ಪೆ ಕಾಣಲು ಸಿಗುವುದಿಲ್ಲ. ಮೊಟ್ಟೆ ಇಟ್ಟ ಬಳಿಕ ನಾಪತ್ತೆಯಾಗುವ ಈ ಕಪ್ಪೆ, ಆನಂತರ ಯಾರ ಕಣ್ಣಿಗೂ ಈವರೆಗೆ ಕಾಣಿಸಿಲ್ಲ. ಮೊಟ್ಟೆ ಇಟ್ಟ ಬಳಿಕ ಈ ಕಪ್ಪೆ ಮತ್ತೆ ವಾಪಸು ಮರದ ಮೇಲೆ ಹೋಗುತ್ತದೆಯೇ ಅಥವಾ ಬೇರೆ ಎಲ್ಲಿಯಾದರೂ ಬಚ್ಚಿಟ್ಟುಕೊಳ್ಳು ತ್ತದೆಯೇ ಎಂಬುದು ಈವರೆಗೆ ತಿಳಿದುಬಂದಿಲ್ಲ. ಈ ನಿಗೂಢತೆ ಬಗ್ಗೆ ಈಗ ಅಧ್ಯಯನ ನಡೆಯುತ್ತಿದೆ.