ಕುಕ್ಕೆ ದೇಗುಲದ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಉಡುಪಿ ಮಾಧ್ವ ಬ್ರಾಹ್ಮಣ ಸಂಘ
ಉಡುಪಿ, ಆಗಸ್ಟ್.10: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಉಡುಪಿಯ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣರ ಸಂಘ ಸಿಡಿದೆದ್ದಿದೆ. ಕುಕ್ಕೆ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಸುಬ್ರಹ್ಮಣ್ಯ ಮಠದ ವಿರುದ್ಧ ಅಲ್ಲಿನ ದೇವಸ್ಥಾನದ ಆಡಳಿತ ಮಂಡಳಿ ಅಪಪ್ರಚಾರ ಮಾಡುತ್ತಿದೆ ಎಂಬುದು ಉಡುಪಿಯ ಮಾಧ್ವ ಬ್ರಾಹ್ಮಣ ಸಂಘ ದೂರಿದೆ.
ಜಗದ್ಗುರು ಮಧ್ವಚಾರ್ಯರಿಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಸಂಬಂಧವಿದೆ. ದೇವಸ್ಥಾನದಲ್ಲಿ ಮಾತ್ರ ಸರ್ಪಸಂಸ್ಕಾರ, ಆಶ್ಲೇಷ ಬಲಿ ಮಾಡಿಸಿದ್ರೆ ಅದರ ಫಲ ಸಿಗುತ್ತದೆ. ಸುಬ್ರಹ್ಮಣ್ಯ ಮಠದಲ್ಲಿ ಪೂಜೆ ಪುನಸ್ಕಾರ ಮಾಡಿದ್ರೆ ಅದು ದೇವರಿಗೆ ಸಲ್ಲುವುದಿಲ್ಲ ಅಂತ ದೇವಸ್ಥಾನದ ಆಡಳಿತ ಮಂಡಳಿ ಮಠದ ವಿರುದ್ಧ ಅಪ ಪ್ರಚಾರ ಮಾಡುತ್ತದೆ ಎಂಬುದು ಬ್ರಾಹ್ಮಣ ಸಂಘದ ಆರೋಪ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿದ ಗೋಕಳ್ಳರು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮೂಹಿಕ ಪೂಜೆಗಳಾಗುತ್ತವೆ. ವೈಯಕ್ತಿಕವಾಗಿ ಯಾವುದೇ ಸೇವೆ ನಡೆಯುವುದಿಲ್ಲ. ಹಾಗಾಗಿ ಪಕ್ಕದಲ್ಲೇ ಇರುವ ಮಠದಲ್ಲಿ ವೈಯಕ್ತಿಕವಾಗಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಸೇವೆ ಕೊಡಲು ಇಚ್ಛಿಸುವವರು ಮಠದಲ್ಲಿ ಸೇವೆ ಕೊಡುತ್ತಾರೆ.
ಮಠದಲ್ಲೇ ಸೇವೆ ಮಾಡಿಸಿ ಅಂತ ಸುಬ್ರಹ್ಮಣ್ಯ ಸ್ವಾಮೀಜಿಯಿಂದ ಭಕ್ತರ ಮೇಲೆ ಯಾವುದೇ ಒತ್ತಡಗಳು ಆಗುತ್ತಿಲ್ಲ. ಹಾಗಾಗಿ ದೇವಸ್ಥಾನ ಮಠದ ವಿರುದ್ಧ ಕರಪತ್ರ, ಬ್ಯಾನರ್ ಹಂಚುವುದು ಯಾಕೆ ಎಂದು ಸಂಘ ಪ್ರಶ್ನೆ ಮಾಡಿದೆ.
ಕುಕ್ಕೆ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಈ ವಿವಾದದ ಬಗ್ಗೆ ಸರಕಾರ ಮಧ್ಯಪ್ರವೇಶ ಮಾಡಬೇಕು. ಸುಬ್ರಹ್ಮಣ್ಯ ಮಠಕ್ಕೆ, ಪಕ್ಕದಲ್ಲೇ ಇರುವ ಸುಬ್ರಮಣ್ಯ ದೇವಸ್ಥಾನದವರು ತೊಂದರೆ ಮಾಡಬಾರದು ಎಂದು ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಘ ಒತ್ತಾಯಿಸಿದೆ. ಸಮಸ್ಯೆ ಮುಂದುವರೆಸಿದಲ್ಲಿ ಭಕ್ತರೆಲ್ಲ ಸೇರಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.