ಉಡುಪಿಯ ಶ್ರೀಕೃಷ್ಣ ಮಠದದಲ್ಲಿ ಮಡೆಸ್ನಾನದ ಬದಲಿಗೆ ಎಡೆಸ್ನಾನ
ಮಡೆಸ್ನಾಕ್ಕೆ ಸುಪ್ರೀಕೋರ್ಟ್ ನಿಷೇಧ ಹೇರಿರುವ ಹಿನ್ನಲೆಯಲ್ಲಿ ಸೋಮವಾರ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಭಕ್ತರು ಮಡೆಸ್ನಾನ ಬದಲಿಗೆ ಎಡೆಸ್ನಾನ ಮಾಡಿ ಹರಕೆ ತೀರಿಸದರು.
ಉಡುಪಿ, ಡಿಸೆಂಬರ್. 06 : ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ ಎದುರು ಷಷ್ಟಿ ಅಂಗವಾಗಿ ಮಡೆಸ್ನಾನದ ಬದಲು ಮೊದಲ ಬಾರಿಗೆ ಎಡೆಸ್ನಾನ ಸೋಮವಾರ ನಡೆಯಿತು.
ಈಗಾಗಲೇ ಸುಪ್ರೀಂಕೋರ್ಟ್ ಮಡೆಸ್ನಾನ ಮಾಡಬಾರದೆಂದು ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಕೃಷ್ಣ ಮಠದಲ್ಲಿ ಮೊದಲ ಬಾರಿಗೆ ಭಕ್ತರು ಎಡೆಸ್ನಾನ ಮಾಡಿ ಹರಕೆ ತೀರಿಸಿದರು.
ಇಲ್ಲಿಯವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಡೆಯುತ್ತಿದ್ದ ಮಡೆಸ್ನಾನಕ್ಕೆ ಸಂಬಂಧಿಸಿ ನ್ಯಾಯಾಲಯದ ತೀರ್ಪಿನ ಹಿನ್ನಲೆಯಲ್ಲಿ ಪರ್ಯಾಯ ಪೇಜಾವರ ಶ್ರೀ ಮಡೆಸ್ನಾನದ ಬದಲು ಎಡೆಸ್ನಾನದ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ 500 ವರ್ಷಗಳ ಹಿಂದಿನ ಸಂಪ್ರದಾಯವನ್ನು ಮುರಿದಿದ್ದಾರೆ.
ಮಡೆಸ್ನಾನದ ಬಗ್ಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಪೇಜಾವರ ಶ್ರೀಗಳು ತಮ್ಮದೇ ಆಡಳಿತಕ್ಕೆ ಒಳಪಟ್ಟ ಮುಚ್ಲಕೋಡು ಸುಬ್ರಮಣ್ಯ ದೇವಸ್ಥಾನದಲ್ಲಿ ಎಡೆಸ್ನಾನವನ್ನು ನಡೆಸಿ ಹೊಸ ಇತಿಹಾಸವನ್ನು ಬರೆದಿದ್ದಾರೆ.
ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯದ ಅವಧಿಯಲ್ಲಿ ಮಡೆಸ್ನಾನವನ್ನು ನಿಲ್ಲಿಸಿ ಎಡೆಸ್ನಾನವನ್ನು ಆರಂಭಿಸುವುದಾಗಿ ಶ್ರೀಗಳು ಹೇಳಿದ್ದರು. ಅಂತೆಯೇ ಶ್ರೀಗಳು ಹೇಳಿದಂತೆ ನಡೆದುಕೊಂಡು ಎಡೆಸ್ನಾನವನ್ನು ಆರಂಭಿಸಿದ್ದಾರೆ.
ಬಹಳಷ್ಟು ವರ್ಷಗಳಿಂದ ತೀವ್ರ ವಿವಾದ ಸೃಷ್ಟಿಸಿದ್ದ ಮಡೆಸ್ನಾನ ಪರಿಕಲ್ಪನೆಗೆ ಪೇಜಾವರ ಶ್ರೀಗಳು ಇತಿಶ್ರೀ ಹಾಡಿದ್ದಾರೆ.
ಸುಬ್ರಹ್ಮಣ್ಯ ಗುಡಿ ಎದುರು ದೇವರಿಗೆ ಬಾಳೆ ಎಲೆಯಲ್ಲಿ ವಿಶೇಷ ಪ್ರಸಾದವಿಟ್ಟು ಗುಡಿ ಸುತ್ತ 35 ಬಾಳೆ ಎಲೆಯಲ್ಲಿ ಪಲ್ಯ, ಪಾಯಸ, ಮೈಸೂರು ಪಾಕ್, ಅನ್ನ ಬಡಿಸಿ ವಾದ್ಯ ಘೋಷದ ನಡುವೆ ಪರ್ಯಾಯ ಪೇಜಾವರ ಶ್ರೀಪಾದರ ಉಪಸ್ಥಿತಿಯಲ್ಲಿ ಪೂಜೆ ನಡೆದು ಪ್ರತಿ ಬಾಳೆಗೆ ಪೂಜಾ ಪ್ರಸಾದವಾಗಿ ಸಿಂಗಾರ ಹೂ ಹಾಕಲಾಯಿತು.
ನಂತರ ಉರುಳು ಸೇವೆ ಬಳಿಕ ದೇವರ ಪ್ರಸಾದವನ್ನು ಗೋವುಗಳಿಗೆ ನೀಡಲಾಯಿತು. ಎಂಜಲು ಎಲೆಗಿಂತ ದೇವರ ಪ್ರಸಾದ ಹೆಚ್ಚು ಪವಿತ್ರ. ಕೃಷ್ಣ ಮಠದಲ್ಲಿ ಎಡೆಸ್ನಾನ ಆರಂಭವಾದ ಕಾರಣ ಹರಕೆ ತೀರಿಸುವವವರ ಸಂಖ್ಯೆಯೂ ಕಡಿಮೆಯಾಗಿದೆ.
ಬೆರಳೆಣಿಕೆಯಷ್ಟು ಮಂದಿ ದೇವರ ಪ್ರಸಾದದ ಮೇಲೆ ಹೊರಳಾಡಿ ಹರಕೆ ತೀರಿಸಿದರು. ಏನೇ ಇರಲಿ ಇಲ್ಲಿಯವರೆಗೆ ಮಾಡಿದ ಮಡೆಸ್ನಾನಕ್ಕೆ ಪೂರ್ಣ ವಿರಾಮ ಇಟ್ಟ ಹಾಗೆ ಆಗಿದೆ.