'ಲಿಂಗಾಯತ- ವೀರಶೈವ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರೇ'
ಉಡುಪಿ, ಜುಲೈ 5: ಶಿವನನ್ನು ಒಪ್ಪುವವರೆಲ್ಲ ಹಿಂದೂಗಳು. ಲಿಂಗ ಪೂಜೆ ಮಾಡುವವರೆಲ್ಲ ಹಿಂದೂಗಳು ಎಂದು ಪೇಜಾವರ ಶ್ರೀ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೀರಶೈವ- ಲಿಂಗಾಯತ ಧರ್ಮದ ಚರ್ಚೆ ಆಗುತ್ತಿದೆ. ಲಿಂಗಾಯತರು ವೀರಶೈವರು ಬೇರೆ ಬೇರೆ ಅಲ್ಲ. ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು ಎಂದು ಹೇಳಿದರು.
ವೀರಶೈವ ಲಿಂಗಾಯತರು ಒಟ್ಟಾದರೆ ಹೆಚ್ಚು ಶಕ್ತಿ ಬರುತ್ತದೆ. ಹಿಂದೂ ಧರ್ಮದ ಹಿತದೃಷ್ಟಿಯಿಂದ ಇವರು ಒಂದಾಗಬೇಕು ಎಂದು ಹೇಳಿದ ಅವರು, 1956ರ ನಂತರ ವೈಷ್ಣವ ಲಿಂಗಾಯತ ಸಮುದಾಯ ಅನ್ಯೋನ್ಯವಾಗಿದೆ. ಲಿಂಗಾಯತ- ಹಿಂದೂ ಧರ್ಮ ಬೇರೆ ಅಲ್ಲ. ಎಲ್ಲರೂ ನಮ್ಮದು ಬೇರೆ ಧರ್ಮ ಅಂದ್ರೆ ಹಿಂದೂಗಳು ಯಾರು? ಎಂದು ಪ್ರಶ್ನಿಸಿದರು.
ಮುಂಬೈಯಲ್ಲಿ ಪೇಜಾವರ ಶ್ರೀಗಳ ಸಹಾಯಕ್ಕೆ ಬಂದದ್ದು ಶರ್ಫುದ್ದೀನ್ ಮಲಿಕ್
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಎರಡೂ ಕಡೆಯ ಮಠಾಧಿಪತಿಗಳ ಜೊತೆ ಚರ್ಚೆಗೆ ಸಿದ್ಧ. ಸ್ನೇಹ ಸಂವಾದ ಮಾಡಲು ನಾನು ತಯಾರಾಗಿದ್ದೇನೆ. ಜುಲೈ 28ರ ಒಳಗೆ ದಿನಾಂಕ ನಿಗದಿ ಮಾಡಿ. ಎಲ್ಲಾ ಮಠಾಧಿಪತಿಗಳು, ರಾಜಕಾರಣಿಗಳು ಈ ಸಂವಾದದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದ ಅವರು ಶಾಂತ ವಾತಾವರಣದಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ಮಾಡೋಣ ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯ ಮೂಲಕ ಎಲ್ಲರಿಗೂ ನಾನು ಆಹ್ವಾನ ಕೊಡುತ್ತೇನೆ. ಚರ್ಚೆಗೆ ಒಪ್ಪಿದರೆ ನಾನು ವೇದಿಕೆ ಸಿದ್ಧ ಮಾಡುತ್ತೇನೆ. ಬೆಂಗಳೂರಿನಲ್ಲಿ ಚರ್ಚೆಗೆ ಸಮಯ ದಿನಾಂಕ ನಿಗದಿ ಮಾಡುತ್ತೇನೆ. ಸಂವಾದದಲ್ಲಿ ಆಕ್ರೋಶ, ವಿರೋಧಕ್ಕೆ ಅವಕಾಶ ಇರಬಾರದು ಎಂದು ಅವರು ಸ್ಪಷ್ಟಪಡಿಸಿದರು.