ಉಡುಪಿ ಜಿಲ್ಲೆಯಾದ್ಯಂತ ಗುಡುಗು, ಮಿಂಚಿನಿಂದ ಕೂಡಿದ ಜಡಿಮಳೆ
ಉಡುಪಿ, ಜನವರಿ 7: ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಕತ್ತಲಾವರಿಸುತ್ತಿದ್ದಂತೆ ಒಂದೇ ಸಮನೇ ಮಳೆ ಸುರಿಯಿತು. ಸಂಜೆ 6.30ರಿಂದ ಪ್ರಾರಂಭಗೊಂಡ ಮಳೆ, ರಾತ್ರಿ ತನಕ ಮುಂದುವರೆಯಿತು. ಗುಡುಗು, ಮಿಂಚು ಸಹಿತ ಬಂದ ದಿಢೀರ್ ಮಳೆಗೆ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿತು.
ಸಂಜೆ ವೇಳೆ ಜನರು ತಮ್ಮ ಕಚೇರಿಗಳಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಂತೆ, ದಿಢೀರೆಂದು ಮಳೆ ಸುರಿಯತೊಡಗಿತು. ಉಡುಪಿ, ಕುಂದಾಪುರ, ಬ್ರಹ್ಮಾವರ ಸಹಿತ ಹಲವೆಡೆ ಜಡಿಮಳೆ ಸುರಿಯುತ್ತಿದೆ.
ಮೇಲ್ಮೈ ಸುಳಿಗಾಳಿ: ಜನವರಿ 8ರವರೆಗೂ ರಾಜ್ಯದಲ್ಲಿ ಭಾರಿ ಮಳೆ
ಅಕಾಲಿಕ ಮಳೆಗೆ ವಾಹನ ಸವಾರರು, ಪಾದಚಾರಿಗಳು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸಾಕಷ್ಟು ಪರದಾಡಿದರು. ನಗರದ ತಗ್ಗು ಪ್ರದೇಶಗಳಲ್ಲಿ ಮಳೆಗಾಲವನ್ನು ನೆನಪಿಸುವಂತೆ ನೀರು ನಿಂತಿದೆ. ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಸಂಜೆಯ ಬಳಿಕ ಮಳೆ ನೀರಿನಿಂದಾಗಿ ವಾಹನ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತು.
ಅಕಾಲಿಕ ಮಳೆಯಿಂದಾಗಿ ಕರಾವಳಿಯ ಮುಖ್ಯ ಬೆಳೆ ಭತ್ತದ ಬೆಳೆಗೆ ಸಾಕಷ್ಟು ನಷ್ಟವುಂಟಾಗುವ ಸಾಧ್ಯತೆ ಇದೆ. ಗುಡುಗು ಮಿಂಚಿನಿಂದ ಕೂಡಿದ ಮಳೆ ಈಗಲೂ ಮುಂದುವರಿದಿದ್ದು, ಗುರುವಾರವೂ ಸಹ ಮಳೆಯಾಗುವ ಸಾಧ್ಯತೆ ಕಂಡು ಬರುತ್ತಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕ ಮಳೆ: ತುಂಬಿ ಹರಿದ ಮಲ್ಲಾಪುರ ಕೆರೆ
ಉಡುಪಿ ಜಿಲ್ಲೆಯಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆ ಹಿನ್ನಲೆಯಲ್ಲಿ, ಸಿಡಿಲು ಬಡಿದು ಹೋಟೆಲ್ ಬೆಂಕಿಗಾಹುತಿಯಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೋಟೆಲ್ ಸಿಡಿಲು ಹೊಡೆತಕ್ಕೆ ಹೋಟೆಲ್ ಸಂಪೂರ್ಣ ಭಸ್ಮವಾಗಿದೆ.
Recommended Video
ಸಪ್ತಮಿ ಹೋಟೆಲ್ ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸ ಪಟ್ಟಿದ್ದು, ಅಗ್ನಿ ಶಾಮಕದಳದ ಕಾರ್ಯಾಚರಣೆಯಿಂದ ಭಾರೀ ಅನಾಹತ ತಪ್ಪಿದಂತಾಗಿದೆ.