ಕರಾವಳಿಯಲ್ಲಿ ಭಾರೀ ಮಳೆ: ಪಾರ್ಥಿವ ಶರೀರ ದಹನಕ್ಕೂ ಪರದಾಟ
Recommended Video
ಉಡುಪಿ, ಜುಲೈ.08: ಕರಾವಳಿಯಲ್ಲಿ 48 ತಾಸುಗಳಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗುಪ್ರದೇಶಗಳಲ್ಲಿ ನೆರೆ ನೀರು ನಿಂತಿದ್ದು, ವಾರಾಂತ್ಯಕ್ಕೆ ಜನಜೀವನ ಇನ್ನೂ ಸುಧಾರಣೆಯಾಗಿಲ್ಲ.
ನೆರೆನೀರಿನ ಸಮಸ್ಯೆ ಪಾರ್ಥಿವ ಶರೀರದ ಸಾಗಾಟಕ್ಕೂ ಸಮಸ್ಯೆ ತಂದೊಡ್ಡಿದ್ದು, ಕುಟುಂಬವೊಂದು ಪಾರ್ಥಿವ ಶರೀರ ದಹನಕ್ಕೂ ಪರದಾಟ ನಡೆಸಿದ ಘಟನೆ ಭಾನುವಾರ ನಡೆದಿದೆ. ಇಂದು ಮುಂಜಾನೆ ಕಂಬಳಕಟ್ಟೆ ನಿವಾಸಿ ಸೇಸಿ ಪೂಜಾರ್ತಿ ಎಂಬುವವರು ಸಾವನ್ನಪ್ಪಿದ್ದರು.
ಧುಮ್ಮಿಕ್ಕಿ ಹರಿದ ಶಾಂಭವಿ ನದಿ: ಮಳೆಬಾಧಿತ ಪ್ರದೇಶಕ್ಕೆ ಭೇಟಿ ಕೊಟ್ಟ ಸಂಸದ ನಳಿನ್
ನೆರೆಯ ಕಾರಣದಿಂದಾಗಿ ಕಟಪಾಡಿ ಪಳ್ಳಿಗುಡ್ಡೆ ರುದ್ರ ಭೂಮಿಗೆ ಅವರ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಪರದಾಟ ನಡೆಸಬೇಕಾಯಿತು. ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಂತಹ ಅನೇಕ ಅವಾಂತರಗಳ ಸರಮಾಲೆಯೇ ಜಿಲ್ಲೆಯಾದ್ಯಂತ ನಡೆಯುತ್ತಿವೆ.
ಕಳೆದ ಎರಡು ದಿನಗಳಿಂದ ಭಾರೀ ಮಳೆ ಮುಂದುವರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ನೀರು ಆವರಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಗರ್ಭಿಣಿಯ ರಕ್ಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ 2 ದಿನದಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ಸ್ವರ್ಣಾ ನದಿ ಉಕ್ಕಿ ಹರಿಯುತ್ತಿದೆ. ಕಾರ್ಕಳ, ಉಡುಪಿಯಲ್ಲಿ ಸುರಿದ ಭಾರೀ ಮಳೆ ಪರಿಣಾಮ ಬಜೆ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದ್ದು, ಅಣೆಕಟ್ಟು ಮೇಲಿನಿಂದ ನೀರು ತುಂಬಿ ಹರಿಯುತ್ತಿದೆ.