ನಾಲ್ಕು ತಿಂಗಳಿನಿಂದ ಸತಾಯಿಸುತ್ತಿದ್ದ ಚಿರತೆ ಕೊನೆಗೂ ಸಿಕ್ಕಿಬಿತ್ತು
ಉಡುಪಿ, ನವೆಂಬರ್ 12: ಕಳೆದ ನಾಲ್ಕೈದು ತಿಂಗಳಿಂದ ಕೋಟ ಸಮೀಪದ ಮಧುವನ ಎಂಬಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದ ಗಂಡು ಚಿರತೆಯನ್ನು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳು ಕೊನೆಗೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಊರಿನಲ್ಲಿ ಕುರಿ, ಮೇಕೆ, ನಾಯಿಗಳೆಲ್ಲ ದಿಢೀರ್ ಮಾಯ!
ಕೋಟ ಸಮೀಪದ ಬನ್ನಾಡಿ, ವಡ್ಡರ್ಸೆ ಹಾಗೂ ಅಚ್ಲಾಡಿ ಎಂಬಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಚಿರತೆಯೊಂದು ಅಡ್ಡಾಡುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು. ಚಿರತೆಯನ್ನು ಹಿಡಿಯುವ ಸಲುವಾಗಿ ಅರಣ್ಯಾಧಿಕಾರಿಗಳು ಬೋನಿಟ್ಟಿದ್ದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಬೋನು ಇಟ್ಟ ಬಳಿಕ ಹತ್ತು ಹದಿನೈದು ದಿನಗಳ ಕಾಲ ಚಿರತೆ ಆ ಪ್ರದೇಶಕ್ಕೆ ಸುಳಿಯುತ್ತಿರಲಿಲ್ಲ.
ಇಂದು ಬೆಳಿಗ್ಗೆ ಸ್ಥಳೀಯ ಮಹಿಳೆಯೊಬ್ಬರು ಚಿರತೆಯನ್ನು ನೋಡಿದ್ದರು, ಭಯಗೊಂಡ ಚಿರತೆ ಸಮೀಪದ ಮೋರಿಯ ಒಳಗೆ ಹೋಗಿತ್ತು. ತಕ್ಷಣ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದ ಸ್ಥಳೀಯರು, ಚಿರತೆಗಾಗಿ ಕಾದು ಕುಳಿತಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮೋರಿಯ ಒಂದು ಬದಿಯಲ್ಲಿ ಹಲಗೆಗಳನ್ನು ಮುಚ್ಚಿ ಇನ್ನೊಂದು ಬದಿಯಲ್ಲಿ ಬಲೆ ಹಾಗೂ ಬೋನನ್ನು ಇಟ್ಟು ಸುಮಾರು ಆರು ವರ್ಷದ ಗಂಡು ಚಿರತೆಯನ್ನು ಬೋನಿನೊಳಗೆ ಬಂಧಿಸಿದ್ದಾರೆ. ಪಶು ವೈದ್ಯರ ನೇತೃತ್ವದಲ್ಲಿ ಚಿರತೆಯ ಆರೋಗ್ಯ ತಪಾಸಣೆ ನಡೆಸಿ, ಮೂಕಾಂಬಿಕ ಅಭಯಾರಣ್ಯದಲ್ಲಿ ಬಿಡಲಾಯಿತು.