ಉಡುಪಿಯಲ್ಲಿ ಬೃಹತ್ ಗಾತ್ರದ ತಿಮಿಂಗಲ ಪ್ರತ್ಯಕ್ಷ
ಉಡುಪಿ, ಏಪ್ರಿಲ್ 21: ಕೊರೊನಾ ವೈರಸ್ ಮಹಾಮಾರಿ ರೋಗದ ವಿರುದ್ಧ ಹೋರಾಡಲು ಇಡೀ ದೇಶವೇ ಲಾಕ್ ಡೌನ್ ಆದ ಪರಿಣಾಮವಾಗಿ ಎಲ್ಲಾ ಚಟುವಟಿಕೆಗಳಂತೆ ಮೀನುಗಾರಿಕಾ ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತಗೊಂಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬೋಟ್ ಗಳು ಕಡಲಿಗೆ ಇಳಿಯುತ್ತಿಲ್ಲ. ಹಾಗಾಗಿ ಯಾಂತ್ರಿಕ ಬೋಟ್ ಗಳ ಗೌಜು ಗದ್ದಲವಿಲ್ಲದೇ ಕಡಲು ಕೂಡ ಶಾಂತವಾಗಿದೆ. ಉಡುಪಿಯ ಪ್ರಶಾಂತ ಕಡಲಿನಲ್ಲಿ ಭಾರೀ ಗಾತ್ರದ ತಿಮಿಂಗಿಲ ಮೀನು ತೇಲಿಬಂದು ದಡ ಸೇರಿದೆ.
ಉಡುಪಿಯ ಕುತ್ಪಾಡಿ ಗ್ರಾಮದ ಪಡುಕೆರೆ ಕಡಲತೀರದಲ್ಲಿ ಪತ್ತೆಯಾದ ಮೀನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ತೀರ ಪ್ರದೇಶಕ್ಕೆ ಬಂದ ತಿಮಿಂಗಿಲಕ್ಕೆ ಈಜಲು ನೀರು ಸಾಲದೆ ಸಾವನ್ನಪ್ಪಿದೆ.
ಸುಮಾರು 25 ಅಡಿ ಉದ್ದದ ಈ ತಿಮಿಂಗಲ ಮೀನು ತೀರ ಪ್ರದೇಶಗಳಲ್ಲಿ ಕಾಣಸಿಗುವುದು ತುಂಬಾನೇ ಅಪರೂಪವೆಂದು ಹೇಳಬಹುದು. ತಿನ್ನಲು ಯೋಗ್ಯವಲ್ಲದ ಈ ತಿಮಿಂಗಿಲವನ್ನು, ವಿಲೇವಾರಿ ಮಾಡಲು ಸ್ಥಳೀಯ ಗ್ರಾಮ ಪಂಚಾಯತಿಯವರು ಹರಸಾಹಸವನ್ನೇ ಪಡಬೇಕಾಯಿತು. ಜೆಸಿಬಿಯನ್ನು ತಂದು ಕಡಲ ತೀರ ಪ್ರದೇಶದಲ್ಲಿ ಗುಂಡಿ ತೆಗೆದು ಈ ಬೃಹತ್ ಗಾತ್ರದ ತಿಮಿಂಗಿಲ ವನ್ನು ಹೂಳಲಾಯಿತು.