ಉಡುಪಿ ಬಳಿಕ ಕುಂದಾಪುರದಲ್ಲೂ ಕೋವಿಡ್ ಆಸ್ಪತ್ರೆ ಸೇವೆಗೆ ಸಿದ್ಧ
ಉಡುಪಿ, ಮೇ 22: ಕುಂದಾಪುರದ ಶ್ರೀ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಹೆರಿಗೆ ವಾರ್ಡ್ ಅನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈತನಕ ಉಡುಪಿ ನಗರದ ಹೃದಯ ಭಾಗದಲ್ಲಿ ಟಿ.ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಜಿಲ್ಲೆಯ ಕೊರೊನಾ ಪಾಸಿಟಿವ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು.
Recommended Video
ಹೊರ ರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವರಿಗೆಲ್ಲ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಕೊಲ್ಲೂರು ಕ್ಷೇತ್ರದಲ್ಲಿ ಕ್ವಾರಂಟೈನ್ ಕೇಂದ್ರಗಳು: ಸ್ಥಳೀಯರಲ್ಲಿ ಆತಂಕ!
ಸದ್ಯ ಆಸ್ಪತ್ರೆಯ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ವಾರ್ಡ್ ನಲ್ಲಿ ಹೆರಿಗೆಗಾಗಿ ಸೇರ್ಪಡೆಗೊಂಡು ಆರೈಕೆ ಪಡೆದುಕೊಳ್ಳುತ್ತಿರುವವರನ್ನು, ಈ ಹಿಂದೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ಕೊಡುಗೆಯಾಗಿ ನೀಡಿದ್ದ ಹಳೆಯ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಬೈಂದೂರು ಹಾಗೂ ಕುಂದಾಪುರ ಭಾಗದ ಜನರಿಗೆ ಪಾಸಿಟಿವ್ ಬಂದಾಗ ಈ ಆಸ್ಪತ್ರೆಯನ್ನು ಬಳಸಿಕೊಳ್ಳಲಾಗುತ್ತದೆ.
ಉಳಿದಂತೆ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೇಕಾಗುತ್ತದೆಯೋ ಅಂಥವರನ್ನು ಉಡುಪಿಯಲ್ಲಿನ ಟಿಎಂಎ ಪೈ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, 120 ಹಾಸಿಗೆಗಳುಳ್ಳ ಕೋವಿಡ್-19 ಆಸ್ಪತ್ರೆ ಇಂದಿನಿಂದಲೇ ಸೇವೆಗೆ ಸಜ್ಜುಗೊಂಡಿದೆ. ವೈದ್ಯರು ದಾದಿಯರು ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಲಿದ್ದು, ಹೆಚ್ಚುವರಿ ಸಿಬ್ಬಂದಿ ಬೇಕಾದಲ್ಲಿ ತಿಳಿಸುವಂತೆ ಈಗಾಗಲೇ ಆಸ್ಪತ್ರೆಯ ವೈದ್ಯಾಧಿಕಾರಿಯವರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಈ ನಡುವೆ ಉಡುಪಿಯಲ್ಲಿ ಇಂದು ಮುಂಬೈನಿಂದ ಬಂದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲ ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 50ಕ್ಕೇರಿದೆ.