ಶ್ರೀಕೃಷ್ಣ ಮಠದಲ್ಲಿ ನಮಗೂ ಪಾಲುಬೇಕು:ಕುರುಬ ಜನಾಂಗ
ಉಡುಪಿ, ಅ 19: ಉಡುಪಿಯಲ್ಲಿನ ಕನಕ ಗೋಪುರ, ಕನಕ ಮಂದಿರ, ಪಂಕ್ತಿ ಭೇಧ ಭೋಜನ ವಿವಾದ ಮತ್ತೆ ಭುಗಿಲೇಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಶುಕ್ರವಾರ (ಅ 18) ರಥಬೀದಿ ಆವರಣದಲ್ಲಿರುವ ಕನಕ ಮಂದಿರವನ್ನು ತಮ್ಮ ಸುಪರ್ದಿಗೆ ವಹಿಸಿ ಎಂದು ಕುರುಬ ಜನಾಂಗದ ನಾಯಕರು ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ಮಹಾನಗರ ಕುರುಬರ ಒಕ್ಕೂಟ ಮಠದ ವಿಚಾರದಲ್ಲಿ ಕೋರ್ಟ್ ಮೆಟ್ಟಲೇರಲು ಸಿದ್ದತೆ ಮಾಡಿಕೊಂಡಿದೆ. ಹಾಗೇ ಶ್ರೀಕೃಷ್ಣ ಮಠದಲ್ಲಿ ನಮಗೂ ಪಾಲು ಬೇಕೆಂದು ಒಕ್ಕೂಟ ಬೇಡಿಕೆಯಿಟ್ಟಿದೆ.
ಕನಕ ಗೋಪುರದ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಜನಾಂಗದ ಮುಖಂಡರು ಕನಕ ಮಂದಿರದಲ್ಲಿನ ಕನಕದಾಸರ ವಿಗ್ರಹವನ್ನು ಕಡೆಗಣಿಸಲಾಗಿದೆ. ಕನಕ ಮಂದಿರಕ್ಕೆ ಬೀಗ ಜಡಿದು ಅಷ್ಠ ಮಠಗಳು ಮಂದಿರವನ್ನು ಸಮರ್ಪಕವಾಗಿ ನೋಡಿ ಕೊಳ್ಳುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಉಡುಪಿ ಕೃಷ್ಣ ಮಠಕ್ಕೆ ವಿಶ್ವವ್ಯಾಪಿಯಾಗಿ ಈ ಮಟ್ಟಿನ ಹೆಸರು ಬರಲು ಕನಕದಾಸ ಎನ್ನುವ ಮಹಾನ್ ಸಂತ ಕಾರಣ ಎನ್ನುವುದನ್ನು ಉಡುಪಿಯ ಅಷ್ಠ ಮಠಗಳು ಮರೆತಿವೆ. ಹಾಗಾಗಿ ಕನಕ ಮಂದಿರದ ಜವಾಬ್ದಾರಿಯನ್ನು ನಮಗೆ ವಹಿಸಿ ಎಂದು ಕುರುಬ ಒಕ್ಕೂಟದ ಸದಸ್ಯ ಮತ್ತು ವಕೀಲರೂ ಆಗಿರುವ ಅಮೃತೇಶ್ವರ್ ಆಗ್ರಹಿಸಿದ್ದಾರೆ.
ಕನಕ ಮಂದಿರವನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪದ ಬಗ್ಗೆ ಶ್ರೀಕೃಷ್ಣ ಮಠ ಸ್ಪಷ್ಟನೆ ನೀಡಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೋದೆ ಮಠದ ವತಿಯಿಂದ ಕನಕನಿಗೆ ನಿತ್ಯವೂ ಪೂಜೆ ಸಲ್ಲುತ್ತಿದೆ. ಅಂಬಲಿ ನೈವೇದ್ಯಯಿಟ್ಟು ದಿನಂಪ್ರತಿ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಪರ್ಯಾಯ ಸೋದೆ ಮಠದ ಪರ ಮಧ್ವೇಶ್ ತಂತ್ರಿ ಹೇಳಿದ್ದಾರೆ.
ರಥಬೀದಿ ಆವರಣದಲ್ಲಿರುವ ಶಿರೂರು ಮಠದ ಎದುರು ಕನಕ ಮಂದಿರವಿದೆ. ಇದರ ಬಲಬದಿಯಲ್ಲಿ ಕನಕ ಗೋಪುರವಿದ್ದು, ರಥಬೀದಿಯಲ್ಲಿ ನಡೆಯುವ ಎಲ್ಲಾ ರಥೋತ್ಸವಗಳು ಕನಕ ಮಂದಿರವನ್ನು ಹಾದು ಕೊಂಡೇ ಹೋಗುವ ಪದ್ದತಿಯಿದೆ.
ಶ್ರೀಕೃಷ್ಣ ಮಠದಲ್ಲಿ ನಮಗೂ ಪಾಲು ಬೇಕು. ಮುಂದೆ ಓದಿ...
ಶ್ರೀಕೃಷ್ಣ ಮಠದಲ್ಲಿ ನಮಗೂ ಪಾಲು ಬೇಕು
ಕನಕದಾಸ ಶ್ರೀಕೃಷ್ಣನ ಆರಾಧ್ಯ ಭಕ್ತ. ಉಡುಪಿಯ ಶ್ರೀಕೃಷ್ಣ ಮಠ ಜಗದ್ವಿಖ್ಯಾತ ಗೊಳ್ಳಲು ಮಹಾನ್ ಸಂತ ಕನಕದಾಸರು ಕಾರಣ. ಕನಕ ಮಂಟಪದಲ್ಲಿ ನಿತ್ಯವೂ ಶಾಸ್ತ್ರೋಕ್ತ ರೀತಿಯ ಪೂಜೆ ನಡೆಯಬೇಕು. ಹಾಗಾಗಿ ಶ್ರೀಕೃಷ್ಣ ಮಠದಲ್ಲಿ ನಮಗೂ ಪಾಲು ಬೇಕು ಎಂದು ಕುರುಬ ಸಮುದಾಯದ ಮುಖಂಡರ ಬೇಡಿಕೆ ಇಟ್ಟಿದ್ದಾರೆ.
ಕಾಗಿನೆಲೆ ಮಠ
ಹಾವೇರಿಯಲ್ಲಿರುವ ಕಾಗಿನೆಲೆ ಕನಕ ಗುರು ಪೀಠವನ್ನೂ ಉಡುಪಿ ಶ್ರೀಕೃಷ್ಣ ಮಠಕ್ಕೆ ಸೇರಿಸಿ. ಉಡುಪಿಯಲ್ಲಿನ ಅಷ್ಠ ಮಠದ ಸಂಪ್ರದಾಯ ಇನ್ನು ಮುಂದೆ ನವ ಮಠವಾಗಿ ಶ್ರೀಕೃಷ್ಣನ ಪೂಜೆ ನಿರಂತರವಾಗಿ ಸಾಗಲಿ. ಅಷ್ಠ ಮಠಗಳಿರುವ ರಥಬೀದಿಯಲ್ಲಿ ಕಾಗಿನೆಲಯ ಶಾಖಾ ಮಠವೂ ನಿರ್ಮಾಣವಾಗಬೇಕು.
ಪಂಕ್ತಿ ಭೇಧ ಭೋಜನ
ಉಡುಪಿಯಲ್ಲಿನ ಪಂಕ್ತಿ ಭೇಧ ಭೋಜನಕ್ಕೆ ನಮ್ಮ ವಿರೋಧವಿದೆ. ಶ್ರೀಕೃಷ್ಣ ಮಠದಲ್ಲಿ ನಮಗೂ ಪಾಲು ನೀಡಿದರೆ ಈ ಅನಿಷ್ಠ ಪದ್ದತಿಗೆ ಮಂಗಳ ಹಾಡುತ್ತೇವೆ. ಕಾಗಿನೆಲೆ ಮಠಕ್ಕೆ ಇಲ್ಲಿ ಪೂಜ ಕೈಂಕರ್ಯದ ಅವಕಾಶ ಸಿಕ್ಕಿದರೆ ನಮ್ಮ ಪೂಜಾ ಅವಧಿಯಲ್ಲಿ ಈ ಪದ್ದತಿಯನ್ನು ಸ್ಥಗಿತಗೊಳಿಸುತ್ತೇವೆ.
ಕಾನೂನು ಕ್ರಮ
ಉಡುಪಿ ವಿವಾದ ಮುಂದಿನ ದಿನಗಳಲ್ಲಿ ಕೋರ್ಟ್ ಮೆಟ್ಟಲೇರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಕುರುಬ ಸಮುದಾಯದ ಪರ ನಮಗೂ ಶ್ರೀಕೃಷ್ಣ ಮಠದಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಮುಂದಿನ ವಾರ ಕೋರ್ಟಿನಲ್ಲಿ ಮನವಿ ಸಲ್ಲಿಸಲಿದ್ದೇವೆ ಎಂದು ಕುರುಬ ಒಕ್ಕೂಟದ ಸದಸ್ಯ ಮತ್ತು ವಕೀಲ ರಾಜಶೇಖರ್ ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಸಿದ್ದರಾಮಯ್ಯ
ಮುಂದಿನ ವಾರ ಸಮುದಾಯದವರ ಜೊತೆ ಚರ್ಚಿಸಿ ಕೋರ್ಟಿಗೆ ಮನವಿ ಸಲ್ಲಿಸಲಿದ ನಂತರ ಸಮುದಾಯದ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಮನವಿ ಸಲ್ಲಿಸಲಿದ್ದೇವೆ. ಅದಾದ ನಂತರ ಮುಂದಿನ ಹೋರಾಟಕ್ಕೆ ರೂಪುರೇಷೆ ಸಿದ್ದಗೊಳಿಸಲಿದ್ದೇವೆ. ಕನಕ ಜಯಂತಿಯಂದು (ನ 20) ಉಡುಪಿಯಲ್ಲಿ ಮಹಾ ಸಮ್ಮೇಳನ ನಡೆಸಲಿದ್ದೇವೆ ಎಂದು ವಕೀಲರು ಹೇಳಿದ್ದಾರೆ.