ಸೌದಿಯಲ್ಲಿ ಬಂಧಿತನಾದ ಹರೀಶ್ ಬಂಗೇರಗೆ ಇನ್ನೂ ಬಿಡುಗಡೆ ಭಾಗ್ಯ ಇಲ್ಲ
ಉಡುಪಿ, ಫೆಬ್ರವರಿ 06: ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪೋಸ್ಟ್ ಹಾಕಿದ್ದ ಆರೋಪದಲ್ಲಿ ಸೌದಿ ಅರೇಬಿಯಾದ ದಮಾಮ್ ನಲ್ಲಿ ಬಂಧಿತನಾಗಿರುವ ಹರೀಶ್ ಬಂಗೇರ (32) ಕುರಿತು ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಲಭ್ಯವಾಗಿಲ್ಲ.
ಹರೀಶ್ ಬಂಗೇರ ಬಂಧನದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ರಾಷ್ಟ್ರದ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಕೂಡ, ಇದುವರೆಗೂ ಯಾವುದೇ ಉತ್ತರ ಬಂದಿಲ್ಲ.
ಸೌದಿ ಅರಸ ಹಾಗೂ ಮೆಕ್ಕಾ ಬಗ್ಗೆ ಅವಹೇಳನ: ಭಾರತೀಯನ ಬಂಧನ
ಕುಂದಾಪುರ ತಾಲೂಕಿನ ಬೀಜಾಡಿಯ ಗೋಯಡಿಬೆಟ್ಟು ನಿವಾಸಿಯಾಗಿರುವ ಹರೀಶ್ ಬಂಗೇರ, ಸೌದಿ ಅರೇಬಿಯಾದ ದಮಾಮ್ನಲ್ಲಿ ಏರ್ ಕಂಡಿಷನ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಫೇಸ್ಬುಕ್ನಲ್ಲಿ ಮಾನ ಹಾನಿಕರ ಸಂದೇಶ ಹಾಕಿದ ಆರೋಪದಲ್ಲಿ ೨೦೧೯ ಡಿಸೆಂಬರ್ ೨೦ ರಂದು ಹರೀಶ್ ಬಂಗೇರನನ್ನು ಬಂಧಿಸಲಾಗಿತ್ತು. ಸದ್ಯ ಕುಂದಾಪುರದಲ್ಲಿ ಹರೀಶ್ ಬಂಗೇರ ಪತ್ನಿ ಮತ್ತು ಮಗು ಹರೀಶ್ ಬಂಗೇರ ಬಿಡುಗಡೆಯ ಮಾಹಿತಿಗಾಗಿ ಕಾದು ಕುಳಿತಿದ್ದಾರೆ.