ಮಕ್ಕಳಿಗೆ ವಿಷವುಣಿಸಿ ಕೊಂದ ತಂದೆಗೆ ಕೋರ್ಟ್ ಕೊಟ್ಟ ತೀರ್ಪು ಏನು?
ಉಡುಪಿ, ಜನವರಿ 19: ಮಕ್ಕಳಿಬ್ಬರಿಗೆ ವಿಷ ಉಣಿಸಿ ಕೊಲೆ ಗೈದ್ದ ಆರೋಪಿ ತಂದೆಗೆ ಕುಂದಾಪುರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಎರಡು ವರ್ಷಗಳ ಹಿಂದೆ ಬೈಂದೂರು ಗಂಗನಾಡು ಎಂಬಲ್ಲಿ ತನ್ನ ಮಕ್ಕಳಿಬ್ಬರಿಗೆ ಶಂಕರನಾಯಾಯಣ ಎಂಬವರು ವಿಷ ಉಣಿಸಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಆರೋಪಿ ಶಂಕರನಾರಾಯಣ ಹೆಬ್ಬಾರ್ (48) ಅವರನ್ನು ಬಂಧಿಸಿತ್ತು. ಈ ಪ್ರಕರಣ ದ ಕುರಿತು ವಿಚಾರಣೆ ನಡೆಸಿದ್ದ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಶಂಕರನಾರಾಯಣ ಹೆಬ್ಬಾರ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
2016ರ ಅಕ್ಟೋಬರ್ 16ರಂದು ಶಂಕರನಾರಾಯಣ ಹೆಬ್ಬಾರ್ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆಯಲ್ಲಿ ಮಕ್ಕಳಾದ ಆಶ್ವಿನ್ ಕುಮಾರ್ ಹೆಬ್ಬಾರ್ ಹಾಗು ಐಶ್ವರ್ಯಾ ಲಕ್ಷ್ಮಿ ಹೆಬ್ಬಾರ್ ಮೃತಪಟ್ಟಿದ್ದರು. ಪತ್ನಿ ಮಹಾಲಕ್ಷ್ಮಿ ಹಾಗು ಶಂಕರನಾರಾಯಣ ಹೆಬ್ಬಾರ್ ಪ್ರಾಣಾಪಾಯ ದಿಂದ ಪಾರಾಗಿದ್ದರು.
ಶಂಕರನಾರಾಯಣ ಅವರ ಪ್ರೇಮ ಪ್ರಸಂಗವೇ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು. ಪತ್ನಿ, ಮಕ್ಕಳನ್ನು ತೊರೆದಿದ್ದ ಶಂಕರನಾರಾಯಣ ಹೆಬ್ಬಾರ್ ಪ್ರಿಯತಮೆಯ ಜತೆಗೆ ವಾಸಿಸುತ್ತಿದ್ದ.
ಆಕೆ ಶಂಕರನಾರಾಯಣ ಅವರಿಗೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೇಸತ್ತ ಆತ ಈ ಕೃತ್ಯ ಎಸಗಿದ್ದ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಕುಂದಾಪುರ ನ್ಯಾಯಾಲಯ ಜ. 3ರಂದು ಆರೋಪಿಯನ್ನು ಪ್ರಕರಣದ ದೋಷಿ ಎಂಬುದಾಗಿ ತೀರ್ಪು ನೀಡಿತ್ತು.