ಕುಂದಾಪುರದ ಬಸ್ಸಲ್ಲಿ ಹೃದಯಾಘಾತ ಪ್ರಕರಣ: ಡಿಸಿಗೆ ತಾಯಿ ಪತ್ರ
ಉಡುಪಿ, ಮಾರ್ಚ್ 16: ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಯಾಣದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಈಗ ಮತ್ತೊಂದು ಹೊಸ ತಿರುವು ಸಿಕ್ಕಿದೆ.
Recommended Video
ತನ್ನ ಮಗನನ್ನು ಕಳೆದುಕೊಂಡ ತಾಯಿಯು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಬರೆದಿರುವ ಪತ್ರ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಜಿಲ್ಲಾಧಿಕಾರಿಯು ಮಗನನ್ನು ಕಳೆದುಕೊಂಡ ತಾಯಿಯ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಬಸ್ ನಲ್ಲೇ ಹೃದಯಾಘಾತ; 22 ವರ್ಷದ ಯುವಕ ಸಾವು
ಸುಹಾಸ್ ನಮಗೆ ಇದ್ದ ಒಬ್ಬನೇ ಮಗ. ಇವನು ಮಾರ್ಚ್ 07 ರಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ. ಅಲ್ಲಿಯವರೆಗೂ ಇವನಿಗೆ ಹುಷಾರಿತ್ತು. ದಾರಿ ಮಧ್ಯೆ ಸುಸ್ತಾಗಿ 2 ಸಾರಿ ಎದೆ ನೋವು ಎಂದು ಹೇಳಿದ್ದಾನೆ. ಆದರೆ ದುರ್ಗಾಂಬಾ ಬಸ್ಸಿನವರು ನಿರ್ಲಕ್ಷ ಮಾಡಿದ್ದಾರೆ. ಇದರಿಂದ ನನ್ನ ಮಗನನ್ನು ಕಳೆದುಕೊಳ್ಳಬೇಕಾಯಿತು.'
ತಾಯಿ ಡಿಸಿಗೆ ಬರೆದ ಪತ್ರ ಹೀಗಿದೆ
"ಸರ್, ನಮಸ್ತೆ.. ಸುಹಾಸ್ ನಮಗೆ ಇದ್ದ ಒಬ್ಬನೇ ಮಗ. ಇವನು ಮಾರ್ಚ್ 07 ರಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ. ಅಲ್ಲಿಯವರೆಗೂ ಇವನಿಗೆ ಹುಷಾರಿತ್ತು. ದಾರಿ ಮಧ್ಯೆ ಸುಸ್ತಾಗಿ 2 ಸಾರಿ ಎದೆ ನೋವು ಎಂದು ಹೇಳಿದ್ದಾನೆ. ಆದರೆ ದುರ್ಗಾಂಬಾ ಬಸ್ಸಿನವರು ನಿರ್ಲಕ್ಷ ಮಾಡಿದ್ದಾರೆ. ಇದರಿಂದ ನನ್ನ ಮಗನನ್ನು ಕಳೆದುಕೊಳ್ಳಬೇಕಾಯಿತು.'
"ನನ್ನ ಮಗ ನಾಲ್ಕು ವರ್ಷದಿಂದ ಬೆಂಗಳೂರಿನಲ್ಲಿ ಎಂಜನಿಯರಿಂಗ್ ಓದುತ್ತಿದ್ದ. ಬಸ್ಸಿನಲ್ಲಿ ಹೋಗುವಾಗ ನಾನು ಮಧ್ಯರಾತ್ರಿ ಕಾಲ್ ಮಾಡಿದಾಗ ನನ್ನ ಮಗ ಕರೆ ಸ್ವೀಕರಿಸಲಿಲ್ಲ. ಹಾಗಾಗಿ ಟಿಕೆಟ್ ಬುಕ್ ಮಾಡಿದ ಕಚೇರಿಗೆ ಸತತ ಅರ್ಧ ಗಂಟೆ ಕಾಲ್ ಮಾಡಿದರೆ ಅವರು ಪ್ರತಿಕ್ರಿಯಿಸಿಲ್ಲ. ನಂತರ ಕರೆಗೆ ಉತ್ತರಿಸಿದ ಅವರು " ಬಸ್ ಬರುತ್ತಿದೆ' ಎಂದು ಜೋರಾಗಿ ಹೇಳಿ ಕರೆ ಕಟ್ ಮಾಡಿದರು.'
ಬೆಳಿಗ್ಗೆ ಕಾಲ್ ಮಾಡಿ ನಿಮ್ಮ ಮಗ ಮಾತಾಡ್ತಾ ಇಲ್ಲ ಎಂದರು
"ನಮ್ಮ ಮಗ ಕರೆ ಸ್ವೀಕರಿಸುತ್ತಿಲ್ಲ, ದಯವಿಟ್ಟು ಬಸ್ ಕಂಡಕ್ಟರ್ ನಂಬರ್ ಕೊಡಿ ಎಂದು ಮನವಿ ಮಾಡಿದರೂ ಯಾರೂ ಕೊಡಲಿಲ್ಲ. ಬೆಳಗಿನ ಜಾವ 4.30 ರಿಂದ ಪದೇ ಪದೇ ಕಾಲ್ ಮಡುತ್ತಲೇ ಇದ್ದೆ. ಬೆಳಿಗ್ಗೆ 6.30 ಕ್ಕೆ ಕಾಲ್ ರಿಸೀವ್ ಮಾಡಿದ ಸಿಬ್ಬಂದಿಯು, ಬಸ್ ಕೋಟೇಶ್ವರ ಹತ್ತಿರ ಬರುತ್ತಿದೆ ಎಂದಷ್ಟೆ ಹೇಳಿ ಕರೆ ಕಡಿತಗೊಳಿಸಿದರು. ಆ ಸಿಬ್ಬಂದಿ ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳುವ ತಾಳ್ಮೆಯೇ ಇರಲಿಲ್ಲ.'
ಬಸ್ಸಿನ ಹತ್ತಿರ ನಾನೇ ಹೋಗುತ್ತೇನೆ ಎಂದು ನಮ್ಮ ಪತಿ ಹೋದರು. ಪತಿ ಹೋದ 20 ನಿಮಿಷಕ್ಕೆ ಬೇರೊಂದು ಮೊಬೈಲ್ ನಿಂದ ಕಾಲ್ ಬಂತು. "ನಿಮ್ಮ ಮಗ ಮಾತಾಡ್ತಾ ಇಲ್ಲ' ಅಂತಾ ಹೇಳಿದರು. 7.49 ಕ್ಕೆ ಪತಿಗೆ ಈ ವಿಷಯ ತಿಳಿಸಿದೆ. ಬಳಿಕ ಕುಂದಾಪುರದ ಶಾಸ್ತ್ರೀ ಸರ್ಕಲ್ ಪಾರ್ಕ್ ಹತ್ತಿರ ಬಸ್ಸಿನಲ್ಲಿ ಮಗನನ್ನು ಹೆಣವಾಗಿ ಕಾಣಬೇಕಾಯಿತು. ಮಗನಿಗೆ ಹೃದಯಾಘಾತವಾಗಿರುವ ಸುದ್ದಿ ತಿಳಿಯಿತು.
ನಮ್ಮ ಜೀವ, ಜೀವನ, ಉಸಿರು ತೆಗೆದುಬಿಟ್ಟರು ಸರ್
"ಮಗ ದಾರಿ ಮಧ್ಯೆ ಎದೆನೋವು ಎಂದು 2 ಬಾರಿ ಹೇಳಿದಾಗ ಬಸ್ ಬಂಟ್ವಾಳದ ಹತ್ತಿರ ಇತ್ತಂತೆ. ಆಗಲೇ ಬಸ್ ಸಿಬ್ಬಂದಿ ಮಗನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ನಮಗೆ ಕರೆ ಮಾಡಿ ತಿಳಿಸಬಹುದಿತ್ತು. ಅದೂ ಆಗದಿದ್ದರೆ ನಮ್ಮ ಕರೆಯನ್ನಾದರೂ ಸ್ವೀಕರಿಸಬಹುದಿತ್ತು. ಸಿಬ್ಬಂದಿಯ ನಿರ್ಲಕ್ಷದಿಂದ ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ ಸರ್.'
ಮಗ ಹಟ್ಟಿಯಂಗಡಿ ಸ್ಕೂಲ್ ನಲ್ಲಿ ಓದಿದ್ದ. ಅಲ್ಲಿನ ಪ್ರಿನ್ಸಿಪಾಲ್ ಶರಣ್ ಅವರನ್ನೊಮ್ಮೆ ಮಗನ ಬಗ್ಗೆ ವಿಚಾರಿಸಿ ಸರ್, ತುಂಬಾ ಒಳ್ಳೆಯ ಹೆಸರು ತಗೊಂಡಿದ್ದ. ಇರುವ ಒಬ್ಬ ಮಗನನ್ನು ಕಳೆದುಕೊಂಡು ಹೆತ್ತ ಹೊಟ್ಟೆಗೆ ಬೆಂಕಿ ಇಟ್ಟುಬಿಟ್ಟರು ಸರ್, ಒಂದು ಜೀವ, ಜೀವನ, ನಮ್ಮ ಉಸಿರು ತೆಗೆದುಬಿಟ್ಟರು ಸರ್.'
ಏನು ಸಂದೇಶ ಕೊಡುತ್ತಿರೋ ನೀವೇ ಕೊಡಿ
"ನಾನು ನನ್ನ ಮಗನನ್ನು ಕಳೆದುಕೊಂಡಿದ್ದಾಗಿದೆ. ನನಗಾದ ಶಿಕ್ಷೆ ಬೇರೆ ಯಾವ ತಾಯಿಗೂ ಆಗುವುದು ಬೇಡ. ಅದಕ್ಕಾಗಿ ನಿಮ್ಮಲ್ಲಿ ಒಂದು ಮನವಿ. ಬಸ್ಸಿನವರಿಗೆ ಸರಿಯಾದ ಬುದ್ದಿ ಕಲಿಸಬೇಕು. ಅದು ನಿಮ್ಮಿಂದ ಸಾಧ್ಯ ಸರ್. ದಯವಿಟ್ಟು ಕ್ರಮ ಜರುಗಿಸಿ.'
ಹಣ ಕೊಟ್ಟಿರುತ್ತೇವೆ ಜೀವ, ಜೀವನ, ತಂದೆ ತಾಯಿ ಕಷ್ಟವೂ ಇರುತ್ತದೆ. 100, 200 ರೂ. ಹೆಚ್ಚಿಗೆ ತೆಗೆದುಕೊಳ್ಳಲಿ ಬೇಡ ಅನ್ನಲ್ಲ. ಆದರೆ ಹೀಗೆ ಮಾಡಿ ಜೀವ ತೆಗೆಯೋದು ಯಾವ ನ್ಯಾಯ ಸರ್.
ಎಲ್ಲಾ ಮುಗಿದ ಮೇಲೆ ಸಾರಿ ಕೇಳುತ್ತಾರೆ ಸರ್, ಎಷ್ಟು ಹೊಟ್ಟೆ ಉರಿಯುತ್ತದೆ. ಇರುವ ಒಬ್ಬನೇ ಮಗನನ್ನು ಕಳೆದುಕೊಂಡಿದ್ದೇವೆ. ಸಾಲ ಮಾಡಿ ಆಸೆಯಿಂದ ಓದಿಸಿರುತ್ತೇವೆ. ಎಲ್ಲಾ ಬಸ್ಸಿನವರಿಗೂ ಏನು ಸಂದೇಶ ಕೊಡುತ್ತಿರೋ ಕೊಡಿ' ಎಂದು ಸುದೀರ್ಘವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ತಾಯಿಯ ಪತ್ರಕ್ಕೆ ಡಿಸಿ ಪ್ರತಿಕ್ರಿಯೆ
""ಪತ್ರ ಓದಿ ಮನಸ್ಸಿಗೆ ನೋವಾಯಿತು. ಈ ವಿಚಾರವಾಗಿ ಎಸ್ಪಿ ವಿಷ್ಣುವರ್ಧನ್ ಹಾಗೂ ಎಎಸ್ಪಿ ಕುಮಾರಚಂದ್ರ ಅವರ ಬಳಿ ಮಾತನಾಡಿದ್ದು, ತಕ್ಷಣ ನೊಂದ ತಾಯಿಯ ಬಳಿ ದೂರು ಸ್ವೀಕರಿಸುವಂತೆ ಸೂಚನೆ ನೀಡಿದ್ದೇನೆ. ತನಿಖೆಯಲ್ಲಿ ಬಸ್ ಸಿಬ್ಬಂದಿಯ ನಿರ್ಲಕ್ಷ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.''
""ಮಗನನ್ನು ಕಳೆದುಕೊಂಡ ತಾಯಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದೇನೆ. ಶೀಘ್ರ ಖಾಸಗಿ ಬಸ್ ಮಾಲೀಕರ ಸಭೆ ಕರೆದು, ಪ್ರಯಾಣಿಕರ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು. ಮುಂದೆ ಈ ರೀತಿಯ ಪ್ರಕರಣಗಳಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಲಾಗುವುದು'' ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.